15 ಸ್ಥಾನ ಕಾಂಗ್ರೆಸ್‌ ಗೆಲುವು ಖಚಿತ| ಅಧಿಕಾರದ ಹಂಚಿಕೆಯೇ ಬಿಜೆಪಿ 100 ದಿನದ ಸಾಧನೆ| ನೆರೆ ಸಂತ್ರಸ್ತರ ಹಿತ ಕಾಯುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲ ಎಂದ ಶಾಸಕ ಯತೀಂದ್ರ ಸಿದ್ದರಾಮಯ್ಯ|ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿಎಂ ಯಡಿಯೂರಪ್ಪ ಅವರೇ ಕಾರಣ ಎಂಬ ಆಡಿಯೋ ಬಹಿರಂಗ| 

ಸಿರವಾರ[ನ.6]: ರಾಜ್ಯದಲ್ಲಿ ಈ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ನೆರೆ ಹಾವಳಿ ಉಂಟಾಗಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ, ಪರಿಹಾರೋಪಯ ನೀಡುವಲ್ಲಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ವಿಫಲವಾಗಿದ್ದು, ಅಧಿಕಾರ ಹಂಚಿಕೆಯಲ್ಲಿಯೇ ರಾಜ್ಯ ಬಿಜೆಪಿಯ 100 ದಿನಗಳ ಸಾಧನೆಯಾಗಿದೆ ಎಂದು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. 

Add Asianetnews Kannada as a Preferred SourcegooglePreferred

ರಾಯಚೂರಿನಿಂದ ಲಿಂಗಸೂಗುರು ಮಾರ್ಗವಾಗಿ ಮಂಗಳವಾರ ತೆರಳುವಾಗ ಸಿರವಾರ ಪಟ್ಟಣದ ಕನಕ ವೃತ್ತದಲ್ಲಿ ಕನಕದಾಸರ ನಾಮಫಲಕ್ಕೆ ಮಾಲಾರ್ಪಣೆ ಮಾಡಿದ ನಂತರ ಹಾಲುಮತ ಸಮಾಜದಿಂದ ಹಾಗೂ ಅಭಿಮಾನಿ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿಎಂ ಯಡಿಯೂರಪ್ಪ ಅವರೇ ಕಾರಣ ಎಂಬುದು ಕಾರ್ಯಕರ್ತರ ಸಭೆಯೊಂದರಲ್ಲಿ ಹೇಳಿರುವ ಆಡಿಯೋ ಬಹಿರಂಗವಾಗಿದೆ. ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ ಅವರು, ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನದಲ್ಲಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೆರೆ ಹಾವಳಿಯಿಂದಾದ ನಷ್ಟದ ವರದಿಯಲ್ಲಿ ವ್ಯತ್ಯಾಸಗಳಿವೆ ಎಂದು ಹೇಳುತ್ತಾರೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೇಗೆ ವ್ಯಾತ್ಯಾಸವಾಗುತ್ತದೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದುಕೊಳ್ಳದೆ ಇರುವುದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ. 36 ಸಾವಿರ ಕೋಟಿ ನಷ್ಟದ ವರದಿಯಾಗಿದೆ. ಆದರೆ, ಕೇಂದ್ರ ಸರ್ಕಾರ 1200 ಕೋಟಿ ಮಾತ್ರ ಬಿಡುಗಡೆ ಮಾಡಿದ್ದು ಅದು ಬಕಾಸುರನ ಹೊಟ್ಟೆಗೆ ಅರೇಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಬಿಜೆಪಿಯವರು ನೆರೆ ಹಾವಳಿ ಪ್ರದೇಶಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡದೇ ಇರುವುದರಿಂದ ಹರಿಯಾಣ-ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಪಡೆಯುವಂತಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಿರಾಶ್ರಿತರಿಗೆ ಸೂಕ್ತ ರೀತಿಯ ಪರಿಹಾರ ನೀಡಿ ನೆರವಾಗಬೇಕು. ನಮ್ಮ ನಾಯಕರಾದ ಸಿದ್ದರಾಮಯ್ಯನವರು ಬಾದಾಮಿ-ಬೆಳಗಾವಿ ಪಾದಯಾತ್ರೆ ಮಾಡುವ ಮೂಲಕ ಸರ್ಕಾರವನ್ನು ನಿದ್ರೆಯಿಂದ ಎಚ್ಚರಿಸುತ್ತಾರೆ ಎಂದು ಹೇಳಿದ್ದಾರೆ. 

ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಏಕಾಂಗಿ ಸ್ಪರ್ಧೆ ಮಾಡುವ ಮೂಲಕ 15 ಸ್ಥಾನಗಳನ್ನು ಗೆಲ್ಲಲಿದೆ. ಚುನಾವಣೆ ಫಲಿತಾಂಶ ನಂತರ ಯಡ್ಡಿಯೂರಪ್ಪ ಮಾಜಿ ಮುಖ್ಯಮಂತ್ರಿಯಾಗುತ್ತಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.

ಈ ವೇಳೆ ಹಾಲುಮತ ಸಮಾಜದ ಮುಖಂಡರಾದ ಎಪಿಎಂಸಿ ನಿರ್ದೇಶಕ ಎಚ್‌.ಕೆ. ಸಣ್ಣ ಅಮರೇಶ, ಶಿವಗೇನಿ, ನಂದಕುಮಾರ್‌, ಎಚ್‌.ಕೆ. ಕರಿಯಪ್ಪ,ಅಮರೇಶ, ರಾಘವೇಂದ್ರ, ಪ.ಪಂ. ಸದಸ್ಯ ಗಡ್ಲಚನ್ನಬಸವ, ಬಸವರಾಜ, ಎಂ.ವಿರುಪಾಕ್ಷೀಗೌಡ, ಪ್ರಭು, ಯಲ್ಲಪ್ಪ ದೊರೆ, ದಾವೀದ್‌, ಸೇರಿದಂತೆ ಅನೇಕರು ಇದ್ದರು.