Asianet Suvarna News Asianet Suvarna News

ನಮ್ಮದು ಜನಸ್ಪಂದನೆಯ ಸರ್ಕಾರ: ಸಿಎಂ ಬೊಮ್ಮಾಯಿ

‘ನಮ್ಮ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುವ ಸರ್ಕಾರವಾಗಿದೆ’ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 10 ಲಕ್ಷ ರೈತ ಕುಟುಂಬಗಳಿಗೆ ಹಾಗೂ 6 ಲಕ್ಷ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ. 

We are a democratic government says basavaraj bommai gvd
Author
First Published Nov 10, 2022, 9:20 AM IST

ಬೆಳಗಾವಿ/ಚಿತ್ರದುರ್ಗ (ನ.10): ‘ನಮ್ಮ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುವ ಸರ್ಕಾರವಾಗಿದೆ’ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 10 ಲಕ್ಷ ರೈತ ಕುಟುಂಬಗಳಿಗೆ ಹಾಗೂ 6 ಲಕ್ಷ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ. ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದಲ್ಲಿ ಪ್ರತಿಪಾದಿಸದೇ ಕೃತಿಯಲ್ಲಿ ಮಾಡಿ ತೋರಿಸಬೇಕು ಎಂಬುದು ನನ್ನ ಧೋರಣೆಯಾಗಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದ್ದು, ನವೆಂಬರ್‌ 1ರಿಂದ ಅದನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ರಾಯಬಾಗದಲ್ಲಿ ಬುಧವಾರ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಸರ್ಕಾರದ ಜನಪರ ಯೋಜನೆಗಳ ವಿವರ ನೀಡಿದರು. ವಿಶ್ವಕರ್ಮ, ಬಡಿಗ, ಕುಂಬಾರ ಸೇರಿ ಕುಲಕಸುಬುಗಳನ್ನು ಮಾಡುತ್ತಿರುವ ಕುಶಲಕರ್ಮಿಗಳಿಗೆ .50 ಸಾವಿರ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ರಾಜ್ಯಾದ್ಯಂತ ಎಲ್ಲ ಕುರಿಗಾರರ ಸಂಘಗಳಿಗೆ 20 ಕುರಿ, ಒಂದು ಮೇಕೆ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 354 ಕೋಟಿ ಹಣ ಮೀಸಲಿರಿಸಲಾಗಿದೆ ಎಂದರು.

ಸರ್ಕಾರಿ ನೌಕರರಿಗೆ ಬಂಪರ್‌ ಕೊಡುಗೆ ನೀಡಿದ ಸಿಎಂ ಬೊಮ್ಮಾಯಿ

ಮೂರನೇ ಹಂತದ ಬಿಜೆಪಿ ಜನಸಂಕಲ್ಪ ಯಾತ್ರೆಯ ಅಂಗವಾಗಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ಮತ್ತು ಖಾನಾಪುರಗಳಲ್ಲಿ ಬೃಹತ್‌ ಸಮಾವೇಶ ನಡೆಯಿತು. ಇದೇ ವೇಳೆ, ಚಿತ್ರದುರ್ಗ ಹಾಗೂ ದಾವಣಗೆರೆಗಳಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆ ನಡೆಯಿತು.

ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ: ರಾಯಬಾಗ ಸಮಾವೇಶದ ಬಳಿಕ ಖಾನಾಪುರಕ್ಕೆ ಆಗಮಿಸಿದ ಸಿಎಂ, ಗೋಪೂಜೆ ನೆರವೇರಿಸಿದರು. ಬಳಿಕ, ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು. ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿದ್ದು, ಸಿದ್ದರಾಮಯ್ಯಗೆ ಇಲ್ಲಿ ಸೇರಿರುವ ಜನಸಾಗರವನ್ನು ತೋರಿಸಿ. ಜನಸಂಕಲ್ಪ ಸಮಾವೇಶದಲ್ಲಿನ ಜನಸಾಗರದ ಬಗ್ಗೆ ಅವರು ತಿಳಿದುಕೊಳ್ಳಲಿ ಎಂದರು. ಆ ಮೂಲಕ ಜನಸಂಕಲ್ಪ ಯಾತ್ರೆಗೆ ಜನ ಸೇರಲ್ಲ ಎಂದಿದ್ದ ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

ಟಿಕೆಟ್‌ ಆಕಾಂಕ್ಷಿಗಳಿಗೆ ಪಕ್ಷ ನಿಷ್ಠೆ ಪ್ರಮಾಣ: ಇದೇ ವೇಳೆ, ವೇದಿಕೆ ಮೇಲೆ ಟಿಕೆಟ್‌ ಆಕಾಂಕ್ಷಿಗಳನ್ನು ಸಾಲಾಗಿ ನಿಲ್ಲಿಸಿ, ‘ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ’ ಎಂದು ಪ್ರಮಾಣ ಬೋಧಿಸಿದರು. ಈ ಮಧ್ಯೆ, ದುರ್ಯೋಧನ ಐಹೊಳೆಯವರನ್ನು ಧರ್ಮರಾಜ ಐಹೊಳೆ ಎಂದು ಸಂಬೋಧಿಸಿದ ಸಿಎಂ, ನಿಮಗೆ ದುಯೋಧನ ಅಂತ ಯಾಕೆ ಹೆಸರಿಟ್ರು ಎಂದು ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಐಹೊಳೆ, ನನಗೆ ಗೊತ್ತಿಲ್ಲ ಎಂದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಠೇವಣಿ ಕಳೆಯಿರಿ: ಈ ಮಧ್ಯೆ, ಚಿತ್ರದುರ್ಗದ ಎಸ್‌ಎಸ್‌ ಕೆ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಯಾತ್ರೆಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್‌ ಅಭ್ಯರ್ಥಿಗಳ ಠೇವಣಿ ಕಳೆಯುವ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷ ಸಂಘಟಿಸುವ, ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಕುರಿಗಾರರಿಗೆ ತಲಾ 20 ಕುರಿ, 1 ಮೇಕೆ: ಸಿಎಂ ಬೊಮ್ಮಾಯಿ

ಕಾಂಗ್ರೆಸ್‌ಗೆ ದೇಶದಲ್ಲಿ ಎಲ್ಲಿಯೂ ನೆಲೆ ಇಲ್ಲ. ದೇಶದ ಜನರ ವಿಶ್ವಾಸವನ್ನು ಅದು ಕಳೆದುಕೊಂಡಿದೆ. ಬಿಜೆಪಿಯಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರೇ ನಮ್ಮ ನಾಯಕರಾಗಿದ್ದು ಪಕ್ಷವನ್ನು ಅಧಿಕಾರಕ್ಕೆ ತರುವಷ್ಟರ ಮಟ್ಟಿಗೆ ಸಮರ್ಥರಾಗಿದ್ದಾರೆ. ಆ ಕಾರಣಕ್ಕಾಗಿಯೇ ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆದಿದೆಯೋ ಅಲ್ಲೆಲ್ಲಾ ಬಿಜೆಪಿ ಜಯಗಳಿಸುತ್ತಾ ಸಾಗಿದೆ ಎಂದರು.

Follow Us:
Download App:
  • android
  • ios