ಮತ್ತೆ ಗರಿಗೆದರಿದ ಚಿತ್ರರಂಗ, ಸ್ಟಾರ್ ಸಿನಿಮಾ ಶೂಟಿಂಗ್ ಶುರು!
ಸೂರ್ಯ ಜಗತ್ತು ಸುತ್ತುತ್ತಿರಬೇಕು. ಚಿತ್ರರಂಗದಲ್ಲಿ ಶೂಟಿಂಗ್ ನಡೆಯುತ್ತಿರಬೇಕು. ಇಲ್ಲದಿದ್ದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ಅದಕ್ಕೆ ಸಾಕ್ಷಿ ಕಳೆದ ಕೆಲವು ತಿಂಗಳುಗಳು. ಶೂಟಿಂಗ್ ಇಲ್ಲದೆ ಇಡೀ ಚಿತ್ರರಂಗ ತತ್ತರಿಸಿತ್ತು. ಕಾರ್ಮಿಕರು, ಕಲಾವಿದರು, ತಂತ್ರಜ್ಞರು ನೋವಿನಲ್ಲಿ ದಿನದೂಡುವ ಸಂದರ್ಭ ಎದುರಾಗಿತ್ತು. ಕತ್ತಲೆ ಕಳೆದ ಮೇಲೆ ಬೆಳಕಾಗಲೇಬೇಕು. ಈಗ ಮತ್ತೆ ಬೆಳಕು ಕಾಣಿಸುತ್ತಿದೆ. ಸ್ಟಾರ್ ಸಿನಿಮಾ ಶೂಟಿಂಗ್ಗಳು ಶುರುವಾಗಿದೆ. ಚಿತ್ರರಂಗಕ್ಕೆ ಸೇರಿದವರ ಮುಖದಲ್ಲಿದ್ದ ಸಂಕಷ್ಟದ ಗೆರೆಗಳು ಸ್ವಲ್ಪವಾದರೂ ಕಡಿಮೆಯಾಗಿದೆ.
ವಿಕ್ರಾಂತ್ ರೋಣದಿಂದ ಚಿತ್ರರಂಗಕ್ಕೆ ಹೊಸ ಹುಮ್ಮಸ್ಸು
ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡಿಸ್ ಬಂದು ನೃತ್ಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಸುದೀಪ್ ಕೂಡ ಅದ್ದೂರಿ ಸೆಟ್ನಲ್ಲಿ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಆ ಸೆಟ್ ಹೇಗಿರುತ್ತದೆ ಎಂಬುದರ ಸ್ಯಾಂಪಲ್ ಫೋಟೋ ಇಲ್ಲಿದೆ.
ಸ್ಟಾರ್ ಸಿನಿಮಾಗಳ ಚಿತ್ರೀಕರಣ ಶುರುವಾದರೆ ಒಂದು ಫೋರ್ಸ್ ಬೇರೆ ಇರುತ್ತದೆ. ಒಂದು ಸಿನಿಮಾದಿಂದ ಸ್ಫೂರ್ತಿಗೊಂಡು ಮತ್ತೊಂದಷ್ಟು ಸಿನಿಮಾಗಳು ಶೂಟಿಂಗ್ ಅಖಾಡಕ್ಕೆ ಬರುತ್ತದೆ. ಚಿತ್ರರಂಗಕ್ಕೆ ಹೊಸ ಹುಮ್ಮಸ್ಸು ಬರಬೇಕಾದರೆ ಚಟುವಟಿಕೆ ನಡೆಯುವುದು ತುಂಬಾ ಮುಖ್ಯ. ಹಾಗಾಗಿ ಅನೂಪ್ ಭಂಡಾರಿ ನಿರ್ದೇಶನದ, ಜಾಕ್ ಮಂಜು ನಿರ್ಮಾಣದ ‘ವಿಕ್ರಾಂತ್ ರೋಣ’ ಹೊಸ ಉತ್ಸಾಹ ಒದಗಿಸಿದೆ.
ಹುರುಪು ಹೆಚ್ಚಿಸಿದ ಉಪೇಂದ್ರ ನಟನೆಯ ಲಗಾಮ್
ಕೆ.ಮಾದೇಶ ನಿರ್ದೇಶನದ ‘ಲಗಾಮ್’ ಸಿನಿಮಾದ ಶೂಟಿಂಗ್ ಶುರುವಾಗಿದೆ. ಉಪೇಂದ್ರ, ಹರಿಪ್ರಿಯಾ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಉಪೇಂದ್ರ ಅವರಂತೂ ಕತೆಯಿಂದ ಥ್ರಿಲ್ ಆಗಿದ್ದಾರೆ. ಎಂ.ಆರ್ ಗೌಡ ನಿರ್ಮಾಣದ ಈ ಸಿನಿಮಾದಲ್ಲಿ ಉಪೇಂದ್ರ ತನಿಖಾ ವರದಿಗಾರನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪತ್ರಿಕಾಗೋಷ್ಠಿ ಕೂಡ ಆಯೋಜಿಸಿದ್ದರು. ಲವಲವಿಕೆಯ ವಾತಾವರಣ ಇತ್ತು. ಇಡೀ ತಂಡದಲ್ಲಿ ಸಂತೋಷ ಇತ್ತು. ಕೆಲಸ ಕೊಡುವ ನೆಮ್ಮದಿ ಬೇರೆ ಎಲ್ಲೂ ಇಲ್ಲ ಅನ್ನುವುದನ್ನು ಲಗಾಮ್ ಚಿತ್ರತಂಡ ಸಾರುತ್ತಿತ್ತು. ಈ ಚಿತ್ರಕ್ಕೆ ಸಾಧುಕೋಕಿಲ ಪುತ್ರ ಸುರಾಗ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಶೋಭರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ದೃಶ್ಯಂ 2' ಚಿತ್ರದಲ್ಲಿ ಡಿಪ್ರಷನ್ಗೆ ಒಳಗಾದ ಮಗಳ ಪಾತ್ರದಲ್ಲಿ ಆರೋಹಿ ನಾರಾಯಣ್!ದೃಶ್ಯ 2ಗಾಗಿ ಬಂದ ರವಿಚಂದ್ರನ್, ಅನಂತ್ನಾಗ್
ದೃಶ್ಯ 2 ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ. ರವಿಚಂದ್ರನ್, ಅನಂತ್ನಾಗ್ರಂತಹ ನಟರೇ ಶೂಟಿಂಗ್ಗೆ ಬಂದಿದ್ದು ನೋಡಿ ಉಳಿದ ತಂಡಗಳೆಲ್ಲಾ ಚುರುಕಾಗಿವೆ. ಹಿರಿಯರು ತಾವೇ ಮುಂದೆ ಬಂದು ಹಾದಿ ತೋರಿಸಿದ್ದಾರೆ. ಚಿತ್ರರಂಗ ಖುಷಿಯ ಹಾದಿಗೆ ಹೊರಳಿದೆ.