ಒರಾನ್‌ ಎನ್ನುವ ಬುಡಕಟ್ಟಿಗೆ ಸೇರಿದ ಮಹಿಳೆ ಒಂದು ಡಾಟಾ ಸಂಗ್ರಹ ಮಾಡುವ ಕಂಪನಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಇದು ಒಂದು ರೀತಿಯಲ್ಲಿ ಎಐ. ಈ ಎಐ ಕೊಡುವ ಕೆಲಸವನ್ನು ಮಾಡುತ್ತಾ ಹೋಗುವ ಮಹಿಳೆಗೆ ಯಾವುದೋ ಕಂಪನಿ, ತಮ್ಮ ಬದುಕಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. 

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಐದನೇ ದಿನ ಮೂರು ಚಿತ್ರತಂಡಗಳ ಮಂದಿ ಪ್ರೇಕ್ಷಕರ ಜತೆಗೆ ಮುಖಾಮುಖಿ ಆದರು. ಚಿತ್ರೋತ್ಸವದ ಬೇರೆ ಬೇರೆ ವಿಭಾಗಗಳಲ್ಲಿ ಈಗಾಗಲೇ ಪ್ರದರ್ಶನಗೊಂಡ ‘ಹ್ಯೂಮನ್ಸ್ ಇನ್‌ ದಿ ಲೂಪ್’, ‘ಸ್ವಾಹಾ’ ಹಾಗೂ ‘ಆಜೂರ್’ ಈ ಮೂರೂ ಚಿತ್ರಗಳು ಮಹಿಳೆ, ನೆಲ-ಭಾಷೆ, ಸಂಸ್ಕೃತಿ, ಅಧುನಿಕತೆಯ ಕರಿ ನೆರಳು ಮತ್ತು ವಲಸೆಯ ವಿಷಯಗಳನ್ನು ಒಳಗೊಂಡಿದ್ದವು. ಸಿನಿಮಾ ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಪ್ರೇಕ್ಷಕರ ಮುಂದೆ ಹಾಜರಾಗಿ ತಮ್ಮ ತಮ್ಮ ಚಿತ್ರಗಳ ಕುರಿತು ಹೇಳಿಕೊಂಡರು.

1. ಅರಣ್ಯ ಸಹಾಯ್, ನಿರ್ದೇಶಕ- ಹ್ಯೂಮನ್ಸ್ ಇನ್‌ ದಿ ಲೂಪ್
ಒರಾನ್‌ ಎನ್ನುವ ಬುಡಕಟ್ಟಿಗೆ ಸೇರಿದ ಮಹಿಳೆ ಒಂದು ಡಾಟಾ ಸಂಗ್ರಹ ಮಾಡುವ ಕಂಪನಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಇದು ಒಂದು ರೀತಿಯಲ್ಲಿ ಎಐ. ಈ ಎಐ ಕೊಡುವ ಕೆಲಸವನ್ನು ಮಾಡುತ್ತಾ ಹೋಗುವ ಮಹಿಳೆಗೆ ಯಾವುದೋ ಕಂಪನಿ, ತಮ್ಮ ಬದುಕಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಇದು ತಮ್ಮ ಊರು, ಸಂಸ್ಕೃತಿ, ಆಚಾರ-ವಿಚಾರಗಳಿಗೆ ಮಾರಕ ಆಗುತ್ತದೆಯೇ, ಈ ಡಾಟಾ ಸಂಗ್ರಹದಿಂದ ತಮ್ಮ ಸಮುದಾಯದ ಜನರಿಗೆ ಏನಾದರು ತೊಂದರೆ ಆಗಲಿದೆಯೇ ಎನ್ನುವ ಅನುಮಾನಗಳು ಕಾಡಿದಾಗ ಆಕೆ ತನ್ನ ಕೆಲಸಕ್ಕೆ ವಿರುದ್ಧವಾಗಿ ಮತ್ತೊಂದು ಪಯಣ ಆರಂಭಿಸುತ್ತಾಳೆ. ನಾನು ಒಬ್ಬ ಆದಿವಾಸಿ ಮಹಿಳೆಯ ಮೂಲಕ ಎಐನಂತಹ ಕೃತಕ ಬುದ್ಧಿಮತ್ತೆಯ ಪರಿಣಾಮಗಳನ್ನು ಹೇಳುತ್ತೇನೆ. ಎಐನ ಡಾಟಾ ಲೇಬಲರ್‌ ಪಾತ್ರಧಾರಿಯ ಈ ನಡೆ ನಮ್ಮೆಲ್ಲರದು ಆಗಬೇಕಿದೆ. ಯಾಕೆಂದರೆ ಅಧುನಿಕತೆಯ ಹೆಸರಿನಲ್ಲಿ ನಮ್ಮ ಬದುಕಿನ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಕಂಪನಿ, ಸಂಸ್ಥೆಗಳು ಹೇಳಿದಂತೆ ನಮ್ಮ ಜೀವನ ಮತ್ತು ಸಂಸ್ಕೃತಿ ಉಸಿರಾಡುವ ಅಪಾಯ ಇದೆ. ಎಐ ಜನರೇಟ್‌ ಮಾಡಿದ ಒಂದು ಪದವೇ ಲೂಪ್‌. ನಾನು ಚಿತ್ರದ ಶೀರ್ಷಿಕೆಯಲ್ಲಿ ಅದನ್ನು ಬಳಸಿದ್ದೇನೆ. ಇಲ್ಲಿ ಮಹಿಳೆಯ ಪ್ರತಿರೋಧ ಎಷ್ಟು ಗಟ್ಟಿ ಮತ್ತು ನಿಖರವಾಗಿರುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ.

