Asianet Suvarna News Asianet Suvarna News

ದೊಡ್ಮನೆಯಲ್ಲಿ ದಾಂಪತ್ಯ ಕಲಹ, ನಟ ಯುವರಾಜ್‌ - ಶ್ರೀದೇವಿ ಬದುಕಲ್ಲಿ ಬಿರುಕು, ವಿಚ್ಚೇದನಕ್ಕೆ ಅರ್ಜಿ!

ಕನ್ನಡ ಚಿತ್ರರಂಗದ ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಇಬ್ಬರೂ ಬೇರೆ ಬೇರೆಯಾಗಿದ್ದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

kannada actor yuva rajkumar and Sridevi Byrappa applied for Divorce gow
Author
First Published Jun 10, 2024, 1:24 PM IST | Last Updated Jun 10, 2024, 5:46 PM IST

ಬೆಂಗಳೂರು (ಜೂ.10): ಸ್ಯಾಂಡಲ್‌ವುಡ್‌ ನಲ್ಲಿ ಚಂದನ್‌ ಶೆಟ್ಟಿ ನಿವೇದಿತಾ ಗೌಡ ವಿಚ್ಚೇದನ ಪಡೆದುಕೊಂಡ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಕನ್ನಡ ಚಿತ್ರರಂಗದ ನಟ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಇಬ್ಬರೂ ಬೇರೆ ಬೇರೆಯಾಗಿದ್ದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವ ರಾಜ್‌ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್​ನಿಂದ ನೋಟಿಸ್ ಜಾರಿಯಾಗಿದೆ. ಜೂನ್ 6 ರಂದು ಯುವರಾಜ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಮುಂದಿನ ತಿಂಗಳು ಜುಲೈ 4ಕ್ಕೆ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.

ದೊಡ್ಮನೆ ಕುಟುಂಬದ ಕುಡಿ, ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರನಾಗಿರುವ ಯುವ ರಾಜ್‌ಕುಮಾರ್ ಮತ್ತು ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಉನ್ನತ ವ್ಯಾಸಂಗ ಮಾಡಿದ್ದಾರೆ. ಇವರಿಬ್ಬರೂ ಮೊದಲು ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿತು. 7 ವರ್ಷಗಳ ಕಾಲ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ  2019, ಮೇ 26ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು.

ಚಂದನ್‌ -ನಿವೇದಿತಾ ಒಂದೇ ದಿನದಲ್ಲಿ ಡಿವೋರ್ಸ್ ಆಗಿದ್ದು ಇದೊಂದೇ ಕಾರಣಕ್ಕಾ? ನೆಟ್ಟಿಗರ ಹಲವು ಅನುಮಾನ!

ಈಗ ಇಬ್ಬರ ನಡುವೆ ಬಿರುಕು ಮೂಡಿದ್ದು, ಅಧಿಕೃತವಾಗಿ ವಿಚ್ಚೇದನ ಪಡೆಯಲು ದಂಪತಿ ನಿರ್ಧಾರ ಮಾಡಿದ್ದಾರೆ. ಎಂ ಸಿ ಆಕ್ಟ್  ಸೆಕ್ಷನ್ (13 (1) (ia) ಅಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಪತ್ನಿ ವಿರುದ್ಧ ಕ್ರೌರ್ಯದ ಆರೋಪ ಮಾಡಿ ಯುವ ರಾಜ್‌ಕುಮಾರ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಯಾವ ಕಾರಣಕ್ಕೆ ಇವರಿಬ್ಬರ ಮಧ್ಯೆ ಬಿರುಕಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಶ್ರೀದೇವಿ  6-7 ತಿಂಗಳಿಂದ  ದೊಡ್ಮನೆ ಕುಟುಂಬದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.  ಶ್ರೀದೇವಿ ಅಣ್ಣಾವ್ರ ಕುಟುಂಬದ ಒಡೆತನದ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಉಸ್ತುವಾರಿ ವಹಿಸಿಕೊಂಡು, ರೂವಾರಿಯಾಗಿ ನಿರ್ವಹಣೆ ಮಾಡುತ್ತಿದ್ದರು. ಒಂದು ವರ್ಷದಿಂದ  ದಂಪತಿ ನಡುವೆ ಕಲಹ ಎನ್ನಲಾಗಿದೆ. ದಂಪತಿಗಳ ಕಲಹದ ಬಗ್ಗೆ ಎರಡೂ ಕುಟುಂಬದಿಂದ ಆಗಿರುವ ಭಿನ್ನಾಭಿಪ್ರಾಯ ಪರಿಹರಿಸಲು ಪ್ರಯತ್ನ ನಡೆದಿದೆ.

ಚಂದನ್ -ನಿವೇದಿತಾ ವಿಚ್ಛೇದನ: ಮಗು ಮಾಡಿಕೊಳ್ಳೋ ವಿಚಾರಕ್ಕೆ ಇಬ್ಬರ ಮಧ್ಯೆ ಮೂಡಿತಾ ಬಿರುಕು?

ಯುವ ರಾಜ್‌ಕುಮಾರ್ ಕಡೆಯಿಂದ  ವಿಚ್ಚೇದನಕ್ಕೆ ಪಿಟಿಷನ್ ಅರ್ಜಿ ಹಾಕಿದ್ದು, ಶ್ರೀದೇವಿ ಭೈರಪ್ಪ ಅವರ ನಡೆ ಏನು? ಎಂಬುದು ಇನ್ನೂ ತಿಳಿದುಬಂದಿಲ್ಲ. ಯುವ ಸಿನಿಮಾದ ಮುಹೂರ್ತದಲ್ಲಿ ಇಬ್ಬರೂ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಯುವ ರಿಲೀಸ್ ಸಮಯದಲ್ಲಿ ಶ್ರೀದೇವಿ ಒಟ್ಟಿಗೆ ಇರಲಿಲ್ಲ. 

ಇಬ್ಬರ ಮದುವೆಗೆ ರಾಘವೇಂದ್ರ ರಾಜ್‌ಕುಮಾರ್ ದಂಪತಿಯ ವಿರೋಧ ಇತ್ತು. ಆದ್ರೆ ಪುನೀತ್ ರಾಜ್ ಕುಮಾರ್ ಅವರು ಎಲ್ಲರನ್ನು ಒಪ್ಪಿಸಿ ಅವರೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದರು. ಇದೀಗ ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ದೂರಾಗಿರೋ ಶ್ರೀದೇವಿ ಬೈರಪ್ಪ ವಿದೇಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Latest Videos
Follow Us:
Download App:
  • android
  • ios