'ಮೊದಲ ಸಾರಿ ನವರ್ಸ್ ಆದೆ, ಉಪ್ಪಿ ಬಳಿ ಸಾಕಷ್ಟು ಕಲಿಯುವುದಿದೆ'
ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಂಭ್ರಮ/ ಬೆಳ್ಳಿತೆರೆಗೆ ಸುದೀಪ್ ಕಾಲಿಟ್ಟು 25 ವರ್ಷ/ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿ/ ಸಿನಿಪಯಣ ನೆನೆದ ಸುದೀಪ್
ಬೆಂಗಳೂರು(ಮಾ. 15) ನಾನೇ ನರ್ವಸ್ ಆದೆ. ಕನ್ನಡ ಚಿತ್ರಂಗದ ಕುಟುಂಬದಲ್ಲಿ ನನಗೊಂದು ಸ್ಥಾನ ಸಿಕ್ಕಿದೆ. ಕನ್ನಡ ಚಿತ್ರರಂಗ ಅಂಥ ಪುಸ್ತಕ ಬರೆದರೆ ಒಂದು ಹಾಳೆ ನನಗೆ ಸಿಗಲಿದೆ ಎನ್ನೋದಕ್ಕೆ ಖುಷಿಯಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದರು.
ಕಿಚ್ಚ ಸುದೀಪ್ 25 ನೇ ವಸಂತ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದೀಪ್ ಮನಬಿಚ್ಚಿ ಮಾತನಾಡಿದರು. ಹಿಟ್ ಮತ್ತು ಸಿನಿಮಾ ಒಂದು ಲೆಕ್ಕವಾದರೆ ಈ ಪ್ರಯಾಣದಲ್ಲಿ ಸಿಗುವ ನೆನಪುಗಳು ಇನ್ನೊಂದು ಲೆಕ್ಕ ಎಂದರು.
ನಾನು ಯಾರನ್ನಾದರೂ ಫಾಲೋ ಮಾಡಿದ್ದರೆ ಅದು ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು.. ಸಿನಿಮಾ ಪ್ರೀತಿಸುವುದನ್ನು ರವಿಚಂದ್ರನ್ ಅವರಿಂದ ಕಲಿತೆ, ಎನರ್ಜಿ ಅಂದ್ರೆ ಏನು ಎಂಬುದನ್ನು ಶಿವಣ್ಣ ಬಳಿ ಕಲಿತೆ.. ಉಪೇಂದ್ರ ಅವರ ಬಳಿ ಬಹಳ ಕಲಿಯುವುದಿದೆ. ನಾನು ಹೀರೋ ಆಗಲು ಪ್ರೇರಣೆ ನೀಡಿದ್ದೇ ಉಪೇಂದ್ರ ಎಂದು ಸ್ಮರಣೆ ಮಾಡಿಕೊಂಡರು.ನಿರ್ದೇಶನ ಮಾಡಲು ಸ್ಫೂರ್ತಿ ಕೊಟ್ಟವರು ಉಪೇಂದ್ರ ಎಂದರು.
ರಾಕ್ ಲೈನ್ ಅವರನ್ನು ಕಂಡರೆ ಹೊಟ್ಟೆಕಿಚ್ಚಿದೆ. ಯಾಕಂದ್ರೆ ಬೇರೆಯವರು ನನಗಿಂತ ಜಾಸ್ತಿ ಅವರನ್ನು ಪ್ರೀತಿಸುತ್ತಾರೆ. ನನ್ನ ಸಂಕಷ್ಟದ ಸಮಯದಲ್ಲಿ ಜತೆಯಾಗಿ ನಿಂತವರು ರಾಕ್ ಲೈನ್ ವೆಂಕಟೇಶ ಎಂಬುದನ್ನು ಸ್ಮರಿಸಿಕೊಂಡರು. ಎಲ್ಲಿವರೆಗೆ ನನಗೆ ಕತೆ ಬರೆಯಲಾಗುತ್ತದೆಯೋ ಅಲ್ಲಿವರೆಗೆ ಬಣ್ಣ ಹಚ್ಚುತ್ತೇನೆ ಎಂದರು.