2. ಅಭಿಲಾಷ್ ಶರ್ಮಾ, ನಿರ್ದೇಶಕ- ಸ್ವಾಹಾ
ನಾನು ‘ಸ್ವಾಹಾ’ ಚಿತ್ರ ನಿರ್ದೇಶನ ಮಾಡುವುದಕ್ಕೆ ಕಾರಣ ಕಿರು ಅನಿಮೇಷನ್‌ ಚಿತ್ರ. ಮನುಷ್ಯ ಸೃಷ್ಟಿಸಿಕೊಂಡಿರುವ ತಾಂತ್ರಿಕತೆನಾ ಅಥವಾ ಪ್ರಕೃತಿ ಕೊಟ್ಟಿರುವ ಸೃಜನಶೀಲತೆನಾ... ಈ ಎರಡರಲ್ಲಿ ಯಾವುದು ಮುಖ್ಯ ಎಂಬುದನ್ನು ಧ್ವನಿಸುವ ಉದ್ದೇಶದಿಂದ ನಾನು ‘ಸ್ವಾಹಾ’ ಚಿತ್ರ ರೂಪಿಸಿದ್ದೇನೆ. ಟೆಕ್ನಾಲಜಿ ಹಾಗೂ ಕ್ರಿಯಾಶೀಲತೆಯ ಸಂಘರ್ಷದಲ್ಲಿ ಗೆಲ್ಲಬೇಕಿರುವುದು ಪ್ರಕೃತಿಯ ಸೃಜನಶೀಲತೆ ಎಂಬುದು ನನ್ನ ಅಭಿಪ್ರಾಯ. ಟೆಕ್ನಾಲಜಿ ಮನುಷ್ಯನ ಆಲೋಚನೆಗಳನ್ನು ಸೀಮಿತ ಮಾಡುತ್ತದೆ. ದಿನ ನಿತ್ಯ ಜೀವನಕ್ಕಾಗಿ ಹೋರಾಡುತ್ತಿರುವ ಹಳ್ಳಿಯೊಂದರ ದಲಿತ ದಂಪತಿ ರುಖಿಯಾ ಹಾಗೂ ಪೆಕನ್‌, ದೇವಾಲಯದ ನವೀಕರಣ ಕಾಮಗಾರಿ ಕಾರಣಕ್ಕೆ ಊರು ಬಿಡಬೇಕಾಗುತ್ತದೆ. ಅಧುನಿಕ ಕಾಮಗಾರಿಗಳಿಂದ ಹೀಗೆ ಹುಟ್ಟೂರು ಬಿಟ್ಟವರನ್ನು ಈ ಸಿನಿಮಾ ಪ್ರತಿಬಿಂಬಿಸಲುತ್ತದೆ. ಹುಟ್ಟಿದ ಊರು, ಮನೆ, ಭಾಷೆ ಎಲ್ಲವನ್ನೂ ಕಳೆದಕೊಂಡ ಜನರ ಮುಂದಿನ ದಾರಿ ಮತ್ತು ಬದುಕು ಏನೆಂಬುದನ್ನು ಹೇಳುವ ನನ್ನೊಳಗಿನ ತುಡಿದಕ್ಕೆಸಿನಿಮಾ ಮಾಧ್ಯಮವಾಯಿತು.

