Father Vil: ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ಎಂಬ ಮಾತಿದೆ. ಅಪ್ಪನೊಬ್ಬ ತೀರಿಕೊಳ್ಳುವ ಮುಂಚೆ, ವಿಲ್ ಬರೆದಿದ್ದನು. ಅಂತ್ಯಕ್ರಿಯೆ ಮಾಡುವ ಮುನ್ನ ಮಗ ಆ ವಿಲ್ ಓದಿದ್ದಾನೆ. ಆ ವಿಲ್ ಓದಿ ಕಣ್ಣೀರು ಹಾಕಿದ್ದಾನೆ. ಆ ಪತ್ರದಲ್ಲಿ ಏನಿತ್ತು?
ಹನುಮಂತಪ್ಪ.ಎಸ್.ಕೊಲ್ಕಾರ್ ಎನ್ನುವವರು ಬರೆದ ಬರಹವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಸಾಯುವ ಸಮಯದಲ್ಲಿ ವಿಲ್ ಪತ್ರದ ಜೊತೆ ತನ್ನ ಪಾದರಕ್ಷೆ ಗಳನ್ನು ನೀಡಿ ಹೇಳಿದ "ವಿಲ್ ಪತ್ರದಲ್ಲಿ ನಿನಗೆ ನನ್ನೆಲ್ಲಾ ಆಸ್ತಿಯನ್ನು ಬರೆದಿದ್ದೇನೆ. ನೀನು ಸುಖವಾಗಿ ಬಾಳು ಆದರೆ ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೆರವೇರಿಸು ಅಷ್ಟು ಸಾಕು. ಅದೇನೆಂದರೆ ನಾನು ಸತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂತ್ಯ ಕ್ರಿಯೆ ನೆರವೇರಿಸು!" ಎಂದು ಹೇಳುತ್ತಾನೆ.
ಮಗ ತನ್ನ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಈ ಸಣ್ಣ ಆಸೆಯನ್ನು ನಾನು ಖಂಡಿತ ನೆರವೆರಿಸುತ್ತೇನೆ ಎಂದು ಅಪ್ಪನಿಗೆ ಮಾತು ಕೊಡುತ್ತಾನೆ. ತಂದೆಯು ಕೊನೆಯುಸಿರೆಳೆದ ದಿನ ವಿಧಿ ವಿಧಾನ ಕಾರ್ಯಗಳನ್ನು ಮಾಡಿದ ಪಂಡಿತರಿಗೆ ಮಗ ಅಪ್ಪನಿಗೆ ಹಳೆಯ ಚಪ್ಪಲಿ ತೊಡಿಸಲು ಕೋರುತ್ತಾನೆ. ಆದರೆ ಪಂಡಿತರು ಸಾಧ್ಯವೇ ಇಲ್ಲ ಇದು ನಮ್ಮ ಅಂತ್ಯಕ್ರಿಯೆ ಸಂಪ್ರದಾಯದಲ್ಲೇ ಇಲ್ಲವೆಂದು ನಿರಾಕರಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಆ ಶ್ರೀಮಂತ ವ್ಯಕ್ತಿಗೆ ಹಳೆಯ ಚಪ್ಪಲಿ ತೊಡಿಸಲು ಸಾಧ್ಯವೇ ಆಗುವುದಿಲ್ಲ!
ಈ ವಿಚಾರವಾಗಿ ಸಂಬಂಧಿಕರು, ಊರಿನ ಹಿರಿಯ ಮುಖಂಡರು ಬುದ್ಧಿವಂತರು ಇತರೆ ಎಲ್ಲರೂ ಸೇರಿ ಈ ವಿಷಯದ ಕುರಿತು ಚರ್ಚಿಸುತ್ತಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಓಡೋಡಿ ಬಂದ ಆ ಶ್ರೀಮಂತನ ಸ್ನೇಹಿತ ಮಗನಿಗೆ ಪತ್ರ ನೀಡಿ ಹೇಳುತ್ತಾನೆ "ನಿಮ್ಮ ತಂದೆಯವರು ಕೆಲ ದಿನಗಳ ಹಿಂದೆ ನನ್ನನ್ನು ಕರೆದು ಈ ಪತ್ರವನ್ನು ನನ್ನ ಮಗನಿಗೆ ನನ್ನ ಅಂತ್ಯ ಸಂಸ್ಕಾರದ ಕೊನೆಗಳಿಗೆಯಲ್ಲಿ ನೀಡಲು ತಿಳಿಸಿದ್ದರು" ಎಂದು ಹೇಳುತ್ತಾನೆ.
