ಕೃಷ್ಣಂ ಪ್ರಣಯ ಸಖಿ ಸಖತ್ತಾದ ಫ್ಯಾಮಿಲಿ ಎಂಟರ್‌ಟೈನರ್‌. ಸದ್ಯ ಫುಲ್‌ ಜೋಶ್‌ನಲ್ಲಿ ಥಿಯೇಟರ್‌ಗಳಲ್ಲಿ ಓಡ್ತಾ ಇದೆ. ಇದರಲ್ಲಿ ಗಣೇಶ್ ಮಾಳವಿಕಾ ಪ್ರಣಯ ಮಸ್ತ್‌ ರೆಸ್ಪಾನ್ಸ್‌ ಸಿಕ್ಕಿದೆ. 


ಕೃಷ್ಣಂ ಪ್ರಣಯ ಸಖಿ ಟಿಪಿಕಲ್‌ ಗಣೇಶ್‌ ಅಭಿಮಾನಿಗಳಿಗೆ ಸಖತ್ ಮಜಾ ಕೊಡೋ ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ಸಿನಿಮಾದಲ್ಲಿ ಎಂಟರ್‌ಟೈನ್‌ ಮೆಂಟಿಗೆ ಕೊರತೆ ಇಲ್ಲ. ಹಾಡು, ಡ್ಯಾನ್ಸ್, ಫಾರಿನ್‌ನ ಚೆಂದದ ಲೊಕೇಶನ್‌ ಎಲ್ಲ ಸಿನಿಮಾವನ್ನು ಎನ್‌ಜಾಯ್‌ ಮಾಡೋ ಹಾಗೆ ಮಾಡುತ್ತೆ. ಇದರಲ್ಲಿ ಮೇನ್‌ ಅಂಶವೇ ಗಣೇಶ್‌ ಮತ್ತು ಮಲೆಯಾಳಿ ಬೆಡಗಿ ಮಾಳವಿಕಾ ನಾಯರ್ ಲವ್‌ಸ್ಟೋರಿ. ಅದನ್ನು ಜೋಶ್‌ಫುಲ್‌ ತೆಲುಗು ಸಿನಿಮಾ ರಂಗಿನಲ್ಲಿ ನಿರ್ದೇಶಕ ಶ್ರೀನಿವಾಸ್ ರಾಜು ಕಟ್ಟಿಕೊಡ್ತಾರೆ. 'ದಂಡುಪಾಳ್ಯ' ಅವರ ಫೇಮಸ್ ಸಿನಿಮಾ. ಅಂಥಾ ಹಸಿ ಹಸಿ ಬ್ಲಡ್‌ ಶೆಡೆಡ್‌ ಸಿನಿಮಾ ಮಾಡಿದವರು ಈ ಸಿನಿಮಾ ಮಾಡಿದ್ರಾ ಅಂತ ಅಚ್ಚರಿ ಮೂಡಿಸೋ ಹಾಗೆ ಸಿನಿಮಾ ಮೂಡಿಬಂದಿದೆ. 

ಈ ಸಿನಿಮಾದಲ್ಲಿ ಮನರಂಜನೆಗೆ ಕಂಪ್ಲೀಟ್ ಫೋಕಸ್. ದೊಡ್ಡ ಅವಿಭಕ್ತ ಕುಟುಂಬದಲ್ಲಿ ಮನೆಯವರೆಲ್ಲರ ಮುದ್ದಿನ ಮಗನಾಗಿರುವುದು ಕೃಷ್ಣ. ಅವನಿಗೆ ವಯಸ್ಸು 32. ಅವನಿಗೆ ಮದುವೆ ಮಾಡಬೇಕೆಂಬ ಆಸೆಯೇನೋ ಮನೆಯವರಿಗೆ ಇದೆ. ಆದರೆ, ಒಬ್ಬರಿಗೆ ಇಷ್ಟವಾದವರು, ಇನ್ನೊಬ್ಬರಿಗೆ ಇಷ್ಟವಿಲ್ಲ. ಹೀಗಿರುವಾಗಲೇ, ಕೃಷ್ಣನಿಗೆ ಪ್ರಣಯ ಎಂಬ ಸುಂದರಿ ಮೇಲೆ ಲವ್ವಾಗುತ್ತದೆ. ಆ ಹುಡುಗಿಯೋ ಅನಾಥೆ. ಅನಾಥ ಆಶ್ರಮದಲ್ಲಿರುವವಳು. ಲವ್ವಾದ್ಮೇಲೆ ಸ್ಕೆಚ್ ಹಾಕ್ಲೇ ಬೇಕಲ್ವಾ.. ಈ ಕೋಟ್ಯಾಧಿಪತಿ ತಾನು ಆಶ್ರಮದಲ್ಲಿ ಡ್ರೈವರ್‍ ಆಗಿ ಕೆಲಸಕ್ಕೆ ಸೇರಿಕೊಳ್ಳಲು ಮುಂದಾಗ್ತಾನೆ. ಸಿಕ್ಕಿರೋ ಚಾನ್ಸ್‌ ಮಿಸ್‌ ಮಾಡದೇ ಅವಳನ್ನು ಬುಟ್ಟಿಗೆ ಹಾಕ್ಕೊಳ್ತಾನೆ. ಆದರೆ ಆ ಹುಡುಗಿಗೆ ನಿಜ ಗೊತ್ತಾದಾಗ ಏನಾಗುತ್ತೆ? ಇದು ನಾವು ಊಹಿಸದಂಥಾ ಟ್ವಿಸ್ಟ್ ಏನಲ್ಲ. ಇದನ್ನು ಸುಲಭವಾಗಿ ಊಹಿಸಬಹುದು. ಆದರೆ ಮುಂದೆ ಮತ್ತೊಂದು ತಿರುವು ಇದೆ. ಅದನ್ನು ಊಹಿಸೋಕೆ ಭಲೇ ಬುದ್ಧಿವಂತಿಕೆ ಬೇಕು.

ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಬರೀ ತಲೆಗೆ ಹುಳ ಬಿಡೋ ಕೆಲಸ ಮಾಡಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು. ಎರಡನೇ ಪಾರ್ಟ್‌ನಲ್ಲಿ ಆ ಹುಳಗಳೆಲ್ಲ ಕ್ಲಿಯರ್ ಆಗ್ತಾ ಹೋಗುತ್ತವೆ. ಈ ಸಿನಿಮಾದ ಹೈಲೈಟ್‌ ಹಾಡುಗಳು. ಈಗಾಗಲೇ ಇವು ಯೂಟ್ಯೂಬ್‌ ಸೋಷಿಯಲ್ ಮೀಡಿಯಾಗಳಲ್ಲೆಲ್ಲ ಸಖತ್ ಹೈಪ್ ಕ್ರಿಯೇಟ್‌ ಮಾಡಿವೆ. ಆದರೂ ನಮಗೆ ಗೊತ್ತಿರೋ ಹಾಡುಗಳನ್ನೇ ಮೆಸ್ಮರೈಸ್ ಮಾಡೋ ಸೀನರಿಗಳ ಮಧ್ಯೆ ನೋಡೋದೇ ಸುಖ. ಇದು ಕನಸೋ ನನಸೋ ಅನ್ನೋ ಹಾಗೆ ಹಾಡುಗಳು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯೋ ಹಾಗಿವೆ. ಅರ್ಜುನ್‍ ಜನ್ಯ ಹಾಡುಗಳ ಬಗ್ಗೆ ಹೇಳೋದು ಹೆಚ್ಚೋ ನೀವು ಹಾಡು ಕೇಳೋದು ಹೆಚ್ಚೋ,. ‘ಚಿನ್ನಮ್ಮ’, ‘ದ್ವಾಪರ ದಾಟುತ’ ಮುಂತಾದ ಹಾಡುಗಳು ಈಗಾಗಲೇ ಹಾಡುಗಳು ಹಿಟ್ ಆಗಿವೆ. ಇನ್ನು, ಗಣೇಶ್‍ ಮತ್ತು ಮಾಳವಿಕಾ ನಾಯರ್ ತಮ್ಮ ನಟನೆಯಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಡಾ.ರಾಜ್ ಕರೆದಂತೆ ನನ್ನ ಅಭಿಮಾನಿಗಳನ್ನು 'ಚಿನ್ನದ ಅಭಿಮಾನಿಗಳು' ಅಂತ ಕರೆಯುತ್ತೇನೆ: ಗೋಲ್ಡನ್ ಸ್ಟಾರ್ ಗಣೇಶ್

ಇವರಿಬ್ಬರ ನಡುವೆ ಸೋ ಕಾಲ್ಡ್‌ ರೊಮ್ಯಾಂಟಿಕ್ ಸೀನ್‌ಗಳು ಕಡಿಮೆ. ಆದರೆ ನವಿರಾದ ಭಾವ ಮೂಡಿಸುವ ದೃಶ್ಯಾವಳಿಗಳು ಚೆನ್ನಾಗಿವೆ. ಹೀಗಾಗಿ ಸಿನಿಮಾ ತನ್ನ ಟೈಟಲ್‌ಗೆ ನ್ಯಾಯ ಒದಗಿಸಿದೆ ಎನ್ನಬಹುದು. ಇದರಲ್ಲಿ ಕಾಮಿಡಿ ಟೀಮ್ ಸಖತ್ತಾಗಿದೆ. ರಂಗಾಯಣ ರಘು ಭೂಮಿದೇವ್ರು ಆಗಿ ತೆಲುಗು, ಕನ್ನಡದಲ್ಲಿ ಮಾತಾಡ್ತಾ ಹೊಟ್ಟೆ ಹಣ್ಣಾಗುವ ಹಾಗೆ ನಗಿಸ್ತಾರೆ. ಉಷ್ಣ ಕುಮಾರನಾಗಿ ಸಾಧು, ಗಿರೀಶ್‌ ಶಿವಣ್ಣ, ಕುರಿಪ್ರತಾಪ್ ಮೊದಲಾದವರು ಕಾಮಿಡಿ ಮಾಡೋದು ನಿಜಕ್ಕೂ ನಗೆಗಡಲಲ್ಲಿ ತೇಲಿಸುತ್ತೆ. 

 ಒಟ್ಟಾರೆ ಸಿನಿಮಾ ಸಖತ್ ಎಂಟರ್‌ಟೈನಿಂಗ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದರ ರಿಚ್ ವಿಶ್ಯುವಲ್ ಕಾರಣಕ್ಕೆ ಇದನ್ನು ಥಿಯೇಟರ್‌ನಲ್ಲಿ ನೋಡಿದ್ರೇ ಆ ಫೀಲ್ ಸಿಗೋದಕ್ಕೆ ಸಾಧ್ಯ. ಹೀಗಾಗಿ ಓಟಿಟಿಗೆ ಕಾದ್ರೆ ಲಾಸ್‌ ಏನೋ..

ಈ ಐದು ಕಾರಣಕ್ಕೆ ನೋಡಬೇಕು ಗೋಲ್ಡನ್ ಸ್ಟಾರ್ ಗಣೇಶ್ 'ಕೃಷ್ಣಂ ಪ್ರಣಯ ಸಖಿ' ಚಿತ್ರ!