ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ಫೋಟೋ ಶೂಟ್ ರಾಜಕೀಯ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಯಿತು. ಪರಿಷತ್ತಿನ ಸದಸ್ಯರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಈ ಫೋಟೋ ಸೆಷನ್ ನಡೆದಿದೆ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರೂ, ರಾಜಕೀಯ ವಲಯದಲ್ಲಿ ಚರ್ಚೆಗಳು ಮುಂದುವರಿದಿವೆ.

ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದ ಫೋಟೋ ಶೂಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರೂ, ಸ್ಪೀಕರ್ ಯು.ಟಿ. ಖಾದರ್ ನೀಡಿದ ಸ್ಪಷ್ಟನೆ ಈ ಗೊಂದಲಗಳಿಗೆ ಭಾಗಶಃ ತೆರೆ ಎಳೆದಿದೆ. ಆದರೆ ಯಾವುದಾದರು ಒಂದು ಭಾಗದಲ್ಲಿ ಬದಲಾವಣೆ ಆಗುವುದಂತೂ ಖಚಿತವಾದಂತಿದೆ.

ಬೆಳಿಗ್ಗೆ ವಿಧಾನಸೌಧದ ಮುಂಭಾಗದಲ್ಲಿ ಶಾಸಕರೊಂದಿಗೆ ಫೋಟೋ ಸೆಷನ್ ನಡೆದಿದ್ದು, ನಂತರ ಮಧ್ಯಾಹ್ನದ ಬಿಡುವಿನ ವೇಳೆ ವಿಧಾನಸೌಧದ ಮೊಗಸಾಲೆಯಲ್ಲಿ ನಡೆದು ಹೋಗುತ್ತಿದ್ದ ಸ್ಪೀಕರ್ ಖಾದರ್ ಅವರನ್ನು ಸುತ್ತುವರಿದ ಸಿಬ್ಬಂದಿ ಅವರೊಂದಿಗೆ ಫೋಟೋ ಹಾಗೂ ಸೆಲ್ಫಿಗಳನ್ನು ತೆಗೆದುಕೊಂಡರು. ಈ ದೃಶ್ಯಗಳು ಕಂಡುಬಂದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆ ಆಗಲಿದೆಯೇ ಎಂಬ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಸೇರಿಕೊಂಡಿದೆ.

ಊಹಾಪೋಹಗಳಿಗೆ ಸ್ಪೀಕರ್ ಸ್ಪಷ್ಟನೆ

“ಇದು ಯಾವುದಾದರೂ ಬದಲಾವಣೆಯ ಮುನ್ಸೂಚನೆಯೇ?” ಎಂಬ ಪ್ರಶ್ನೆಗೆ ಸ್ಪೀಕರ್ ಖಾದರ್ ನಗುತ್ತಲೇ ಪ್ರತಿಕ್ರಿಯಿಸಿದರು. “ಹಾಗೇನಿಲ್ಲಪ್ಪಾ,” ಎಂದು ಸರಳವಾಗಿ ಉತ್ತರಿಸಿ, ಈ ಫೋಟೋ ಶೂಟ್‌ಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ ಎಂಬಂತೆ ಮುಂದಕ್ಕೆ ಹೋದರು.

ಫೋಟೋ ಶೂಟ್‌ಗೆ ನಿಜವಾದ ಕಾರಣವೇನು?

ಬಳಿಕ ಸ್ವೀಕರ್ ಪರಿಷತ್ತಿನ ಕೆಲವು ಸದಸ್ಯರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಅವರೊಂದಿಗೆ ನೆನಪಿಗಾಗಿ ಫೋಟೋ ಶೂಟ್ ಆಯೋಜಿಸಲಾಗಿತ್ತು. ಅದೇ ಸಂದರ್ಭದಲ್ಲಿ, ವಿಧಾನಸಭೆಯ ಸದಸ್ಯರ ಜೊತೆಯೂ ಒಂದು ಫೋಟೋ ಸೆಷನ್ ನಡೆಸೋಣ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಿತು ಎಂದು ತಿಳಿಸಿದ್ದಾರೆ.

ರಾಜಕೀಯ ವಲಯದಲ್ಲಿ ಇನ್ನೂ ಚರ್ಚೆ ಮುಂದುವರಿಕೆ

ಸ್ಪೀಕರ್ ಸ್ಪಷ್ಟನೆ ನೀಡಿದರೂ, ವಿಧಾನಸೌಧದ ಪಡಸಾಲೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು ಇನ್ನೂ ಮುಂದುವರಿದಿವೆ. ಮೊದಲಿನಿಂದಲೇ ಸಿಎಂ ಬದಲಾವಣೆ, ಸಂಪುಟ ಪುನರ್‌ರಚನೆ ಅಥವಾ ಸ್ಪೀಕರ್ ಬದಲಾವಣೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಫೋಟೋ ಶೂಟ್ ಇನ್ನಷ್ಟು ಕುತೂಹಲ ಹುಟ್ಟಿಸಿತ್ತು.

ಒಟ್ಟಾರೆ, ಫೋಟೋ ಶೂಟ್ ಕುರಿತಾಗಿ ಹರಿದಾಡುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ಸ್ಪೀಕರ್ ಖಾದರ್ ನೀಡಿದ ಸ್ಪಷ್ಟನೆ ತಾತ್ಕಾಲಿಕ ತೆರೆ ಎಳೆದಂತಾಗಿದೆ. ಆದಾಗ್ಯೂ, ವಿಧಾನಸೌಧದ ಒಳಗಡೆ ಈ ವಿಚಾರ ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ.