ಈಗಷ್ಟೇ ಅಲ್ಲ, ಮುಂದಿನ ಅವಧಿಯಲ್ಲಿಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬಹುದು. ಇದರಲ್ಲಿ ತಪ್ಪೇನಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು. 

ಬೆಳಗಾವಿ (ಫೆ.18): ಈಗಷ್ಟೇ ಅಲ್ಲ, ಮುಂದಿನ ಅವಧಿಯಲ್ಲಿಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರಬಹುದು. ಇದರಲ್ಲಿ ತಪ್ಪೇನಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾರು ಹೇಳುತ್ತಿದ್ದಾರೆ? ನೀವು ಕೇಳ್ತಾನೆ ಇದ್ದೀರಿ ಆ ರೀತಿ ಚರ್ಚೆ ಆಗುತ್ತಿದೆ. ಇನ್ನು ಯಾರು ಆ ರೀತಿ ಮಾತಾಡಿದ್ದಾರೆ ಅವರನ್ನೇ ಕೇಳಿ. ನಾನಂತೂ ಆ ಬಗ್ಗೆ ಮಾತನಾಡಿಲ್ಲ ಎಂದರು.

Add Asianetnews Kannada as a Preferred SourcegooglePreferred

ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ವಿಚಾರ ನಾನು ಭವಿಷ್ಯ ನುಡಿಯುವಂತದ್ದಲ್ಲ. ಸಿಎಂ ಬದಲಾವಣೆಯನ್ನು ಸಿಎಲ್‌ಪಿ ಮತ್ತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಇನ್ನು ಪದೇ ಪದೇ ಯಾಕೆ ಚರ್ಚೆ ಆಗುತ್ತಿರುವುದು ನನಗೆ ಗೊತ್ತಿಲ್ಲ. ನೀವೆ ಪದೇ ಪದೇ ಕೇಳುತ್ತೀರಿ ಅಂತಾ ಚರ್ಚೆ ಆಗುತ್ತಿದೆ. ಹಾಗಾಗಿ ಅವಶ್ಯಕತೆ ಇಲ್ಲದಿರೋದನ್ನು ಚರ್ಚಿಸಿದರೆ ಏನು ಉಪಯೋಗವಿಲ್ಲ ಎಂದು ಹೇಳಿದರು.

ಬೆಳಗಾವಿ ಖಾಸಗಿ ಎಪಿಎಂಸಿ ಗೊಂದಲದ ಕುರಿತು ಮಾತನಾಡಿದ ಅವರು, ಲೋಕಸಭೆಯಲ್ಲಿ ಎಪಿಎಂಸಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ್ದರಿಂದ ರಾಜ್ಯದಲ್ಲಿ ಈ ರೀತಿ 4 ಖಾಸಗಿ ಎಪಿಎಂಸಿಗಳಿವೆ. ಬೇರೆ ಕಾಯ್ದೆ ಜಾರಿಗೆ ತಂದು ಅವುಗಳನ್ನು ರದ್ದುಪಡಿಸುತ್ತೇವೆ. ನೂರಕ್ಕೆ ನೂರರಷ್ಟು ಈ ಗೊಂದಲ ಬಗೆಹರಿಸಿ, ಸರ್ಕಾರಿ ಎಪಿಎಂಸಿಗಳನ್ನು ಉಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದಿಂದ ತೂಕದ ಯಂತ್ರ ಅಳವಡಿಸುವುದು ವಿಳಂಬವಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ, ಎರಡು ತರಹದ ಯಂತ್ರಗಳು ಇರುತ್ತವೆ. 

ಆಸೆಗಳಿದ್ರೇನೆ ಎಲ್ಲರೂ ರಾಜಕೀಯಕ್ಕೆ ಬರೋದು, ಸಿಎಂ ಬದಲಾವಣೆ ಚರ್ಚೆ ಅನಗತ್ಯ: ಸಚಿವ ದಿನೇಶ್ ಗುಂಡೂರಾವ್

ಮೊದಲಿಗೆ ಅನ್‌ ಲಾಗ್ ಸಿಸ್ಟಮ್ ಡಿಜಿಟಲೈಸ್ ಮಾಡಿದ್ದೇವೆ. ಈಗಾಗಲೇ 72 ಕಾರ್ಖಾನೆಗಳಲ್ಲಿ ಈ ರೀತಿ ಕ್ರಮ ವಹಿಸಲಾಗಿದೆ. ಇನ್ನು ಆರಂಭದಲ್ಲಿ 10 ಕಡೆ ತೂಕದ ಯಂತ್ರ ಅಳವಡಿಸಲು ತೀರ್ಮಾನಿಸಿದ್ದೇವೆ. ಅದರಲ್ಲಿ 2 ಮೊಬೈಲ್ ಯುನಿಟ್ ಹಾಕುತ್ತೇವೆ. ಬಳಿಕ ಹೆಚ್ಚು ಕಾರ್ಖಾನೆಗಳು ಇರುವಲ್ಲಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಐದಾರು ಸ್ಥಳಗಳನ್ನು ಗುರುತಿಸಿದ್ದೇವೆ. ಇನ್ನುಳಿದ ಸ್ಥಳಗಳನ್ನು ಗುರುತಿಸಿ ಬರುವ ಹಂಗಾಮಿನಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಪಾಟೀಲ ಭರವಸೆ ನೀಡಿದರು.