ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಪಕ್ಷಾಂತರ ಮಾಡಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕರಗಿದ ನೀವು, ಕಳೆದ ಬಾರಿ ಅವರನ್ನು ಕ್ಷೇತ್ರದಿಂದ ಗೆಲ್ಲಿಸಿದಿರಾದರೂ ಅವರು ಕ್ಷೇತ್ರಕ್ಕೆ ಏನು ಮಾಡಲಿಲ್ಲ. 

ಚನ್ನಪಟ್ಟಣ (ಫೆ.24): ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಪಕ್ಷಾಂತರ ಮಾಡಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕರಗಿದ ನೀವು, ಕಳೆದ ಬಾರಿ ಅವರನ್ನು ಕ್ಷೇತ್ರದಿಂದ ಗೆಲ್ಲಿಸಿದಿರಾದರೂ ಅವರು ಕ್ಷೇತ್ರಕ್ಕೆ ಏನು ಮಾಡಲಿಲ್ಲ. ಈ ಬಾರಿಯಾದರೂ ಕಣ್ಣೀರಿಗೆ ಕರಗದೇ ಅಭಿವೃದ್ಧಿಗೆ ಮತ ನೀಡಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಮನವಿ ಮಾಡಿದರು. ತಾಲೂಕಿನ ಬೇವೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಾಭಿಮಾನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ತಾಲೂಕಿನ ನೀರಾವರಿ ಯೋಜನೆಗಳ ಕೊಡುಗೆ ನೀಡಿದ್ದು ಬಿಜೆಪಿ ಸರ್ಕಾರ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ಮತ್ತಷ್ಟುಅಭಿವೃದ್ಧಿಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸುವಂತೆ ಕೋರಿದರು.

Add Asianetnews Kannada as a Preferred SourcegooglePreferred

ಗೆದ್ದಿದ್ದರೆ ಡಿಸಿಎಂ ಆಗುತ್ತಿದ್ದೆ: ತಾಲೂಕಿನ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಂಕಲ್ಪ ತೊಟ್ಟಿದ್ದ ನಾನು ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಿಂದೆ ಸಾಕಷ್ಟುದುಂಬಾಲು ಬಿದ್ದಿದ್ದೆ. ಅವರನ್ನು ತಾಲೂಕಿಗೆ ಕರೆತಂದು ನೀರಾವರಿ ಯೋಜನೆಯ ಅಗತ್ಯತೆಯನ್ನು ಮನದಟ್ಟು ಮಾಡಿಸಿದ ಪರಿಣಾಮ ತಾಲೂಕಿನ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಗೊಂಡಿತು. ಕಳೆದ ಬಾರಿ ಚುನಾವಣೆಯಲ್ಲಿ ನಾನು ಗೆದ್ದಿದ್ದರೆ ಉಪಮುಖ್ಯಮಂತ್ರಿಯಾಗುತ್ತಿದೆ. ನೀವು ನನ್ನ ಕೈಹಿಡಿಯದ ಕಾರಣ ಅದು ತಪ್ಪಿತು ಎಂದು ಅಳಲು ತೋಡಿಕೊಂಡರು. 

