ಚಾಮರಾಜಪೇಟೆಯಿಂದ ಸ್ಪರ್ಧೆ : ಸಿದ್ದರಾಮಯ್ಯಗೆ ಜಮೀರ್ ಆಹ್ವಾನ
- ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ
- ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಹ್ವಾನ
- ಹಾಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಕೊಟ್ಟ ಆಹ್ವಾನ
ಬೆಂಗಳೂರು (ಮೇ.27): ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಆಹ್ವಾನವಿತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಾನು ಈಗ ಬಾದಾಮಿ ಶಾಸಕ. ಚುನಾವಣೆಗೆ ಇನ್ನೂ 2 ವರ್ಷ ಇದೆ ಎಂದಷ್ಟೇ ಹೇಳಿದ್ದಾರೆ.
ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ ಕಾರ್ಯಕ್ರಮದ ವೇಳೆ ಮಾತನಾಡಿದ ಜಮೀರ್, ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಕಣಕ್ಕಿಳಿದರೆ ಅವರು ಪ್ರಚಾರಕ್ಕೆ ಬರುವುದೂ ಬೇಡ. ರಾಜ್ಯ ಪ್ರವಾಸ ಮಾಡಿಕೊಳ್ಳಲಿ. ಅವರನ್ನು 70 ಸಾವಿರ ಮತಗಳಿಂದ ಗೆಲ್ಲಿಸುವ ಹೊಣೆ ನನ್ನದು. ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಿಲ್ಲ. ಅವರು ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯಾಗುತ್ತದೆ ಎಂಬ ಉದ್ದೇಶದಿಂದ 3 ತಿಂಗಳಿನಿಂದ ಆಹ್ವಾನ ನೀಡುತ್ತಲೇ ಇದ್ದೇನೆ. ಅವರಿನ್ನೂ ಒಪ್ಪಿಲ್ಲ ಎಂದರು.
'ಸಿಎಂ, ಆರೋಗ್ಯ ಸಚಿವ ಸುಧಾಕರ್ ಸುಳ್ಳುಗಳಿಗೆ ಈ ಸುತ್ತೋಲೆ ಸಾಕ್ಷಿ' ..
ಅಭಿಮಾನದ ಕರೆ: ಜಮೀರ್ ನನ್ನ ಮೇಲೆ ಅಭಿಮಾನದಿಂದ ಸ್ಪರ್ಧೆ ಮಾಡಲು ಹೇಳಿದ್ದಾರೆ. ನಾನು ಈಗ ಬಾದಾಮಿ ಶಾಸಕ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ನಾನು ಚಾಮರಾಜಪೇಟೆಗೆ ಮಾತ್ರವಲ್ಲ ನಾನು ಎಲ್ಲಾ ಕ್ಷೇತ್ರಕ್ಕೂ ಹೋಗಿದ್ದೇನೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಹೆಬ್ಬಾಳ ಶಾಸಕ ಬೈರತಿ ಸುರೇಶ್, ಹೆಬ್ಬಾಳದಿಂದ ಸ್ಪರ್ಧೆ ಮಾಡಲು ನಾನೂ ಆಹ್ವಾನ ನೀಡುತ್ತಿದ್ದೇನೆ ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ನಕ್ಕು ಸುಮ್ಮನಾದರು.