ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಭದ್ರಕೋಟೆ ಛಿದ್ರ ಆಗುವುದೇ?.ಮಂಡ್ಯದಲ್ಲಿ ಅಮಿತ್‌ ಶಾ ಆಗಮನಕ್ಕೆ ಸಿದ್ಧಗೊಂಡ ವೇದಿಕೆ ಪರಿಶೀಲನೆ ಮಾಡಿದ ಉಸ್ತುವಾರಿ ಸಚಿವರು.ಇಂಡಿಯಾ ಗೆದ್ದವರಿಗೆ ಮಂಡ್ಯ ಗೆಲ್ಲುವುದು ಕಷ್ಟವಲ್ಲ.

ಮಂಡ್ಯ (ಡಿ.30): ರಾಜ್ಯದಲ್ಲಿ ಹಳೇ ಮೈಸೂರು ಭಾಗದಲ್ಲಿ ಕೇಸರಿ ಪಡೆಯ ಕಮಲವನ್ನು ಅರಳಿಸುವ ಸಂಕಲ್ಪದೊಂದಿಗೆ ಆಗಮಿಸುತ್ತಿರುವ ಕೇಂದ್ರ ಸಚಿವ ಅಮಿತ್‌ ಶಾ ಅವರರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ 47 ಎಕರೆ ವಿಸ್ತೀರ್ಣದಲ್ಲಿ ಸುಮಾರು 260.9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿ ಹಾಲು ಉತ್ಪಾದಕ ಘಟಕವನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ಮಂಡ್ಯ ನಗರದ ಕಾಲೇಜು ಆವರಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Add Asianetnews Kannada as a Preferred SourcegooglePreferred

ಅಮಿತ್ ಶಾ ಎಂಟ್ರಿಗೆ ಭರ್ಜರಿ ಸಿದ್ದತೆ: ಮದ್ದೂರಿನಿಂದ ಮಂಡ್ಯದವರೆಗೂ ಎಲ್ಲೆಲ್ಲೂ ಕೇಸರಿ ಬಾವುಟ ಮತ್ತು ಬಿಜೆಪಿ ಧ್ವಜಗಳು ಹಾರಾಡುತ್ತಿವೆ. ಮೊದಲನೆಯದಾಗಿ ಬೆಳಗ್ಗೆ 11.30ಕ್ಕೆ ಅಮಿತ್‌ ಶಾ ಆಗಮಿಸಿ ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ. ಒಂದು ದಿನಕ್ಕೆ 30 ಮೆಟ್ರಿಕ್‌ ಟನ್ ಹಾಲಿನ ಪೌಡರ್ ಉತ್ಪಾದನೆ ಮಾಡುವ ಮೆಗಾ ಡೈರಿಯಲ್ಲಿ 4 ಮೆಟ್ರಿಕ್ ಟನ್ ಕೋವಾ, 2 ಮೆಟ್ರಿಕ್ ಟನ್ ಪನ್ನೀರ್, 12 ಮೆಟ್ರಿಕ್ ಟನ್ ತುಪ್ಪ, 10 ಮೆಟ್ರಿಕ್ ಟನ್ ಬೆಣ್ಣೆ, 10 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತದೆ. ಇನ್ನು ಮೆಗಾ ಡೈರಿಯಿಂದ ಒಂದು ವರ್ಷಕ್ಕೆ 6 ಕೋಟಿ ಹಣ ಉಳಿತಾಯ ಆಗಲಿದೆ ಎಂದು ಅಂದಾಜಿಸಲಾಗಿದೆ. 

ಮಂಡ್ಯ: ಬಿಜೆಪಿ ಸೇರ್ಪಡೆ ಬಗ್ಗೆ ಸೂಚನೆ ನೀಡಿದ್ರಾ ಸಂಸದೆ ಸುಮಲತಾ?