2 ದಿನದಲ್ಲಿ ಎನ್ನೆಚ್ಚೆಂ ನೌಕರರ ವೇತನ 15% ಹೆಚ್ಚಳ: ಸಚಿವ ಸುಧಾಕರ್‌

ಇಂದಿನಿಂದಲೂ ಬೇವೂರು ಜಿಪಂ ವ್ಯಾಪ್ತಿಯ ಮತದಾರರು ನನಗೆ ಹೆಚ್ಚು ಬೆಂಬಲ ನೀಡಿಲ್ಲ. ಈ ಬಾರಿಯಾದರೂ ಈ ಜಿಪಂ ವ್ಯಾಪ್ತಿಯ ಮತದಾರರು ನನ್ನ ಕೈ ಹಿಡಿಯಿರಿ. ನೀರಾವರಿ ಯೋಜನೆ ಮೂಲಕ ನಿಮ್ಮ ಸ್ವಾಭಿಮಾನ ಎತ್ತಿಹಿಡಿದಿರುವ ನನ್ನನ್ನು ಗೆಲ್ಲಿಸಿಕೊಡಿ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಆಶ್ವಾಸನೆ ನೀಡಿದರು. ಬೇವೂರು ಜಿಪಂ ವ್ಯಾಪ್ತಿಯ ತಿಟ್ಟಮಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಾಭಿಮಾನಿ ಸಂಕಲ್ಪ ನಡಿಗೆ ಆರಂಭಿಸಿದ ಯೋಗೇಶ್ವರ್‌ ಅವರನ್ನು ಪಕ್ಷದ ಕಾರ‍್ಯಕರ್ತರು ವಿವಿಧ ಕಲಾತಂಡಗಳೊಂದಿಗೆ ಎತ್ತಿನ ಗಾಡಿಗಳ ಮೆರವಣಿಗೆಮೂಲಕ ಗ್ರಾಮಕ್ಕೆ ಅದ್ಧೂರಿಯಾಗಿ ಸ್ವಾಗತಿಸಿದರು. 

ಕಾರ‍್ಯಕರ್ತರು ಕ್ರೇನ್‌ ಮೂಲಕ ಬೃಹತ್‌ ಸೇಬಿನಹಾರ ಹಾಗೂ ಕೊಬ್ಬರಿಹಾರ ಹಾಕಿದರೆ, ಪಟ್ಲು ಗ್ರಾಮದಲ್ಲಿ ಕರಿಕಬ್ಬಿನ ಮಾಲೆ ಹಾಕಿ ಅಭಿಮಾನ ಮೆರೆದರು. ಪ್ರತಿ ಗ್ರಾಮದಲ್ಲೂ ಯೋಗೇಶ್ವರ್‌ಗೆ ಜೆಸಿಬಿ ಮೂಲಕ ಹೂ ಮಳೆಗರೆದು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಇದಕ್ಕೂ ಮೊದಲು ಪಟ್ಟಣದ ಮಹೇಶ್ವರ ಕನ್ವೆಷನ್‌ ಹಾಲ್‌ನಿಂದ ತಿಟ್ಟಮಾರನಹಳ್ಳಿವರೆಗೆ ಹಮ್ಮಿಕೊಂಡಿದ್ದ ಎತ್ತಿನಗಾಡಿ ಮೆರವಣಿಗೆಯಲ್ಲಿ ಯೋಗೇಶ್ವರ್‌ ಸ್ವತಃ ಎತ್ತಿನಗಾಡಿ ಚಲಾಯಿಸುವ ಮೂಲಕ ಕಾರ‍್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದರು.

ಜ್ಯೂನಿಯರ್‌ ಖರ್ಗೆ ಎದುರು ಕೇಸರಿ ಅಭ್ಯರ್ಥಿ ಯಾರು?: ತಂದೆ​ಯಂತೆ ಮಗ​ನನ್ನೂ ಸೋಲಿ​ಸಲು ಬಿಜೆಪಿ ರಣ ತಂತ್ರ

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಬಮೂಲ್‌ ನಾಮಿನಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ಯೋಜನಾ ಪ್ರಾಕಾರದ ಅಧ್ಯಕ್ಷ ಆರ್‌.ಎಂ.ಮಲುವೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್‌, ಪಟ್ಲುಗ್ರಾಮ ಮುಖಂಡರಾದ ಕಬ್ಬಡಿ ಕುಮಾರ್‌, ಸತೀಶ್‌, ಮುತ್ತು, ತಿಟ್ಟಮಾರನಹಳ್ಳಿ ಬಿಜೆಪಿ ಮುಖಂಡರಾದ ಅನಿಲ್‌, ಬಾಬು, ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.