ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಂಪುಟದಲ್ಲಿ ನಾಲ್ಕು ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಲು ಕಾಂಗ್ರೆಸ್ ಹೈಕಮಾಂಡ್ ಯೋಜಿಸಿದೆ. ಆದರೆ, ಪರಿಶಿಷ್ಟ ಜಾತಿ, ಲಿಂಗಾಯತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ತೀವ್ರ ಪೈಪೋಟಿ ಲಾಬಿ ನಡೆತಿದೆ. ಯಾರನ್ನು ಆಯ್ಕೆ ಮಾಡಬೇಕೆಂಬುದು ಹೈಕಮಾಂಡ್‌ಗೆ ದೊಡ್ಡ ತಲೆನೋವು

  • 4 ಡಿಸಿಎಂ ಸ್ಥಾನ ಸೃಜಿಸಲು ಪಕ್ಷ ಯೋಚನೆ । ಅಹಿಂದ, ಲಿಂಗಾಯತ ಸಮುದಾಯಕ್ಕೆ ಹುದ್ದೆ
  • ದಲಿತರಲ್ಲಿ ಎಡಗೈ-ಬಲಗೈ ಮಧ್ಯೆ ಲಾಬಿ । ಕೆಎಚ್‌ಎಂ, ಪ್ರಿಯಾಂಕ್‌, ಪರಂ ಮಧ್ಯೆ ಸ್ಪರ್ಧೆ

ಬೆಂಗಳೂರು (ಮೇ.30): ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್‌(DK Shivakumar) ಅವರ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹಲವರಿಂದ ಭಾರೀ ಪೈಪೋಟಿ ಶುರುವಾಗಿರುವುದರಿಂದ ಹೈಕಮಾಂಡ್‌ಗೆ ಕಗ್ಗಂಟಾಗಿ ಪರಿಣಮಿಸಿದೆ.

ಹೊಸ ಸಂಪುಟದಲ್ಲಿ ವಾಸ್ತವವಾಗಿ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನ ಸೃಜಿಸಲು ಹೈಕಮಾಂಡ್‌ ಯೋಜಿಸಿತ್ತು. ಈ ಪೈಕಿ ಪಶಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಲಿಂಗಾಯತ ಸಮುದಾಯಗಳಿಗೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಇರಾದೆ ಇತ್ತು. ಆದರೆ, ಹಿಂದುಳಿದ ವರ್ಗ ಹೊರತುಪಡಿಸಿ ಉಳಿದ ಮೂರೂ ಸಮುದಾಯದಲ್ಲೂ ಇಬ್ಬರು, ಮೂವರು ನಾಯಕರಿಂದ ಪೈಪೋಟಿ, ಲಾಬಿ ತೀವ್ರವಾಗಿರುವುದರಿಂದ ಹೈಕಮಾಂಡ್‌ಗೆ ತಲೆನೋವು ತರಿಸಿದೆ.

ಡಿಸಿಎಂ ಸ್ಥಾನಕ್ಕೆ ಎಡಗೈ-ಬಲಗೈ ಸ್ಪರ್ಧೆ:

ಪರಿಶಿಷ್ಠ ಜಾತಿಯಿಂದ ಪ್ರಿಯಾಂಕ್‌ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಆಲೋಚನೆ ಹೈಕಮಾಂಡ್‌ನಲ್ಲಿತ್ತು. ಆದರೆ, ಈಗ ಅಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಸರ್ಕಾರದಲ್ಲಿ (2013-18) ಬಲಗೈ ನಾಯಕರಾದ ಡಾ.ಜಿ.ಪರಮೇಶ್ವರ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಈಗ ಪ್ರಿಯಾಂಕ್‌ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಬಲಗೈ ಸಮುದಾಯಕ್ಕೇ ಆ ಸ್ಥಾನ ಸಿಗಲಿದೆ. ಹಾಗಾಗಿ ಈ ಬಾರಿ ನಮಗೆ ಆ ಸ್ಥಾನ ನೀಡಬೇಕೆಂದು ಎಡಗೈ ಸಮುದಾಯದ ನಾಯಕರು ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಪ್ರಮುಖವಾಗಿ ಎಡಗೈನಲ್ಲಿ ಕೆ.ಎಚ್‌.ಮುನಿಯಪ್ಪ ಅವರು ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಬಲಗೈ ಸಮುದಾಯದಿಂದ ಪ್ರಿಯಾಂಕ್‌ ಖರ್ಗೆ ಅವರ ಜೊತೆಗೆ ಪರಮೇಶ್ವರ್‌ ಅವರ ಹೆಸರೂ ಪರಿಗಣನೆಗೆ ಬರುತ್ತಿದೆ. ಹಾಗಾಗಿ ಇದನ್ನು ಹೇಗೆ ನಿಭಾಯಿಸುವುದು ಹೈಕಮಾಂಡ್‌ಗೆ ತಿಳಿಯದಾಗಿದೆ.

ಇನ್ನು, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್‌ ಮತ್ತು ಈಶ್ವರ್‌ ಖಂಡ್ರೆ ಅವರ ನಡುವೆ ಡಿಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಅಲ್ಪಸಂಖ್ಯಾತರಲ್ಲಿ ಜಮೀರ್ ಅಹಮದ್‌ ಖಾನ್‌ ಅವರ ಹೆಸರು ಕೇಳಿಬರುತ್ತಿದ್ದರೂ, ಮತ್ತೊಂದೆಡೆ ಯು.ಟಿ.ಖಾದರ್‌ ಅವರೂ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಹಿಂದುಳಿದ ವರ್ಗದಿಂದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಸ್ಥಾನ ನೀಡುವ ಆಲೋಚನೆ ಹೈಕಮಾಂಡ್‌ಗಿತ್ತು.

ಆದರೆ, ಸ್ವತಃ ಸಿದ್ದರಾಮಯ್ಯ ಅವರೇ ಬೇಡ ಎಂದು ಹೇಳಿದ್ದಾರೆ. ಹಾಗಾಗಿ ಮೂರು ಡಿಸಿಎಂ ಸ್ಥಾನಗಳಿಗೆ ಪೈಪೋಟಿ ನಡೆಯುತ್ತಿರುವುದರಿಂದ ಕಗ್ಗಂಟಾಗಿದೆ. ಆದರೂ, ಹೈಕಮಾಂಡ್‌ ಉಪ ಮುಖ್ಯಮಂತ್ರಿ ಸ್ಥಾನ ಸೃಜಿಸಲೇ ಬೇಕೆಂದು ನಿರ್ಧರಿಸಿದೆ. ಕಗ್ಗಂಟು ನಿಭಾಯಿಸುವ ಜೊತೆಗೆ ಎಷ್ಟು ಡಿಸಿಎಂ ಸ್ಥಾನಗಳಿಗೆ ಒಪ್ಪಿಗೆ ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.