ಒಂದಲ್ಲಾ ಎರಡಲ್ಲಾ ಚಿತ್ರದ ನಟನೆಯ ರಾಷ್ಟ್ರಪ್ರಶಸ್ತಿ ಪಡೆದಿದ್ದ ಮಾಸ್ಟರ್ ರೋಹಿತ್. ಭೀಕರ ಅಪಘಾತದಲ್ಲಿ ಮಾ.ರೋಹಿತ್​ಗೆ ಗಂಭೀರ ಗಾಯ. ಕಾಟೇರ ಚಿತ್ರದಲ್ಲಿ ನಟಿಸಿ ಮನಗೆದ್ದಿದ್ದ ಪ್ರತಿಭಾನ್ವಿತ ಬಾಲನಟ

ಕಾಟೇರ ಸಿನಿಮಾದಲ್ಲಿ ದರ್ಶನ್ ಜೊತೆಗೆ ಪುಟ್ಟರಾಜು ಪಾತ್ರ ಎಲ್ಲರ ಮನಸು ಗೆದ್ದಿದ್ದವನು ಬಾಲನಟ ರೋಹಿತ್​. ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಕೂಡ ಪಡೆದಿದ್ದ ಪ್ರತಿಭಾನ್ವಿತ ಮಾಸ್ಟರ್ ರೋಹಿತ್ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಾ ಇದ್ದಾನೆ. ಭಾನುವಾರ ಮಧ್ಯರಾತ್ರಿ ನಡೆದ ಅಪಘಾತ ಬಾಲನಟನ ಬದುಕಿಗೆ ಕೊಳ್ಳಿ ಇಟ್ಟಿದೆ. ಕಾಟೇರ ಸಿನಿಮಾ ನೋಡಿದವರಿಗೆಲ್ಲಾ ಪುಟ್ಟರಾಜುವಿನ ಪಾತ್ರ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ನಾಯಕನ ಜೊತೆ ಸದಾ ಇರೋ ಈ ಪುಟಾಣಿ ಭಂಟ ತನ್ನ ನಟನೆಯಿಂದ ಎಲ್ಲರಿಗೂ ಮೋಡಿ ಮಾಡಿದ್ದ. ಅಂಥಾ ದೈತ್ಯ ನಾಯಕನಟನ ಎದುರು ಈ ಪುಟಾಣಿ ಹೀರೋವನ್ನೇ ಮೀರಿಸುವಂತೆ ಪರ್ಫಾರ್ಮ್ ಮಾಡಿದ್ದ.

Add Asianetnews Kannada as a Preferred SourcegooglePreferred

ಅಸಲಿಗೆ ಈ ಮಾಸ್ಟರ್​ ರೋಹಿತ್ ತನ್ನ ಮೊದಲ ಸಿನಿಮಾದಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪ್ರತಿಭಾನ್ವಿತ. ಸತ್ಯ ನಿರ್ದೇಶನದ ಒಂದಲ್ಲಾ ಎರಡಲ್ಲಾ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ರೋಹಿತ್​ಗೆ 2018ರ ಸಾಲಿನ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು.ಮಾಸ್ಟರ್ ರೋಹಿತ್​ಗೆ ಉಜ್ವಲ ಭವಿಷ್ಯ ಇದೆ ಅಂತಲೇ ಎಲ್ಲರೂ ಹೇಳಿದ್ದರು. ಆದರೆ ಭಾನುವಾರ ರಾತ್ರಿ ನಡೆದ ಒಂದು ಅಪಘಾತ ಈ ಪ್ರತಿಭಾನ್ವಿತನ ಬದುಕಿಗೆ ಕೊಳ್ಳಿ ಇಟ್ಟಿದೆ. ಭಾನುವಾರ ರಾತ್ರಿ ಮೈಸೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ತಾಯಿ ಜೊತೆಗೆ ತೆರಳಿದ್ದ ರೋಹಿತ್​ ಮರಳಿ ಬರುವಾಗ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಅಪಘಾತ ಸಂಭವಿಸಿದೆ.

24 ಗಂಟೆಗಳ ಕಾಲ ಕಾರಿನಲ್ಲಿ ಸ್ನೇಹಿತರ ಜೊತೆ ಲಾಕ್‌ ಆದ ವರುಣ್ ಆರಾಧ್ಯ

ರೋಹಿತ್ ಮತ್ತವರ ತಾಯಿ ಇದ್ದ ಕಾರ್​ಗೆ ಬಸ್ ಡಿಕ್ಕಿ ಹೊಡೆದಿದ್ದು ಕಾರ್ ನುಜ್ಜುಗುಜ್ಜಾಗಿ ಹೋಗಿದೆ. ಮಾಸ್ಟರ್ ರೋಹಿತ್ ದಂತದ ವಸುಡು ಕಟ್ ಆಗಿ, ತಲೆ ಬುರುಡೆಗೂ ಗಾಯಗಳಾಗಿವೆ. ರೋಹಿತ್ ತಾಯಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರೋಹಿತ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಾ ಇದ್ದು, ಈತ ಸಾವನ್ನ ಗೆದ್ದು ಬರಲಿ ಅಂತ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಪ್ರತಿಭಾನ್ವಿತ ಮಾಸ್ಟರ್ ರೋಹಿತ್ ಬೇಗ ಗುಣವಾಗಿ ಮತ್ತಷ್ಟು ಚಿತ್ರಗಳ ಮೂಲಕ, ಪಾತ್ರಗಳ ಮೂಲಕ ನಮ್ಮನ್ನು ರಂಜಿಸಲಿ ಅನ್ನೋದೇ ಚಿತ್ರಪ್ರಿಯರ ಹಾರೈಕೆ.