ಕೊಪ್ಪಳದ ಮುನಿರಾಬಾದ್‌ನಲ್ಲಿ, ನಿರಂತರ ಲೈಂಗಿಕ ಕಿರುಕುಳ ಮತ್ತು ಹಣಕಾಸಿನ ಪೀಡನೆಯಿಂದ ಬೇಸತ್ತ ಪತ್ನಿಯೊಬ್ಬಳು ತನ್ನ ಪತಿಯನ್ನು ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಕೆಪಿಸಿಎಲ್ ಉದ್ಯೋಗಿಯಾಗಿದ್ದ ಪತಿ, ಅಶ್ಲೀಲ ವಿಡಿಯೋ ಭಂಗಿ ಅನುಕರಿಸುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. 

ಕೊಪ್ಪಳ (ಸೆ.27): ಅತಿಯಾದ ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋಗಳ ಅನುಕರಣೆಗೆ ಪೀಡಿಸಿದ ಗಂಡನೊಬ್ಬ, ಪತ್ನಿಯ ಸಿಟ್ಟಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ದೀರ್ಘಕಾಲದ ದಾಂಪತ್ಯ ಕಲಹವು ಕೊನೆಗೆ ಪತಿಯ ಕೊಲೆಯಲ್ಲಿ ಅಂತ್ಯಗೊಂಡಿದೆ.

Add Asianetnews Kannada as a Preferred SourcegooglePreferred

ಕೊಲೆಯಾದ ಪತಿಯನ್ನು ಕೆಪಿಸಿಎಲ್‌ನಲ್ಲಿ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ 51 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ. ತಮ್ಮ ಪತಿ ರಮೇಶ್ ಅವರನ್ನು ಒನಕೆಯಿಂದ ಹೊಡೆದು ಕೊಲೆ ಮಾಡಿರುವ ಆರೋಪದ ಮೇಲೆ ಪತ್ನಿ ಮಹಾದೇವಿ (ಉಮಾದೇವಿ) ಅವರನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಗೆ ಕಾರಣವಾದ ಅಶ್ಲೀಲ ವಿಡಿಯೋ ಮತ್ತು ಹಣಕಾಸಿನ ಕಿರುಕುಳ:

ಮಹಾದೇವಿ ಮತ್ತು ರಮೇಶ್ ಅವರ ನಡುವಿನ ವೈವಾಹಿಕ ಜೀವನದಲ್ಲಿ ನಿತ್ಯವೂ ಜಗಳ ನಡೆಯುತ್ತಿತ್ತು. ಮುಖ್ಯವಾಗಿ ಎರಡು ಪ್ರಮುಖ ವಿಚಾರಗಳು ಈ ಜಗಳಕ್ಕೆ ಕಾರಣವಾಗಿದ್ದವು. ವಯಸ್ಸು 50 ದಾಟಿದ್ದರೂ, ಪತಿ ರಮೇಶ್ ಅವರು ನಿರಂತರವಾಗಿ ಪತ್ನಿ ಮಹಾದೇವಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಆತ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದರಲ್ಲಿ ಇರುವ ರೀತಿಯಲ್ಲಿಯೇ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದ. ಗಂಡನ ಈ 'ಪೋರ್ನ್ ವಿಡಿಯೋ' ಪ್ರೇರಿತ ಕಿರುಕುಳಕ್ಕೆ ಮಹಾದೇವಿ ತೀವ್ರ ಬೇಸತ್ತಿದ್ದರು.

ಕೆಪಿಸಿಎಲ್‌ನಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್ ಕೈತುಂಬಾ ಸಂಬಳ ಗಳಿಸುತ್ತಿದ್ದರೂ, ಮನೆ ನಿರ್ವಹಣೆಗಾಗಿ ಪತ್ನಿಗೆ ಕೇವಲ 2,000 ರೂಪಾಯಿಗಳನ್ನು ಮಾತ್ರ ನೀಡುತ್ತಿದ್ದ. ಆತನಿಗೆ ಸಂಬಳ ಹೆಚ್ಚಿದ್ದರೂ ಗಂಡನ ಈ ಕಂಜೂಸು ನೀತಿಯಿಂದಾಗಿ ಮನೆಯಲ್ಲಿ ಹಣಕಾಸಿನ ವಿಚಾರಕ್ಕೂ ನಿತ್ಯ ಜಗಳ ನಡೆಯುತ್ತಿತ್ತು.

ಜಗಳ ಕೊಲೆಯಲ್ಲಿ ಅಂತ್ಯ:

ಈ ದಾಂಪತ್ಯ ಕಲಹ ಮತ್ತು ಲೈಂಗಿಕ ಕಿರುಕುಳದಿಂದ ಬೇಸತ್ತಿದ್ದ ಮಹಾದೇವಿ ಮತ್ತು ರಮೇಶ್ ನಡುವೆ ನಿನ್ನೆ ತಡರಾತ್ರಿ ಮತ್ತೆ ತೀವ್ರ ಜಗಳ ಪ್ರಾರಂಭವಾಗಿದೆ. ಕೋಪದ ಕಟ್ಟೆ ಒಡೆದ ಮಹಾದೇವಿ, ಮನೆಯಲ್ಲಿದ್ದ ಒನಕೆಯಿಂದ ರಮೇಶ್‌ರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಒನಕೆಯ ಪೆಟ್ಟು ಬಿದ್ದ ರಮೇಶ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಪತಿಯ ಕೊಲೆಯ ನಂತರ, ಮುನಿರಾಬಾದ್ ಪೊಲೀಸ್ ಠಾಣೆಗೆ ತೆರಳಿದ ಮಹಾದೇವಿ, ಗಂಡನ ಲೈಂಗಿಕ ಕಿರುಕುಳ ಮತ್ತು ಹಣಕಾಸಿನ ಪೀಡನೆಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ತಕ್ಷಣ ಮಹಾದೇವಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತಿ-ಪತ್ನಿಯ ನಡುವಿನ ವೈಯಕ್ತಿಕ ವಿಚಾರವು ಇಂತಹ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿರುವುದು ಮುನಿರಾಬಾದ್ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.