ಮಾಜಿ ಪ್ರಧಾನಿ ದೇವೇಗೌಡರೂ ಭಾಗಿ: ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಕೆ.ಗೋಪಾಲಯ್ಯ, ನಾರಾಯಣಗೌಡ, ಸೋಮಶೇಖರ್ ಸೇರಿದಂತೆ ಹಲವು ಭಾಗಿಯಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಎಚ್.ಡಿ.ದೇವೇಗೌಡರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ವೇದಿಕೆ ಪರಿಶೀಲಿಸಿದ ಮಂಡ್ಯ, ಮೈಸೂರು ಉಸ್ತುವಾರಿ ಸಚಿವರುಗಳಾದ ಗೋಪಾಲಯ್ಯ, ಎಸ್.ಟಿ. ಸೋಮಶೇಖರ್, ಕೆ.ಸಿ.ನಾರಾಯಣಗೌಡ ಅವರು ಸಿದ್ಧತೆ ಬಗ್ಗೆ ಮನವರಿಕೆ ಮಾಡಿಕೊಂಡರು. ವೇದಿಕೆಯಲ್ಲಿ ಮೇಲೆ 20ಕ್ಕೂ ಹೆಚ್ಚು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮನ್‌ಮುಲ್‌ ಆವರಣದ ಮುಂಭಾಗ ಬೃಹತ್ ಶಾಮಿಯಾನ ನಿರ್ಮಾಣ ಮಾಡಲಾಗಿದ್ದು, ಕೇಂದ್ರ ಗೃಹಸಚಿವರ ಆಗಮನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅಮಿತ್‌ ಶಾಗೆ ಮೈಸೂರು ಪೇಟ: ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಅದ್ಧೂರಿ ಸ್ವಾಗತಕ್ಕೆ ಮುಂದಾಗಿದ್ದಾರೆ. ಮೈಸೂರು ಪೇಟ ತೊಡಿಸಿ, ಏಕತಾ ಪ್ರತಿಮೆ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳ್ಳಿಯಲ್ಲಿ ತಯಾರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪಟೇಲರ ಪ್ರತಿಮೆಯನ್ನು ನೀಡಲಾಗುತ್ತದೆ. ಅಪ್ಪಟ ರೇಷ್ಮೆ ಬಳಸಿ ತಯಾರಿಸಲಾಗಿರುವ ಮೈಸೂರು ಪೇಟವು ಮಹಾರಾಜರು ತೊಡುವ ರೀತಿ ಕಂಗೊಳಿಸುತ್ತಿದೆ ಎಂದು ತಿಳಿದುಬಂದಿದೆ. ಕಾರ್ಯಕ್ರಮದ ವೇದಿಕೆಗೆ ಎಲ್ಲರಿಗೂ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಪರಿಶೀಲನೆ ಮಾಡಿ ನಾಗರೀಕರನ್ನು ಒಳಬಿಡುತ್ತಿರುವ ಪೊಲೀಸರು. ಆವರಣದ ಪ್ರವೇಶಿಸುತ್ತಿದ್ದಂತೆ ಎಲ್ಲರಿಗೂ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಿ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.

ಅಮಿತ್ ಶಾ ಮಂಡ್ಯ ಸಮಾವೇಶಕ್ಕೆ 1 ಲಕ್ಷ ಜನ: ಎಸ್‌ಟಿಎಸ್‌

ಇಂಡಿಯಾ ಗೆದ್ದೋರಿಗೆ ಮಂಡ್ಯ ಗೆಲ್ಲೋದು ಕಷ್ಟವಲ್ಲ:  ಮಂಡ್ಯ ಕಾರ್ಯಕ್ರಮದ ಕುರಿತು ಮಾತನಾಡಿದ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಮಾತನಾಡಿದ್ದು, ಇಡೀ ಇಂಡಿಯಾ ಗೆದ್ದವರಿಗೆ ಮಂಡ್ಯ ಗೆಲ್ಲುವುದು ಕಷ್ಟ ಆಗಲ್ಲ. ಅಮಿತ್ ಶಾ ಆಗಮನ ಮಂಡ್ಯ ಬಿಜೆಪಿ ಹೊಸ ಹುಮ್ಮಸ್ಸು ತರಲಿದೆ. ಮೈಸೂರು ಪೇಟ ತೊಡಿಸಿ ಅಮಿತ್ ಶಾ ಸ್ವಾಗತಿಸುತ್ತೇವೆ. ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮಂಡ್ಯ ಜಿಲ್ಲೆ ಅಭಿವೃದ್ಧಿ ಕಂಡಿತ್ತು. ಮೈಸೂರು ಸಂಪ್ರದಾಯದ ಪ್ರತೀಕವಾಗಿ ಮೈಸೂರು ಪೇಟ ತೊಡಿಸಲಾಗುತ್ತಿದೆ. ಜೊತೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಬೆಳ್ಳಿ ಪ್ರತಿಮೆ ಉಡುಗೊರೆ ನೀಡಲಾಗುವುದು. ಮಂಡ್ಯ ನಗರ ಸಂಪೂರ್ಣ ಕೇಸರಿಮಯವಾಗಿದೆ. ಅದ್ದೂರಿ ಸ್ವಾಗತದ ಮೂಲಕ ಅಮಿತ್ ಶಾ ಬರಮಾಡಿಕೊಳ್ತೇವೆ ಎಂದು ತಿಳಿಸಿದರು.