Asianet Suvarna News Asianet Suvarna News

ರಾಜಕೀಯ ಆಯ್ತು, ಐಟಿ ಇಂಡಸ್ಟ್ರೀಯಲ್ಲೂ ಕಿಡಿ ಹೊತ್ತಿಸಿದ 'ಆಪರೇಷನ್‌', ಇನ್ಫೋಸಿಸ್‌-ಕಾಗ್ನಿಜೆಂಟ್‌ ಫೈಟ್‌!

ಸಾಕಷ್ಟು ಹಿರಿಯ ಉದ್ಯೋಗಿಗಳು ಇನ್ಫೋಸಿಸ್‌ ಕಂಪನಿಯನ್ನು ತೊರೆದು, ಕಾಗ್ನಿಜೆಂಟ್‌ಗೆ ಸೇರ್ಪಡೆಯಾಗಿರುವ ಹಿನ್ನಲೆಯಲ್ಲಿ ಇನ್ಫೋಸಿಸ್‌ ಅಮೆರಿಕ ಮೂಲದ ಕಂಪನಿಗೆ ಅಧಿಕೃತ ಪತ್ರವನ್ನು ಕಳುಹಿಸಿದೆ ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ.
 

Infosys Cognizant Fight alleges unfair employee poaching sends missive to the firm san
Author
First Published Dec 27, 2023, 9:24 PM IST

ಬೆಂಗಳೂರು (ಡಿ.27): ಇಲ್ಲಿಯವರೆಗೂ ರಾಜಕೀಯದಲ್ಲಿ ಮಾತ್ರವೇ ಆಪರೇಷನ್‌ ಕಮಲ, ಆಪರೇಷನ್‌ ಕಾಂಗ್ರೆಸ್‌ ಎನ್ನುವ ಪದಗಳು ಕೇಳಿ ಬರುತ್ತಿದ್ದವು. ಈಗ ಐಟಿ ಇಂಡಸ್ಟ್ರಿಯಲ್ಲೂ ಆಪರೇಷನ್‌ ಆರಂಭವಾಗಿದೆ. ಇನ್ಫೋಸಿಸ್‌ ಹಾಗೂ ಕಾಗ್ನಿಜೆಂಟ್‌ ಕಂಪನಿಗಳ ನಡುವೆ ಈ ಕುರಿತಾದ ಫೈಟ್‌ ಆರಂಭವಾಗಿದೆ. ಕಾಗ್ನಿಜೆಂಟ್‌ ಅನೈತಿಕವಾಗಿ ತಮ್ಮ ಕಂಪನಿಯ ಉದ್ಯೋಗಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದು ಇನ್ಫೋಸಿಸ್‌ ಆರೋಪ ಮಾಡಿದೆ. ಇನ್ಫೋಸಿಸ್‌ನ ಆರೋಪ ಮಾತ್ರವಲ್ಲ, ಇದೇ ರೀತಿಯ ಆರೋಪವನ್ನು ಕೆಲ ತಿಂಗಳ ಹಿಂದೆ, ಇನ್ಫೋಸಿಸ್‌ನ ಪ್ರತಿಸ್ಪರ್ಧಿಯಾಗಿರುವ ವಿಪ್ರೋ ಕೂಡ ಮಾಡಿತ್ತು. ಅಮೆರಿಕದಲ್ಲಿ ನಾಸ್ಡಾಕ್‌ನಲ್ಲಿ ಲಿಸ್ಟಿಂಗ್ ಆಗಿರುವ ಕಾಗ್ನಿಜೆಂಟ್‌ ಕಂಪನಿಗೆ ಇತ್ತೀಚೆಗೆ ಸೇರಿರುವ ತನ್ನ ಇಬ್ಬರು ಮಾಜಿ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ವಿಪ್ರೋ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ಇನ್ಫೋಸಿಸ್-ಕಾಗ್ನಿಜೆಂಟ್‌ ಮುಖಾಮುಖಿ: ಸಾಕಷ್ಟು ಹಿರಿಯ ಉದ್ಯೋಗಿಗಳು ಇನ್ಫೋಸಿಸ್‌ ಕಂಪನಿಯನ್ನು ತೊರೆದು, ಕಾಗ್ನಿಜೆಂಟ್‌ಗೆ ಸೇರ್ಪಡೆಯಾಗಿರುವ ಹಿನ್ನಲೆಯಲ್ಲಿ ಇನ್ಫೋಸಿಸ್‌ ಅಮೆರಿಕ ಮೂಲದ ಕಂಪನಿಗೆ ಅಧಿಕೃತ ಪತ್ರವನ್ನು ಕಳುಹಿಸಿದೆ ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ. "ಸ್ಪರ್ಧಾತ್ಮಕವಲ್ಲದ ಷರತ್ತುಗಳನ್ನು ಜಾರಿಗೊಳಿಸಲಾಗುವುದಿಲ್ಲ ಆದರೆ ಕಾಗ್ನಿಜೆಂಟ್‌ಗೆ ಈ ಸಂವಹನವು ಹೆಚ್ಚು ಪ್ರತಿಬಂಧಕವಾಗಿದೆ" ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಮೂಲಗಳ ಪ್ರಕಾರ, ಇನ್ಫೋಸಿಸ್‌ ಕೆಲ ವಾರಗಳ ಹಿಂದೆ ಈ ನೋಟಿಸ್‌ಅನ್ನು ಕಾಗ್ನಿಜೆಂಟ್‌ಗೆ ನೀಡಿದೆ.