ಚಿತ್ರೋತ್ಸವಕ್ಕೆ ಆಹ್ವಾನ ಬಂದಿಲ್ಲ, ನಾನು ಹೋಗುವುದಿಲ್ಲ: ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ

3. ಅರ್ಪಿತ್ ಛಿಕಾರಾ, ನಿರ್ಮಾಪಕ- ಆಜೂರ್‌
ಬಿಹಾರದ ಬಜ್ಜಿಕ ಎನ್ನುವ ಪ್ರಾದೇಶಿಕ ಭಾಷೆಯ ಚಿತ್ರ. ಆರ್ಯನ್‌ ಚಂದ್ರ ಪ್ರಕಾಶ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಒಂದಿಬ್ಬರು ಹೊರತಾಗಿ ಉಳಿದಂತೆ ನಟನೆಯೇ ಗೊತ್ತಿಲ್ಲದ ಬುಡಕಟ್ಟು ಜನರನ್ನು ಸೇರಿಸಿಕೊಂಡು ಸಿನಿಮಾ ಮಾಡಿದ್ದೇ ಒಂದು ಸಾವಾಲಿನ ಕೆಲಸ ಆಗಿತ್ತು. ತೀರ ಬಡತನವನ್ನೇ ಆವರಿಸಿಕೊಂಡಿರುವ ಒಂದು ಹಳ್ಳಿ, ‘ಮಾಡ್ರನ್‌’ ಎಂಬುದು ಈ ಹಳ್ಳಿಯಲ್ಲಿ ಏನೆಲ್ಲ ಬದಲಾವಣೆಗಳನ್ನು ತರುತ್ತದೆ, ಈ ಬದಲಾವಣೆಗಳಿಂದ ಶುರುವಾಗುವ ವಲಸೆ, ಈ ವಲಸೆ ಎಂಬುದು ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಹೇಗೆ ವಿನಾಶ ಮಾಡಲಿದೆ ಎಂದು ಹೇಳುವ ಚಿತ್ರವಿದು. ಹೀಗಾಗಿ ‘ಆಜೂರ್’ ಬರೀ ಸಿನಿಮಾ ಅಲ್ಲ ಎಂಬುದು ನನ್ನ ಅಭಿಪ್ರಾಯ. ಗ್ರಾಮೀಣ ಪ್ರದೇಶಗಳನ್ನು ತೊರೆಯುತ್ತಿರುವ ಪ್ರತಿಯೊಬ್ಬರ ಬದುಕಿನ ಕನ್ನಡಿ. ನಟನೆ ಗೊತ್ತಿಲ್ಲದ ಸ್ಥಳೀಯರನ್ನು ಸೇರಿಸಿಕೊಂಡು ಸಿನಿಮಾ ಮಾಡಿದ್ದು ದೊಡ್ಡ ಸವಾಲು ಆದರೂ ಬಜ್ಜಿಕ ಭಾಷೆಯಲ್ಲಿ ಬಂದಿರುವ ಮೊದಲ ಸಿನಿಮಾ ಇದು ಎನ್ನುವ ಹೆಮ್ಮೆ ಇದೆ.