ಹ್ಯಾಪಿ ಬರ್ತ್ ಡೇ Kichcha Sudeep: ಹಾಫ್ ಸೆಂಚುರಿಗೆ ಇನ್ನೊಂದೇ ವರ್ಷ
ಕಿಚ್ಚ ಸುದೀಪ್ ಅಂದ್ರೆ ಆಕ್ಟಿಂಗ್, ಆಟಿಟ್ಯೂಡ್, ನೇರ ಮಾತು, ಒಳ್ಳೆತನಗಳ ಫುಲ್ ಪ್ಯಾಕೇಜ್. ಸುದೀಪ್ ಅವರಿಗೆ ಈಗ ನಲವತ್ತೊಂಭತ್ತು. ಇನ್ನೊಂದು ವರ್ಷ ಕಳೆದರೆ ಹಾಫ್ ಸೆಂಚುರಿ. ಸಿನಿಮಾ ರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಬಹಳ ಕಷ್ಟಪಟ್ಟಿದ್ದ ಸುದೀಪ್ ಕಷ್ಟವನ್ನೇ ಮೆಟ್ಟಿಲಾಗಿಸಿ ಈಗ ಈ ಲೆವೆಲ್ವರೆಗೂ ಬೆಳೆದಿದ್ದಾರೆ.
'ಸುದೀಪ್ ಇಲ್ಲಾಂದ್ರೆ ನನ್ನ ಅಮ್ಮನನ್ನು ನಾನು ಉಳಿಸಿಕೊಳ್ಳಲಾಗುತ್ತಿರಲಿಲ್ಲ..'
ಕಳೆದೆರಡು ವರ್ಷಗಳ ಹಿಂದೆ ಕೋವಿಡ್ ವೇಳೆ ಉತ್ತರ ಕರ್ನಾಟಕ ಮೂಲದ ನಟಿಯೊಬ್ಬರು ಹೀಗೆ ಉದ್ಗರಿಸಿದ್ದರು. ಕೋವಿಡ್ ಸಮಯವಾದ ಕಾರಣ ಅವರಿಗೆ ನಟನೆಗೆ ಅವಕಾಶ ಇರಲಿಲ್ಲ. ಅಮ್ಮ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಆದರೆ ಆ ಆಸ್ಪತ್ರೆಗೆ ದುಡ್ಡು ತುಂಬಿ ಅಮ್ಮನನ್ನು ಗುಣಪಡಿಸುವಷ್ಟು ಚೈತನ್ಯ ಅವರಲ್ಲಿರಲಿಲ್ಲ. ಕೆಲವು ವರ್ಷಗಳ ಹಿಂದೆ ಬಿಗ್ ಬಾಸ್ ಗೆ ಹೋಗಿದ್ದಾಗ ಅವರಿಗೆ ಸುದೀಪ್ ಪರಿಚಯವಾಗಿತ್ತು. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಅನ್ನೋ ಹಾಗೆ ಅದೇ ನೆವದಲ್ಲಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಮರು ಕ್ಷಣದಲ್ಲೇ ಅವರ ಅಮ್ಮನ ಚಿಕಿತ್ಸೆಗೆ ಬೇಕಾದ ಹಣ ಮಾತ್ರ ಅಲ್ಲ, ಆಸ್ಪತ್ರೆಯ ಇಡೀ ಖರ್ಚು ವೆಚ್ಚದ ಹೊಣೆಯನ್ನು ಸುದೀಪ್ ವಹಿಸಿಕೊಂಡರು.
ಆ ನಟಿಯೇನೋ ಈ ವಿಚಾರ ಹೇಳಿಕೊಂಡರು. ಆದರೆ ಬಹಳಷ್ಟು ಜನ ಸುದೀಪ್ ಅವರಿಂದ ಸಹಾಯ ಪಡೆದಿದ್ದಾರೆ. ಆದರೆ ಅದೆಲ್ಲೂ ಹೊರಗೆ ಬಂದಿಲ್ಲ. ಅದ್ಭುತ ಅನಿಸೋ ನಟನೆ ಜೊತೆಗೆ ಸುದೀಪ್ ಮಾಡಿರುವ ಇಂಥಾ ಕೆಲಸಗಳೇ ಅವರನ್ನು ಸ್ಯಾಂಡಲ್ವುಡ್ನಲ್ಲಿ (Sandalwood) ಬಹಳ ಎತ್ತರಕ್ಕೆ ಏರಿಸಿವೆ. ಅಭಿಮಾನಿಗಳು ಅವರನ್ನು ಎಷ್ಟು ಇಷ್ಟ ಪಡ್ತಿದ್ದಾರೆ ಅಂದರೆ ಅವರ ದೇವಸ್ಥಾನವನ್ನೇ (Temple) ಕಟ್ಟಿಸಿದ್ದಾರೆ. 'ಇದೆಲ್ಲ ನನಗೆ ನಿಜಕ್ಕೂ ಮುಜುಗರ ತರುತ್ತದೆ. ಆದರೆ ಅಭಿಮಾನಿಗಳ ಪ್ರೀತಿ ಎಷ್ಟು ನಿಷ್ಕಲ್ಮಶ ಆದದ್ದು ಅಂದರೆ ನಾನು ಇದನ್ನೆಲ್ಲ ನಿರಾಕರಿಸಿದರೂ ಅವರು ಬಿಡೋದಿಲ್ಲ. ನಾನವರಿಂದ ಈ ಮಟ್ಟಿಗೆ ಬೆಳೆಯೋದು ಸಾಧ್ಯವಾಯ್ತು' ಎಂದು ಒಂದು ಸಂದರ್ಶನದಲ್ಲಿ ಸುದೀಪ್ ಹೇಳಿದ್ದರು.
ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್ನಲ್ಲಿ ಅರಳಿತು ಕಿಚ್ಚ ಸುದೀಪ್ ಮರಳು ಶಿಲ್ಪ
ಇಂಥಾ ಸುದೀಪ್ ಇವತ್ತು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಸುದೀಪ್ಗೆ ನಾನಾ ಕಡೆಗಳಿಂದ ಬರ್ತ್ಡೇ ವಿಶ್ (Birthday Wish) ಬರುತ್ತಿದೆ. ವಿವಿಧ ಊರುಗಳಲ್ಲಿ ಸುದೀಪ್ ಫೋಟೋ ಹಾಗೂ ಕಟೌಟ್ ಹಾಕಿ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಸುದೀಪ್ ಹೆಸರಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಸುದೀಪ್ ಮನೆಯ ಮುಂದೆ ಮಧ್ಯರಾತ್ರಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಫ್ಯಾನ್ಸ್ ಸಂಭ್ರಮ ಮುಗಿಲುಮುಟ್ಟಿತ್ತು. ಕಳೆದ ಎರಡು ವರ್ಷಗಳಿಂದ ಕೊವಿಡ್ ಕಾಟ ಜೊರಾಗಿತ್ತು. ಈ ಕಾರಣದಿಂದ ಕಿಚ್ಚನ ಬರ್ತ್ಡೇ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಬರ್ತ್ಡೇ ಸೆಲೆಬ್ರೇಶನ್ (Birthday Celebration) ಬಹಳ ಜೋರಾಗಿ ನಡೆಯುತ್ತಿದೆ.
ಕಿಚ್ಚನ ಅಭಿಮಾನಿಗಳಿಗೆ ಹೆಮ್ಮೆಯ ಸುದ್ದಿ; ಸುದೀಪ್ ಸಾಧನೆಗೆ ಅಂಚೆ ಇಲಾಖೆಯಿಂದ 'ವಿಶೇಷ ಅಂಚೆ ಲಕೋಟೆ' ಗೌರವ
ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಕಿಚ್ಚ ಸುದೀಪ್ ಮನೆ ಇದೆ. ಮಧ್ಯರಾತ್ರಿ ಇಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ಸುದೀಪ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ (Cake) ಕತ್ತರಿಸಿ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಅಷ್ಟು ಹೊತ್ತಿನಲ್ಲೂ ಮನೆಯಿಂದ ಹೊರ ಬಂದ ಸುದೀಪ್ ತಮ್ಮ ಅಭಿಮಾನಿಗಳಿಗೆ ಕೈ ಮುಗಿದು ಧನ್ಯವಾದ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಹೊರ ಬರುತ್ತಿದ್ದಂತೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನೆಚ್ಚಿನ ನಾಯಕ ನಟನನ್ನು ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಾಚಣೆ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂಬ ಕಾರಣಕ್ಕೆ ಪೊಲೀಸರು ನಟನ ಮನೆಯ ಬಳಿ ಭಾರೀ ಭದ್ರತೆ ಕೈಗೊಂಡಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಬ್ಯಾರೆಕೇಡ್ ಅಳವಡಿಸಲಾಗಿತ್ತು. ಈ ವೇಳೆ ‘ವಿಕ್ರಾಂತ್ ರೋಣ’ ಚಿತ್ರದ ಹಾಡಿಗೆ ಅಭಿಮಾನಿಗಳು ಡ್ಯಾನ್ಸ್ ಮಾಡಿದ್ದು ಬರ್ತ್ ಡೇ ಖುಷಿ ಹೆಚ್ಚಿಸಿತ್ತು.
ಇಂದು ಸುದೀಪ್ ಜನ್ಮದಿನದ ಕಾರಣ ಅವರ ಹೊಸ ಚಿತ್ರಗಳ ಘೋಷಣೆಗೆ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಅವರ ವಿಕ್ರಾಂತ್ ರೋಣ ಚಿತ್ರ ಜೀ5ನಲ್ಲಿ ಇವತ್ತು ಪ್ರಸಾರವಾಗಲಿದೆ.
ಒಟ್ಟಾರೆ ಜಾಹೀರಾತು, ಸೀರಿಯಲ್, ರಿಲೀಸೇ ಆಗದ ಸಿನಿಮಾಗಳ ಮೂಲಕ ಆರಂಭದಲ್ಲಿ ಬಹಳ ಕಷ್ಟಪಟ್ಟಿದ್ದ ಸುದೀಪ್ ಇವತ್ತು ಏರಿರುವ ಎತ್ತರ ಎಲ್ಲ ಕಲಾವಿದರಿಗೂ ಸ್ಫೂರ್ತಿ. ನಿಜಕ್ಕೂ ಟ್ಯಾಲೆಂಟ್ ಇದ್ದರೆ ಇಂದಲ್ಲ ನಾಳೆ ಆತ ಸೂಪರ್ ಸ್ಟಾರ್ (Super Star) ಆಗಿಯೇ ಆಗುತ್ತಾನೆ ಅನ್ನೋದಕ್ಕೆ ಸುದೀಪ್ ಅವರೇ ಸಾಕ್ಷಿ. ಅವರಿಗೆ ಮತ್ತೊಂದು ಜನ್ಮದಿನದ ಶುಭ ಹಾರೈಕೆಗಳು.