ಇನ್ಫೋಸಿಸ್‌ನ ಮಾಜಿ ಅಧಿಕಾರಿ ಹಾಗೂ ಕಾಗ್ನಿಜೆಂಟ್‌ ಇಂಡಿಯಾದ ಸಿಇಓ ಆಗಿರುವ ರವಿಕುಮಾರ್‌, ಈ ವರ್ಷದ ಜನವರಿಯಲ್ಲಿ ಅವರು ಅಧಿಕಾರ ವಹಿಸಿಕೊಂಡ ನಂತರ, ಇಪ್ಪತ್ತಕ್ಕೂ ಹೆಚ್ಚು ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ನಾಲ್ಕು ಹಿರಿಯ ಉಪಾಧ್ಯಕ್ಷರನ್ನು ನೇಮಿಸಿಕೊಂಡಿದ್ದಾರೆ, ಅವರಲ್ಲಿ ಹಲವರು ವಿಪ್ರೋ ಮತ್ತು ಇನ್ಫೋಸಿಸ್‌ನಿಂದ ಬಂದವರಾಗಿದ್ದಾರೆ. ಇತ್ತೀಚೆಗೆ ಕಾಗ್ನಿಜೆಂಟ್‌ಗೆ ಸೇರ್ಪಡೆಗೊಂಡ ಮೊಹಮ್ಮದ್ ಹಕ್ ಮತ್ತು ಜತಿನ್ ದಲಾಲ್ ಎಂಬ ಇಬ್ಬರು ಮಾಜಿ ಕಾರ್ಯನಿರ್ವಾಹಕರ ವಿರುದ್ಧ ವಿಪ್ರೋ ಈಗ ಯುಎಸ್ ಮತ್ತು ಭಾರತದಲ್ಲಿ ಮೊಕದ್ದಮೆ ಹೂಡಿದೆ. ಅನುರಾಗ್ ವರ್ಧನ್ ಸಿನ್ಹಾ, ನಾಗೇಶ್ವರ್ ಚೆರುಕುಪಲ್ಲಿ, ನರಸಿಂಹ ರಾವ್ ಮನ್ನೆಪಲ್ಲಿ ಮತ್ತು ಶ್ವೇತಾ ಅರೋರಾ ಈಗಾಗಲೇ ಇನ್ಫೋಸಿಸ್‌ಅನ್ನು ತೊರೆದು ಕಾಗ್ನಿಜೆಂಟ್‌ ಸೇರಿಕೊಂಡಿದ್ದಾರೆ.

