ಶೋಭಾಗೆ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿದ್ದೇಕೆ?
- ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಿಂದ ದೂರ ಇರುವಂತೆ ಸೂಚನೆ
- ಪಕ್ಷದ ವರಿಷ್ಠರು ನೀಡಿದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ್ದ ಶೋಭಾ
- ಕೇಂದ್ರ ಸಚಿವ ಸ್ಥಾನವನ್ನು ಕೊಡುಗೆಯಾಗಿ ನೀಡಿದ ಮುಖಂಡರು
ಬೆಂಗಳೂರು (ಜು.08): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಿಂದ ದೂರ ಇರುವಂತೆ ಪಕ್ಷದ ವರಿಷ್ಠರು ನೀಡಿದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ್ದರಿಂದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಚಿವ ಸ್ಥಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.
ಯಡಿಯೂರಪ್ಪ ಅವರಿಗೆ ಶೋಭಾ ಕರಂದ್ಲಾಜೆ ಆಪ್ತರು ಎಂಬ ಕಾರಣಕ್ಕಾಗಿಯೇ ಅವರ ವಿರುದ್ಧ ಹಿಂದೆ ಸಾಕಷ್ಟುಆಪಾದನೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಂಘ ಪರಿವಾರದ ಮುಖಂಡರೂ ಸೇರಿದಂತೆ ಪಕ್ಷದ ನಾಯಕರು ಯಡಿಯೂರಪ್ಪ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ದೂರವಿರಿ ಎಂಬ ಸೂಚನೆ ನೀಡಿದ್ದರು.
ಅವಿಭಜಿತ ದ.ಕ. ಮೊದಲ ಕೇಂದ್ರ ಸಚಿವೆ ಕರಂದ್ಲಾಜೆ! ..
ಆ ಬಳಿಕ ಶೋಭಾ ಅವರು ಬೆಂಗಳೂರಿಗೆ ಆಗಮಿಸುವುದೇ ಅಪರೂಪವಾಗಿತ್ತು. ಬಂದರೂ ಅವರು ಮುಖ್ಯಮಂತ್ರಿಗಳ ಕಚೇರಿ ಅಥವಾ ನಿವಾಸದತ್ತ ತಲೆ ಹಾಕುತ್ತಿರಲಿಲ್ಲ. ಆ ಮೂಲಕ ವರಿಷ್ಠರು ನೀಡಿದ ಸೂಚನೆಯನ್ನು ಕರಾರುವಕ್ಕಾಗಿ ಪಾಲಿಸಿದರು.
ಮೋದಿ ಕ್ಯಾಬಿನೆಟ್ಗೆ ಅಚ್ಚರಿಯ ಹೆಸರು: ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ? .
ಜತೆಗೆ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಶೋಭಾ ಅವರು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದ ಶೋಭಾ ಕರಂದ್ಲಾಜೆ ಅವರು ತಾವೊಬ್ಬ ಸಮರ್ಥ ಆಡಳಿತಗಾರ್ತಿ ಎಂಬುದನ್ನು ನಿರೂಪಿಸಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಇದೀಗ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.