‘ಇದು ನನ್ನ 50ನೇ ಸಿನಿಮಾ. ಸಂಖ್ಯೆ ವಿಚಾರದಲ್ಲಿ ಹಾಗೂ ಕತೆಯ ಭಾಗವಾಗಿ ಈ ಟೈಟಲ್‌ ಸೂಕ್ತ ಎನಿಸಿದೆ’ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು ನಿರ್ದೇಶಕ ದಿನೇಶ್‌ ಬಾಬು.

ಇತ್ತೀಚೆಗೆ ಮುಹೂರ್ತ ಮಾಡಿಕೊಂಡ ‘ಕಸ್ತೂರಿ ನಿವಾಸ’ ಚಿತ್ರದ ಕುರಿತು. ರಚಿತಾ ರಾಮ್‌ ಮುಖ್ಯಭೂಮಿಕೆಯಲ್ಲಿರುವ ಹೊಸ ಚಿತ್ರವಿದು. ಹೆಸರು ಘೋಷಣೆ ಬಳಿಕ ಚಿತ್ರದ ಟೈಟಲ್‌ ಬಗ್ಗೆ ಪರವಿರೋಧದ ಚರ್ಚೆಗಳು ನಡೆದು ‘ಕಸ್ತೂರಿ’ ಹೆಸರಿನಲ್ಲಿ ಚಿತ್ರ ಸೆಟ್ಟೇರಲಿರುವುದು ಹೊಸ ಸುದ್ದಿ.

Add Asianetnews Kannada as a Preferred SourcegooglePreferred

ರಚಿತಾ ರಾಮ್‌ ಡ್ರಗ್ಸ್‌ ಸೇವಿಸ್ತಾರಾ? ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ 

‘ಕಸ್ತೂರಿ ಎಂಬ ಹುಡುಗಿಯ ಮನೆಯಲ್ಲಿ ಸಂಭವಿಸುವ ಘಟನೆಗಳ ಸುತ್ತ ನಡೆಯುವ ಸಿನಿಮಾವಿದು. ಹಾರರ್‌, ಥ್ರಿಲ್ಲರ್‌, ಕಾಮಿಡಿ, ಎಮೋಷನ್‌ ಎಲ್ಲವೂ ಈ ಚಿತ್ರದಲ್ಲಿದೆ. ಚಿತ್ರಕ್ಕೆ ಹೊಸ ಟೈಟಲ್‌ ಇಡಬೇಕಿದೆ. ಅದರ ಹುಡುಕಾಟ ನಡೆಯುತ್ತಿದೆ. ಪಾತ್ರಗಳು ಹೆಚ್ಚಿವೆ. ಪಾತ್ರ, ಲೋಕೇಷನ್‌ ಮತ್ತು ಕತೆಯನ್ನು ದೃಷ್ಟಿಯಲ್ಲಿಟ್ಟು ಕಸ್ತೂರಿ ನಿವಾಸ ಎನ್ನುವ ಹೆಸರಿಟ್ಟಿದ್ದೆ. ಇದರ ಹಿಂದೆ ಬೇರೆ ಉದ್ದೇಶಗಳಿರಲಿಲ್ಲ. ನನಗೆ ಹಾಗೂ ನಮ್ಮ ಚಿತ್ರತಂಡಕ್ಕೆ ಅನೇಕರು ಪೋನ್‌ ಮಾಡಿ ಈ ಟೈಟಲ್‌ ಮರುಬಳಕೆ ಮಾಡಬೇಡಿ ಎಂದು ಮನವಿ ಮಾಡಿದ್ದರು. ಇನ್ನೂ ಕೆಲವರು ‘ಕಸ್ತೂರಿ ನಿವಾಸ’ ಕನ್ನಡ ಚಿತ್ರರಂಗದ ಕ್ಲಾಸಿಕ್‌ ಚಿತ್ರ. ಅದಕ್ಕೆ ಅಪಚಾರ ಮಾಡಬೇಡಿ ಎಂದರು. ಟೈಟಲ್‌ ಬಗ್ಗೆ ಇಂಥ ಗೊಂದಲಗಳನ್ನು ಮಾಡಿಕೊಳ್ಳಲು ನಮಗೂ ಇಷ್ಟವಿಲ್ಲ. ಹೀಗಾಗಿ ಸಿನಿಮಾದ ಟೈಟಲ್‌ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಸಬ್ಜೆಕ್ಟ್ಗೆ ಸೂಕ್ತವೆನಿಸುವಂತೆ ‘ಕಸ್ತೂರಿ’ ಎಂದಷ್ಟೇ ಟೈಟಲ್‌ ಇಡುವ ಬಗ್ಗೆಯೂ ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ದಿನೇಶ್‌ ಬಾಬು.

‘ಲಾಕ್‌ಡೌನ್‌ ವೇಳೆ ನಾನು ಕೇಳಿದ ಒಳ್ಳೆಯ ಕತೆಯ ಸಿನಿಮಾ ಇದು. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕಸ್ತೂರಿ. ಹೋಮ್ಲಿ ಲುಕ್‌ ಇರುವ ಪಾತ್ರ’ ಎಂಬುದು ರಚಿತಾ ರಾಮ್‌ ಮಾತುಗಳು. ಸ್ಕಂದ ಅಶೋಕ್‌, ಶ್ರುತಿ ಪ್ರಕಾಶ್‌, ರಂಗಾಯಣ ರಘು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಕಲೇಶಪುರ, ತೀರ್ಥಹಳ್ಳಿ, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. ರವೀಶ್‌ ಮತ್ತು ರುಬಿನ್‌ ರಾಜ್‌ ಈ ಚಿತ್ರದ ನಿರ್ಮಾಪಕರು.