ನನ್ನ ವಿರುದ್ಧ ತಂತ್ರಗಾರಿಕೆ ಮಾಡಲು ನಾಗಪುರದಿಂದ ತಂಡ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ನಾನು ನೋಡಿಲ್ಲ. ಯಾರೇ ಬಂದರೂ ಈ ಚುನಾವಣೆಯಲ್ಲಿ ಸೆಂಟ್ರಲ್‌ ಕ್ಷೇತ್ರದಲ್ಲಿ ನನ್ನ ಗೆಲುವು ತಡೆಯಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ಹುಬ್ಬಳ್ಳಿ (ಏ.24): ನನ್ನ ವಿರುದ್ಧ ತಂತ್ರಗಾರಿಕೆ ಮಾಡಲು ನಾಗಪುರದಿಂದ ತಂಡ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ನಾನು ನೋಡಿಲ್ಲ. ಯಾರೇ ಬಂದರೂ ಈ ಚುನಾವಣೆಯಲ್ಲಿ ಸೆಂಟ್ರಲ್‌ ಕ್ಷೇತ್ರದಲ್ಲಿ ನನ್ನ ಗೆಲುವು ತಡೆಯಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ಸಿಗೆ ಬಂದಿರುವುದು ಬಿಜೆಪಿ ಅವಮಾನ ಮಾಡಿದೆ ಎಂಬ ಕಾರಣಕ್ಕೆ ಎಂದು ಸ್ಪಷ್ಟಪಡಿಸಿದರು.

Add Asianetnews Kannada as a Preferred SourcegooglePreferred

ಇದೀಗ ನನ್ನ ವಿರುದ್ಧ ಪ್ರಚಾರ ನಡೆಸಲು ನಾಗಪುರದಿಂದ ನೂರಾರು ಜನರ ತಂಡವೇ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ನಾನು ನೋಡಿಲ್ಲ. ಆ ಬಗ್ಗೆ ಗೊತ್ತಿಲ್ಲ. ಅಕಸ್ಮಾತ್‌ ಬಂದಿದ್ದರೆ, ಅವರಿಂದ ಯಶಸ್ವಿ ಚುನಾವಣೆ ಮಾಡಲು ಸಾಧ್ಯವೇ ಇಲ್ಲ. ಸ್ಥಳೀಯವಾಗಿ ನಮಗೆ ಗುರುತಿರುತ್ತದೆ. ಹೊರಗಿನಿಂದ ಬಂದವರಿಗೆ ಕ್ಷೇತ್ರದ ಬಗ್ಗೆ ಏನು ಗೊತ್ತಿರುತ್ತದೆ? ಅವರು ಕ್ಷೇತ್ರವನ್ನೆಲ್ಲ ತಿಳಿದುಕೊಳ್ಳುವಷ್ಟರಲ್ಲೇ ಎಲೆಕ್ಷನ್‌ ಮುಗಿದಿರುತ್ತದೆ ಎಂದರು.

ರಾಜಕೀಯ ನಿವೃತ್ತಿ ಬಯಸಿದವರಿಗೆ ಬಿಜೆಪಿಯಿಂದ ಬಲವಂತದ ಟಿಕೆಟ್‌: ಶಾಸಕ ಶರತ್‌ ಬಚ್ಚೇಗೌಡ

ನಾಗಪುರದಲ್ಲೇ ಸೋಲು: ಇತ್ತೀಚಿಗೆ ನಾಗಪುರದಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ನಡೆಯಿತು. ಇಷ್ಟೆಲ್ಲ ಎಕ್ಸ್‌ಪರ್ಟ್‌ ಇರುವವರು ನಾಗಪುರದ ಪದವೀಧರರ ಚುನಾವಣೆಯಲ್ಲಿ ಯಾಕೆ ಸೋತರು? ನಾನು ಕಾನೂನುಬಾಹಿರ ಕೆಲಸ ಮಾಡಿಲ್ಲ; ಮಾಡುವುದೂ ಇಲ್ಲ. ನನ್ನ ಚಲನವಲನದ ಮೇಲೆ ಏನು ನಿಗಾ ಇಡುತ್ತಾರೆ ಎಂದು ಪ್ರಶ್ನಿಸಿದರು. ಸೋಷಿಯಲ್‌ ಮೀಡಿಯಾಗಳಲ್ಲಿ ನನ್ನ ವಿರುದ್ಧ ಸಾಕಷ್ಟು ಕ್ಯಾಂಪೇನ್‌ ನಡೆದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡುವವರು ಮನೆಯಲ್ಲಿ ಕುಳಿತು ಮಾಡುತ್ತಾರೆ. ಇದೆಲ್ಲ ಜನರ ಮೇಲೆ ಇಂಪ್ಯಾಕ್ಟ್ ಆಗಲ್ಲ. ಜನರ ಮನೆ ಬಾಗಿಲಿಗೆ ಹೋಗಿ ಪ್ರಚಾರ ಮಾಡಬೇಕು ಎಂದರು.

ಜನರ ಆಶೀರ್ವಾದ ಇದೆ: ಚುನಾವಣೆ ಎಂದ ಮೇಲೆ ನೆಗೆಟಿವ್‌ ಹಾಗೂ ಪಾಸಿಟಿವ್‌ ಕ್ಯಾಂಪೇನ್‌ ಇದ್ದೇ ಇರುತ್ತದೆ. ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟುನೆಗೆಟಿವ್‌ ಕ್ಯಾಂಪೇನ್‌ ಎದುರಿಸಿದ್ದೇನೆ ಎಂದು ತಿಳಿಸಿದರು. ಲಿಂಗಾಯತರಿಗೆ ಈ ಬಾರಿ ಹೆಚ್ಚು ಟಿಕೆಟ್‌ ಕೊಡಲಾಗಿದೆ. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಅಲ್ತಾಫ್‌ ಕಿತ್ತೂರ ಜತೆ ನಾನು ಮಾತನಾಡುತ್ತೇನೆ. ಕಾಂಗ್ರೆಸ್‌ ವರಿಷ್ಠರು ಈಗಾಗಲೇ ಅವರೊಂದಿಗೆ ಮಾತನಾಡಿದ್ದಾರೆ, ಎಲ್ಲವೂ ಸರಿ ಹೋಗುತ್ತದೆ. ಕ್ಷೇತ್ರದ ಜನರು ನನ್ನೊಂದಿಗೆ ