Gandhada Gudi: ಗಂಧದ ಗುಡಿ ಬಿಡುಗಡೆ ದಿನ ಹಬ್ಬದ ಸಂಭ್ರಮ
ಅಖಿಲ ಕರ್ನಾಟಕ ಯುವರಾಜ್ ಕುಮಾರ್ ಸೇನೆ ವತಿಯಿಂದ " ಗಂಧದಗುಡಿ ” ಚಿತ್ರದ ಸಂಭ್ರಮಾಚರಣೆಯನ್ನು ಅ 28 ಶುಕ್ರವಾರ ನಗರದ ವಸಂತ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಪುನೀತ್ ಹಂಪನಗೌಡ್ರು ತಿಳಿಸಿದರು.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಅ.22): ಅಖಿಲ ಕರ್ನಾಟಕ ಯುವರಾಜ್ ಕುಮಾರ್ ಸೇನೆ ವತಿಯಿಂದ " ಗಂಧದಗುಡಿ ” ಚಿತ್ರದ ಸಂಭ್ರಮಾಚರಣೆಯನ್ನು ಅ 28 ಶುಕ್ರವಾರ ನಗರದ ವಸಂತ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಪುನೀತ್ ಹಂಪನಗೌಡ್ರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಕ್ಕೆ ಚಿತ್ರ ಪ್ರದರ್ಶನವಾಗುತ್ತಿರುವ ವಸಂತ್ ಚಿತ್ರ ಮಂದಿರದ ಮುಂದೆ ಅಪ್ಪು ಕಟೌಟ್ಗೆ 17 ಅಡಿಯ ಭಾರಿಗಾತ್ರದ ಬೃಹತ್ ಹೂವಿನ ಹಾರವನ್ನು ಜೆ.ಸಿ.ಬಿ ಯಂತ್ರದ ಸಹಾಯದಿಂದ ಹಾಕಲಾಗುತ್ತದೆ ಎಂದರು. ಕಟೌಟ್ ಗೆ 17 ಲೀಟರ್ ಹಾಲಿನ ಅಭಿಷೇಕ ಮಾಡಲಾಗುತ್ತದೆ. 17 ಕೆ.ಜಿ. ಸಿಹಿ ಹಂಚಲಾಗುತ್ತದೆ. ಅ. 27 ಗುರುವಾರ, 17 ಆಟೋಗಳಿಂದ ರ್ಯಾಲಿ ಹಮ್ಮಿಕೊಳ್ಳಲಾಗಿದೆ . ಹಾಗೂ ವಸಂತ ಚಿತ್ರಮಂದಿರದಲ್ಲಿ ಬ್ಲಡ್ ಕ್ಯಾಂಪ್ನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಗೌರವಾಧ್ಯಕ್ಷ ವಿನಯ್ ಉಪ್ಪಾರ್ ಮಾತನಾಡಿ, ವಿ.ಬಿ.ಪಿ. ಫೌಂಡೇಶನ್ನ ಹೆಚ್.ಐ.ವಿ. ಪೀಡಿತ ಮಕ್ಕಳಿಗೆ ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಸೇರಿ 40 ಜನರಿಗೆ ಉಚಿತ ಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ .
ವಸಂತ ಚಿತ್ರಮಂದಿರದಲ್ಲಿ ಚಪ್ಪರ ಹಾಕಿ , ನಾಸಿಕ್ ಡೋಲಿನ ವ್ಯವಸ್ಥೆಯೊಂದಿಗೆ ಪಟಾಕಿಗಳನ್ನು ಸಿಡಿಸಲಾಗುವುದು. ಗಂಧದಗುಡಿ ' ಚಿತ್ರದ ಮೊದಲ ದಿನದ ಮೊದಲ ಶೋ ದಲ್ಲಿ ಡಿ.ಜೆ , ಲೈಟ್ಸ್ ಅಳವಡಿಸುವುದರೊಂದಿಗೆ ಪೇಪರ್ ಶಾಟ್ಸ್ ಹೊಡೆಯಲಾಗುವುದು. ಪುನೀತ್ಗಾಗಿ ಒಂದು ಸಸಿ ನೆಡಿ' ಎಂಬ ಘೋಷಣೆಯೊಂದಿಗೆ ಸಸಿಗಳನ್ನು ಕೂಡ ವಿತರಿಸಲಾಗುವುದು ಎಂದರು.
ಪ್ಯಾನ್ ಶೋ ಮಾಡಲು ಚಿತ್ರಮಂದಿರ ಮಾಲೀಕರಲ್ಲಿ ಮನವಿ:
ಗಂಧದ ಗುಡಿ ಸಿನಿಮಾ ಪುನಿತ್ ರಾಜ್ ಕುಮಾರ್ ಕೊನೆಯ ಚಿತ್ರವಾಗಿದ್ದು ಒಂದು ಪ್ಯಾನ್ ಶೋ ಮಾಡಲು ಅಖಿಲ ಕರ್ನಾಟಕ ಯುವರಾಜ್ ಕುಮಾರ್ ಸೇನೆ ಮನವಿ ಮಾಡಿದೆ.ಮುಂದೆ ಪುನಿತ್ ರಾಜ್ ಕುಮಾರ್ ಸಿನಿಮಾ ನೋಡಲು ಅವಕಾಶ ಇಲ್ಲ ಹಾಗಾಗಿ ಒಂದು ಶೋ ಬೇಕೇಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ.
ಗಂಧದ ಗುಡಿ ಹಬ್ಬ: ಪವರ್ ಸ್ಟಾರ್ ದಿ.ಡಾ.ಪುನೀತ್ ರಾಜಕುಮಾರ್ರ ಕಡೇ ಚಿತ್ರ ಗಂಧದಗುಡಿ ಅ.28ರಂದು ತೆರೆಗೆ ಬರಲಿದ್ದು, ಅಂದು ಗಂಧದ ಗುಡಿ ಹಬ್ಬವನ್ನು ನಗರದಲ್ಲಿ ಅಖಿಲ ಕರ್ನಾಟಕ ಡಾ.ರಾಜಕುಮಾರ ಅಭಿಮಾನಿಗಳ ಸಂಘ, ಡಾ.ಶಿವರಾಜಕುಮಾರ ಅಭಿಮಾನಿಗಳ ಸಂಘ, ರಾಜರತ್ನ ಪುನೀತ ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಯೋಗೇಶ, ಬೆಳಿಗ್ಗೆ 11ಕ್ಕೆ ಇಲ್ಲಿನ ನಿಟುವಳ್ಳಿಯ ಚಾಮುಂಡೇಶ್ವರಿ ಚಿತ್ರಮಂದಿರದ ಮುಂದೆ ಡಾ.ಪುನೀತ್ ರಾಜಕುಮಾರ್ರ ಗಂಧದ ಗುಡಿ ಹಬ್ಬವನ್ನು ಒಕ್ಕೂಟದ ನೇತೃತ್ವದಲ್ಲಿ ನಡೆಸಲಾಗುವುದು ಎಂದರು.
ಪುನೀತ್ ರಾಜಕುಮಾರರ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಸಿಹಿ ವಿತರಿಸುವ ಮೂಲಕ ಗಂಧದ ಗುಡಿ ಹಬ್ಬ ಆಚರಿಸಲಾಗುವುದು. ಅ.28ರಂದು ದಾವಣಗೆರೆಯಲ್ಲಿ ಗಂಧದ ಗುಡಿ ಸಿನಿಮಾ ಬಿಡುಗಡೆಯಾಗುವ ಚಿತ್ರ ಮಂದಿರಗಳಳಲ್ಲಿ ನಾಲ್ಕೂ ಪ್ರದರ್ಶನಕ್ಕೆ ಆಗಮಿಸುವ ಪ್ರೇಕ್ಷಕ ಪ್ರಭುಗಳಿಗೆ ಸುಮಾರು 5001 ಸಸಿಗಳನ್ನು ವಿತರಿಸಲಾಗು ವುದು. ಅರಣ್ಯ ಇಲಾಖೆ ಅನುಮತಿ ನೀಡಿದರೆ, 10 ಗಂಧದ ಸಸಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ ರಾಜಕುಮಾರ ಅ.29ರಂದು ನಮ್ಮನ್ನು ಅಗಲಿದ ದಿನವಾಗಿದೆ. ಅಂದು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಒಕ್ಕೂಟದ ಡಾ.ಹ.ಶಿವಕುಮಾರ, ಮಾರುತಿ, ಎಂ.ಗಣೇಶ, ಕೆ.ವೈ.ತಿಪ್ಪೇಸ್ವಾಮಿ, ಧರ್ಮರಾಜ ಇತರರಿದ್ದರು.