ನಟ ಕಿಶೋರ್ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಮಣಿಪುರ ಹಿಂಸಾಚಾರ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಬರೆದುಕೊಂಡಿರುವ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಾಹಿ ಎಂದು ಕರೆದಿದ್ದಾರೆ.
ಬೆಂಗಳೂರು (ಜು.1): ಮಣಿಪುರ ಹಿಂಸಾಚಾರ ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಕಳೆದ ಎರಡು ತಿಂಗಳುಗಳಿಂದ ಮಣಿಪುರದಲ್ಲಿ ಮೈಟೀ ಹಾಗೂ ಕುಕು ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಸಾಕಷ್ಟು ಜನ ಪ್ರಾಣ ಪಡೆದುಕೊಂಡಿದ್ದು, ಹಲವಾರು ಜನ ನಿರಾಶ್ರಿತಗೊಂಡಿದ್ದಾರೆ. ಇದರ ಬೆನ್ನಲ್ಲಿಯೇ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಂಡ ಕಂಡಲ್ಲಿ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಮಣಿಪುರ ಹಿಂಸಾಚಾರದ ಕುರಿತಾಗಿ ವಹಿಸಿರುವ ಮೌನದ ಬಗ್ಗೆಯೇ ಪ್ರಶ್ನೆ ಮಾಡಿದೆ. ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಮಣಿಪುರ ಮುಖ್ಯಮಂತ್ರಿ ಬೀರೇನ್ ಸಿಂಗ್ ಶುಕ್ರವಾರ ತಮ್ಮ ಪದವಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಕೊನೆಗೆ ಬೆಂಬಲಿಗರ ಮನವಿಗೆ ಮಣಿದು ಈ ನಿರ್ಧಾರವನ್ನು ಕೈಬಿಟ್ಟಿದ್ದಾರೆ. ಇದರ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿ ನಿರಾಶ್ರಿತರಾಗಿರುವ ವ್ಯಕ್ತಿಗಳು ಹಾಗೂ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ನಟ ಕಿಶೋರ್ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.
ಕಿಶೋರ್ ಪ್ರಕಟಿಸಿರುವ ಸೋಶಿಯಲ್ ಮೀಡಿಯಾ ಪೋಸ್ಟ್:
ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್.
ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್ ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿತಿಯೇನು? ನೂರ ನಲವತ್ತು ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? .. 2002 ರಲ್ಲಿ ಗುಜರಾತ್ 2023 ರಲ್ಲಿ ಮಣಿಪುರ .. ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ…ಇತಿಹಾಸಕ್ಕೆ ಮರೆವಿಲ್ಲ ನೆನಪಿರಲಿ..
ಹಳಿ ತಪ್ಪಿದ್ದು ರೈಲಲ್ಲ ಸರ್ಕಾರ, ಮೂರ್ಖ ಸರ್ಕಾರ, ನಾಲಾಯಕ್ಕು ಮಂತ್ರಿಗಳು: ಬಿಜೆಪಿ ಸರ್ಕಾರದ ವಿರುದ್ಧ ಕಿಶೋರ್ ಕಿಡಿ
ಕಿಶೋರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಚಂದನ್ ಕುಮಾರ್ ಎನ್ನುವವರು, 'ಬೇರೆ ರಾಜ್ಯ ನೋಡಿಕೊಳ್ಳೋಕೆ ಅಲ್ಲಿಂದೇ ಆದ ಸರ್ಕಾರಗಳಿವೆ. ನಮ್ಮ ರಾಜ್ಯದಲ್ಲಿ ಆಗುತ್ತಿರೋ ಅನ್ಯಾಯದ ಬಗ್ಗೆ ಮಾತನಾಡೋಕೆ ನಿಮಗೆ ನಾಲಿಗೆ ಇಲ್ಲವೇ. ದುಡಿದುಕೊಂಡು ತಿನ್ನೋ ಚಿಕ್ಕ, ಚಿಕ್ಕ ಅಂಗಡಿಯವರಿಗೆಲ್ಲಾ 4 ಸಾವಿರ ಕರೆಂಟ್ ಬಿಲ್ ಕಳ್ಸಿದ್ದಾರೆ. ಫ್ರೀ ಕೊಡ್ತೀನಿ ಅಂಗಾ ಹೊಟ್ಟೆ ಮೇಲೆ ಹೊಡಿತಿದ್ದಾರಲ್ಲ ಅವರ ಬಗ್ಗೆ ಪೋಸ್ಟ್ ಹಾಕೋಕೆ ನಿಮಗೆ ಧೈರ್ಯ ಇಲ್ಲವೇ. ದೇಶದಲ್ಲಿ ಏನೇ ಆದ್ರೂ ಪ್ರಧಾನಿಗಳೇ ಬಂದು ಪರಿಹಾರ ಮಾಡಬೇಕಾ ಸ್ವಾಮಿ? ಆ ರಾಜ್ಯದ ಮುಖ್ಯಮಂತ್ರಿಗಳನ್ನ ಜನ ದನ ಕಾಯೋಕೆ ಎಲೆಕ್ಟ್ ಮಾಡಿದ್ದಾರಾ? ನೀವ್ ಹಾಕಿರೋ ಪೋಸ್ಟ್ನಲ್ಲಿ ಏನಾದ್ರೂ ಸೆನ್ಸ್ ಇದ್ಯಾ? ಕುಸ್ತಿಪಟುಗಳ ವಿಚಾರಕ್ಕೂ ಪ್ರಧಾನಿಯನ್ನೇ ದೂಷಣೆ ಮಾಡ್ತೀರಾ, ಬೆಂಕಿ ಹಾಕಿದ್ದನ್ನೂ ಅವರನ್ನೇ ಹೊಣೆ ಮಾಡ್ತೀರಾ? ಏನ್ ನಿಮ್ ಕಥೆ. ಮೊದಲು ನಿಮ್ಮ ನೆಲದಲ್ಲಿ ಆಗುತ್ತಿರೋ ಅನ್ಯಾಯಕ್ಕೆ ದನಿ ಕೊಡಿ. ಬೇರೆ ರಾಜ್ಯದ ಬಗ್ಗೆ ಮಾತನಾಡೋಕೆ ಆ ರಾಜ್ಯದಲ್ಲಿಯೂ ನಿಮ್ಮಂಥೋರೆ ತುಂಬಾ ಜನ ಇರ್ತಾರೆ ಎಂದು ಬರೆದುಕೊಂಡಿದ್ದಾರೆ.
ವೀಸಾ ರದ್ದು ಅತಿರೇಕ ಎಂದು ಬೆಂಬಲಕ್ಕೆ ನಿಂತ ನಟ ಕಿಶೋರ್ಗೆ ಚೇತನ್ ಅಹಿಂಸಾ ಹೇಳಿದ್ದೇನು?
