‘ನಮ್ಮ ಪಕ್ಷ ಕೊಟ್ಟ ಮಾತು ತಪ್ಪಿಲ್ಲ. 1 ರು.ಗೆ ಅಕ್ಕಿ ನೀಡುವುದು ಸೇರಿದಂತೆ ನೀಡಿದ್ದ ಎಲ್ಲಾ ಭರವಸೆಯನ್ನೂ ಈಡೇರಿಸಿದ್ದೇವೆ. ಈಗಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡಲು ಬದ್ಧವಾಗಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು (ಜ.13): ‘ನಮ್ಮ ಪಕ್ಷ ಕೊಟ್ಟ ಮಾತು ತಪ್ಪಿಲ್ಲ. 1 ರು.ಗೆ ಅಕ್ಕಿ ನೀಡುವುದು ಸೇರಿದಂತೆ ನೀಡಿದ್ದ ಎಲ್ಲಾ ಭರವಸೆಯನ್ನೂ ಈಡೇರಿಸಿದ್ದೇವೆ. ಈಗಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡಲು ಬದ್ಧವಾಗಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಹೀಗಾಗಿ 200 ಯುನಿಟ್‌ ಉಚಿತ ವಿದ್ಯುತ್‌ ಭರವಸೆ ಘೋಷಿಸಿದ್ದಾರೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಕೊಟ್ಟಯಾವ ಭರವಸೆಯನ್ನೂ ಈಡೇರಿಸಿಲ್ಲ. 

Add Asianetnews Kannada as a Preferred SourcegooglePreferred

ನಮ್ಮ ಪಕ್ಷ ಯಾವ ಭರವಸೆಯನ್ನು ನೀಡಿದೆಯೋ ಅದನ್ನು ಈಡೇರಿಸಲಿದೆ ಎಂದು ಹೇಳಿದರು. ನಾನು ಇಂಧನ ಸಚಿವನಾಗಿದ್ದವನು. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದಾಗ ವಿದ್ಯುತ್‌ ಕೊರತೆಯಿಂದ ವಿದ್ಯುತ್‌ ಕಡಿತ ಆಗುತ್ತಿತ್ತು. ನಾನು ಸಚಿವನಾದ ಮೇಲೆ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಳ ಮಾಡಿದೆವು. ಇದರಿಂದ ಇದೀಗ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಎಷ್ಟೆಷ್ಟುವಿದ್ಯುತ್‌ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬುದೂ ಗೊತ್ತಿದೆ. ನಾನು ಎಲ್ಲಾ ದಾಖಲೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಇದು ಲಂಚಾವತಾರ, ಮಂಚಾವತಾರ ಸರ್ಕಾರ: ಡಿ.ಕೆ.ಶಿವಕುಮಾರ್‌

ನಾನು ಸುಮಲತಾ ಬಗ್ಗೆ ಮಾತನಾಡಿಲ್ಲ: ಜೆಡಿಎಸ್‌ ಜತೆ ಕಾಂಗ್ರೆಸ್‌ ನಾಯಕರು ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದಾರೆ ಎಂಬ ಸುಮಲತಾ ಅಂಬರೀಷ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪಾಪ ಆ ಹೆಣ್ಣಮಗಳ ಬಗ್ಗೆ ನಾನು ಮಾತಾಡಿಲ್ಲ ಕಣ್ರೀ. ನಾವು ಯಾಕೆ ಆ ಹೆಣ್ಣು ಮಗಳ ಬಗ್ಗೆ ಮಾತನಾಡೋಣ. ನನ್ನ ಸಹೋದರಿ ಸಂಸತ್‌ ಸದಸ್ಯರು. ನಾನು ಒಂದು ದಿನವೂ ಅವರ ಬಗ್ಗೆ ಮಾತನಾಡಿಯೇ ಇಲ್ಲ’ ಎಂದರು.

ಬಿಜೆಪಿ ಕಮಿಷನ್‌ ಸರ್ಕಾರ: ಈ ಶೇ.40 ಕಮಿಷನ್‌ ಸರ್ಕಾರ. ಹೊಟೇಲ್‌ನಲ್ಲಿ ಮೆನು ಕಾರ್ಡ್‌ ಮಾದರಿಯಲ್ಲಿ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಹಾಕಿದ್ದಾರೆ. ಇದನ್ನು ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ .2500 ಕೋಟಿ, ಮಂತ್ರಿ ಹುದ್ದೆಗೆ .100 ಕೋಟಿ, ಆಯುಕ್ತರಿಗೆ .15 ಕೋಟಿ, ಕೋವಿಡ್‌ ಪೂರೈಕೆಗೆ ಶೇ.75, ಪಿಡಬ್ಲ್ಯು ಕಾಮಗಾರಿಗೆ ಶೇ.40, ಮಠಗಳ ಅನುದಾನಕ್ಕೆ ಶೇ.40, ಮೊಟ್ಟೆಪೂರೈಕೆಗೆ ಶೇ.30 ಕಮಿಷನ್‌ ನಿಗದಿ ಮಾಡಿದ್ದಾರೆ. ಈ ಬಗ್ಗೆ 2 ಲಕ್ಷ ಸದಸ್ಯರಿರುವ ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ ಎಂದರು.

ಗುತ್ತಿಗೆದಾರ ಸಂತೋಷ ಪಾಟೀಲ್‌ ಕಾಮಗಾರಿ ಮಾಡಿದ್ದು ನಿಜವಲ್ಲವೇ? ಆದರೂ ಸರ್ಕಾರ ದುಡ್ಡು ಕೊಡಲು ನಿರಾಕರಿಸಿದ್ದು ನಿಜವಲ್ಲವೇ? ಕಾಂಗ್ರೆಸ್‌ ನಾಯಕರು ಅವರ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳಿದೆವು. ಈವರೆಗೂ ಆ ಕುಟುಂಬಕ್ಕೆ ಸರ್ಕಾರ ಬಿಲ್‌ ಪಾವತಿ ಮಾಡಿಲ್ಲ ಎಂದರು. ಮೀಸಲಾತಿ ವಿಚಾರದಲ್ಲಿ ನಾಟಕವಾಡುತ್ತಾ, ಸುಳ್ಳು ಹೇಳುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಸಮಸ್ಯೆಗೆ ಪರಿಹಾರ ನೀಡದೇ, ಜನರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಜರಿದರು.

ಸಿದ್ದು, ಡಿಕೆಶಿ ಬಸ್‌ ಯಾತ್ರೆ ಭರ್ಜರಿ ಆರಂಭ: ಪ್ರತಿ ಮನೆಗೂ 200 ಯುನಿಟ್‌ ಉಚಿತ ವಿದ್ಯುತ್‌

16ರಂದು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಆಗಮನ: ಜ.16 ರಂದು ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿ ರಾಜ್ಯದ ನಾಯಕಿಯರನ್ನು ಭೇಟಿ ಮಾಡುತ್ತಿದ್ದಾರೆ. ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ, ಆಸ್ತಿ ಎಂದು ನಾ ನಾಯಕಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಪ್ರತಿ ಪಂಚಾಯ್ತಿಯಿಂದಲೂ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಬೇಕು. ನಾವು ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲು ಪ್ರಿಯಾಂಕ ಗಾಂಧಿ ಅವರು ಸೂಚಿಸಿದ್ದಾರೆ. ನೀವು ಅವರ ಕಾರ್ಯಕ್ರಮಕ್ಕೆ ಬಂದು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.