ನೀವು ನಮ್ಮ ಪ್ಲಸ್ ಮಾತ್ರ ನೋಡಿರುತ್ತೀರಿ.. ಪ್ರತಿ ಕಲಾವಿದನಿಗೂ ಮೈನಸ್ ಇದ್ದೇ ಇರುತ್ತದೆ. ಎಲ್ಲಿವರೆಗೂ ನಿರ್ದೇಶಕ ಸೇರಿ ಎಲ್ಲ ತಂತ್ರಜ್ಞರು ಸಹಕಾರ ನೀಡುತ್ತಾರೋ ಅಲ್ಲಿಯವರೆಗೆ ನಾಯಕ ನಟನಾಗಿ ಉಳಿಯುತ್ತಾನೆ ಎಂದು ಸುದೀಪ್ ಹೇಳಿದರು. ನಾನು ಕಪ್ಪು ಬಟ್ಟೆ ಹಾಕುವುದಕ್ಕೆ ಕಾರಣ ರವಿಚಂದ್ರನ್.. ಅದಕ್ಕೆ ಕಾರಣವನ್ನು ಅವರ ಬಳಿಯೇ ಕೇಳಿದ್ದೆ ಎಂದು ನೆನಪು ಮಾಡಿಕೊಂಡರು.
ಕೊರೋನಾ ಸಮಯದಲ್ಲಿ ಚಿತ್ರರಂಗ ಸಂಕಷ್ಟದಲ್ಲಿ ಇದ್ದಾಗ ನೆರವು ನೀಡಿದ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿದರು.
ಸಿಎಂ ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸುದೀಪ್ ಚಲನಚಿತ್ರ ಸಾಧನೆಯನ್ನು ಕೊಂಡಾಡಿದರು. ಸುದೀಪ್ ಸಿನಿಪಯಣವನ್ನು ಯಡಿಯೂರಪ್ಪ ವಿವರಿಸಿದರು.
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಈ ವೇದಿಕೆಯಲ್ಲಿ ಸೂರ್ಯ ಚಂದ್ರ ಎಲ್ಲರೂ ಕೂತಿದ್ದಾರೆ ರಾಹು ಕೇತು ಇಬ್ಬರು ಇದ್ದೆವೆ . ಶಿವಮೊಗ್ಗವನ್ನು ಹುಲಿ ಸಂರಕ್ಷಣಾ ಕ್ಷೇತ್ರವನ್ನಾಗಿ ಮಾಡಬೇಕು ಯಾಕಂದ್ರೆ ಇಲ್ಲಿ ಎರಡು ಹುಲಿಗಳಿವೆ. ಇದೆ ಒಂದು ರಾಜಹುಲಿ ಸಿಎಂ ಬಿಎಸ್ ಯಡಿಯೂರಪ್ಪ ಇನ್ನೊಬ್ಬರು ಹೆಬ್ಬುಲಿ ಕಿಚ್ಚ ಸುದೀಪ್.. ಸುದೀಪ್ ಅವರು ಕರ್ನಾಟಕ ಮಾತ್ರ ಅಲ್ಲ ಇಡೀ ಭಾರತದ ಹೆಮ್ಮೆ ಎಂದು ಗುಣಗಾನ ಮಾಡಿದರು. ಪೈರಸಿಯನ್ನು ತಡೆಯುವುದು ಎಲ್ಲರ ಜವಾಬ್ದಾರಿ ಎಂದರು.
ರವಿಚಂದ್ರನ್, ಡಾ. ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಹಿರಿಯ ಪತ್ರಕರ್ತ ರಂಗನಾಥ್, ಆರ್ಮುಗ ರವಿಶಂಕರ್, ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಾಜರಿದ್ದರು.