ರಾಜ್ಯ ಸರ್ಕಾರ ನೌಕರರಿಗೆ ವೇತನ ಆಯೋಗ ರಚನೆ ಮಾಡಿರುವುದರಿಂದ ಬರೋಬ್ಬರಿ 6 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಜೊತೆಗೆ 4 ಲಕ್ಷ ನಿವೃತ್ತ ನೌಕರರಿಗೂ ಸಹ ಸಕಾರಾತ್ಮಕ ಬೆಂಬಲ ಸಿಗಲಿದೆ.

ದಾವಣಗೆರೆ(ನ.09): ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್‌ ನೇತೃತ್ವದಲ್ಲಿ 7ನೇ ವೇತನ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಘೋಷಿಸಿದ್ದಾರೆ. ಇಂದು(ಬುಧವಾರ) ದಾವಣಗೆರೆಯಲ್ಲಿ ಅವರು ಈ ಕುರಿತ ಘೋಷಣೆ ಮಾಡುವ ಮೂಲಕ ಲಕ್ಷಾಂತರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೂತನ ವೇತನ ಆಯೋಗದ ಶಿಫಾರಸಿನಿಂದ ನಿವೃತ್ತ ಸರ್ಕಾರಿ ನೌಕರರು ಸೇರಿದಂತೆ ಸುಮಾರು 13.5 ಲಕ್ಷ ಸರ್ಕಾರಿ ಉದ್ಯೋಗಿಗಳು, ನಿವೃತ್ತರಿಗೆ ಅನುಕೂಲವಾಗಲಿದೆ. ಈ ಪೈಕಿ 6 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ 3 ಲಕ್ಷ ನೌಕರರು ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತ ನೌಕರರಿಗೆ ವೇತನ, ತುಟ್ಟಿಭತ್ಯೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್

ಅಕ್ಟೋಬರ್‌ ತಿಂಗಳಲ್ಲಿ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಭರವಸೆ ನೀಡಿದ್ದರೂ, ಅಧಿಕೃತವಾಗಿ ಘೋಷಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇತನ ಆಯೋಗ ರಚನೆಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬುಧವಾರ ಮುಖ್ಯಮಂತ್ರಿಗಳು ಅಧಿಕೃತವಾಗಿ ವೇತನ ಆಯೋಗ ರಚಿಸುವುದಾಗಿ ಘೋಷಿಸಿದ್ದಾರೆ.

ಬಜೆಟ್‌ನಲ್ಲಿ ಮೀಸಲು:

ಆಯೋಗಕ್ಕೆ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಇದ್ದು, ಮುಂಬರುವ ಬಜೆಟ್‌ನಲ್ಲಿ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಸರ್ಕಾರಿ ನೌಕರರ ಸಂಘ ಶೇ.40 ರಷ್ಟುವೇತನ ಹೆಚ್ಚಳ ಮಾಡಬೇಕು, 1-7-2022 ರಿಂದ ಅನ್ವಯವಾಗುವಂತೆ ಕಾಲ್ಪನಿಕ ಸೌಲಭ್ಯ, 1-1-2023 ರಿಂದ ಆರ್ಥಿಕವಾಗಿ ಸೌಲಭ್ಯ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಇಟ್ಟಿದೆ. ಒಂದು ವೇಳೆ ಬೇಡಿಕೆಗೆ ಅನುಗುಣವಾಗಿ ವೇತನ ಹೆಚ್ಚಳವಾದರೆ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ವರ್ಷಕ್ಕೆ ಸುಮಾರು 12,500 ಕೋಟಿ ರು. ಹೊರೆ ಬೀಳಲಿದೆ.

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಕೈ ಸೇರಲಿದೆ ಬಾಕಿ ತುಟ್ಟಿ ಭತ್ಯೆ

5 ವರ್ಷಕ್ಕೂ ಮುನ್ನ ಆಯೋಗ:

ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತದೆ. ಆದರೆ ಮೊದಲ ಬಾರಿಗೆ ರಾಜ್ಯ ಸರ್ಕಾರ ಐದು ವರ್ಷದೊಳಗೆ ಹೊಸ ವೇತನ ಆಯೋಗ ರಚನೆ ಘೋಷಿಸಿದೆ.

ಮುಂದೇನು?

- 3 ತಿಂಗಳಲ್ಲಿ ವರದಿ ಸಲ್ಲಿಸಲು ಆಯೋಗಕ್ಕೆ ಸೂಚಿಸುವ ಸಾಧ್ಯತೆ
- ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್‌ನಲ್ಲಿ ಘೋಷಣೆ ಸಂಭವ
- ಶಿಫಾರಸು ಯಥಾವತ್ತು ಅಥವಾ ಪರಿಷ್ಕರಿಸಿ ಜಾರಿಗೊಳಿಸುವ ನಿರೀಕ್ಷೆ

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

7ನೇ ವೇತನ ಆಯೋಗ ರಚನೆ ಸನ್ನಿಹಿತವಾಗಿರುವ ಕುರಿತು ನ.7ರಂದೇ ‘ಕನ್ನಡಪ್ರಭ’ ವರದಿ ಮಾಡಿತ್ತು