ತುಂಬಾ ಕೂತುಹಲದಿಂದ ಆ ಪತ್ರವನ್ನು ತೆರೆದು ನೋಡಿದಾಗ ಅವರ ತಂದೆ ಬರೆದಿರುತ್ತಾರೆ. "ಪ್ರಿಯ ಪುತ್ರನೇ ನೋಡಿದೆಯಾ? ದೊಡ್ಡ ಫ್ಯಾಕ್ಟರಿ, ಭವ್ಯ ಬಂಗಲೆ, ಕಾರು, ಚಿನ್ನ ಒಡವೆ, ಫಾರಂ ಹೌಸ್ ಇದೆಲ್ಲರ ಒಡೆಯನಾಗಿದ್ದರೂ ನಾನು ಒಂದು ಜೊತೆ ಹಳೆಯ ಚಪ್ಪಲಿಯನ್ನು ಕೂಡ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಇಷ್ಟೇ ಬದುಕಿನ ಸತ್ಯ! ನಿನಗೂ ಒಂದು ದಿನ ಸಾವು ಹತ್ತಿರವಾಗುತ್ತದೆ. ನೀನು ಕೇವಲ ಬಿಳಿ ಬಟ್ಟೆಯಲ್ಲಿ ಇಹಲೋಕ ತ್ಯಜಿಸಬೇಕು, ಈಗಲೇ ಎಚ್ಚರಗೊಳ್ಳು ದುಡ್ಡಿಗಾಗಿ ಯಾರನ್ನು ನೋಯಿಸಬೇಡ, ಪೀಡಿಸಬೇಡ ಅನ್ಯಾಯ ಮತ್ತು ಅಧರ್ಮದಿಂದ ಹಣ ಸಂಪಾದನೆ ಮಾಡಬೇಡ. ನೀನು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ನಿರ್ಗತಿಕರಿಗೆ ಇಲ್ಲದವರಿಗೆ ದಾನ ಮಾಡು ಸತ್ಕಾರ್ಯಗಳಿಗೆ ಹಣವನ್ನು ಬಳಸು ಸತ್ತಾಗ ನಿನ್ನ ಹಿಂದೆ ಬರುವುದು ನಿನ್ನ ಕರ್ಮಗಳು ಮಾತ್ರ ಎಂದು ಪತ್ರ ಮುಗಿಸುತ್ತಾನೆ.
ಈ ಪತ್ರ ಓದುತ್ತಾ ಕಣ್ಣುಗಳು ತುಂಬಿ ಬಂದವು. ಮನುಷ್ಯ ಎಷ್ಟೇ ಗಳಿಸಿದರು ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ಏನೇ ಆಗಿದ್ದರೂ ಏಕಿಷ್ಟು ಅಹಂಕಾರ, ನೀಚತನ ಕ್ರೂರತನ ಅಂತ ಯೋಚಿಸುತ್ತಿದ್ದೆ ನನ್ನ ಮೊಬೈಲ್ ರಿಂಗ್ ಆಗುತ್ತಿತ್ತು ಅದರಲ್ಲಿ.
"ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ"
"ಉಸಿರು ನಿಂತ ಮ್ಯಾಗೆ ನಿನ್ನ ಹೆಸರು ಹೇಳುತಾರ ಹೆಣ ಅನ್ನುತ್ತಾರ ಮಣ್ಣಾಗ ಹೂಳುತಾರ"
ಹಾಡು ಮತ್ತಷ್ಟು ಬದುಕಿನ ವಾಸ್ತವದ ಬಗ್ಗೆ ಎಚ್ಚರಿಸಿದಂತಿತ್ತು.