ಮೊದಲ ಇಬ್ಬರು ಈಗಾಗಲೇ ಕಾಗ್ನಿಜೆಂಟ್‌ಗೆ ಸೇರ್ಪಡೆಗೊಂಡಿದ್ದರೆ, ನಂತರದ ಇಬ್ಬರು ವಿತರಣಾ ಮುಖ್ಯಸ್ಥರಾಗಿ ಮತ್ತು ಸಲಹಾ ಮುಖ್ಯಸ್ಥರಾಗಿ ಸೇರುವ ಹಾದಿಯಲ್ಲಿದ್ದಾರೆ. ಆದರೆ ಮೇಲೆ ಉಲ್ಲೇಖಿಸಿದ ಮೂಲಗಳ ಪ್ರಕಾರ, ಕಾಗ್ನಿಜೆಂಟ್‌ಗೆ ಈಗಾಗಲೇ ನೋಟಿಸ್‌ ಹೋಗಿರುವ ಕಾರಣ, ಇವರ ಸೇರ್ಪಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಜೂನ್‌ನಲ್ಲಿ ಮನ್ನೆಪಲ್ಲಿ ಇನ್ಫೋಸಿಸ್ ತೊರೆದರೆ, ಅರೋರಾ ಅಕ್ಟೋಬರ್‌ನಲ್ಲಿ ತೊರೆದರು. ಅಂದಿನಿಂದ ಇವರ ಲಿಂಕ್ಡಿನ್‌ ಪ್ರೊಫೈಲ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನು ಇನ್ಫೋಸಿಸ್‌ ಹಾಗೂ ಕಾಗ್ನಿಜೆಂಟ್‌ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

12,500 ಕೋಟಿ ಒಪ್ಪಂದ ರದ್ದು ಮಾಡಿದ ಇನ್ಫೋಸಿಸ್‌, ಏನು ಕಾರಣ?

ಕಾಗ್ನಿಜೆಂಟ್‌ನೊಂದಿಗಿನ ಬಿಕ್ಕಟ್ಟು ಇನ್ಫೋಸಿಸ್ ಮತ್ತು ವಿಪ್ರೋ ಎರಡೂ ಕಠಿಣವಾದ ವ್ಯಾಪಾರ ವಾತಾವರಣವನ್ನು ಎದುರಿಸುತ್ತಿರುವ ಮತ್ತು ಹಿರಿಯ ನಿರ್ವಹಣಾ ಕ್ಷೀಣತೆಯ ಸಮಯದಲ್ಲಿ ಬಂದಿದೆ. ಕಳೆದ ಹನ್ನೆರಡು ತಿಂಗಳಲ್ಲಿ ಇನ್ಫೋಸಿಸ್‌ನಿಂದ 7-8 ನಾಯಕರು ನಿರ್ಗಮಿಸಿದ್ದರೆ, ವಿಪ್ರೋ ಈ ಕ್ಯಾಲೆಂಡರ್ ವರ್ಷದಲ್ಲಿ 10 ಉನ್ನತ ಮಟ್ಟದ ಅಧಿಕಾರಿಗಳ ನಿರ್ಗಮನಗಳನ್ನು ಕಂಡಿದೆ. ಅವರಲ್ಲಿ ಅನೇಕರು  ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಸೇರಿದ್ದಾರೆ.

ದಿಗ್ಗಜ ಕಂಪೆನಿ ಟಿಸಿಎಸ್‌, ಇನ್ಫೋಸಿಸ್‌, ವಿಪ್ರೋ ಉದ್ಯೋಗಿಗಳ ಸ್ಯಾಲರಿ ನಾವು, ನೀವು ಅಂದುಕೊಂಡಷ್ಟಲ್ಲ!

Follow Us:
Download App:
  • android
  • ios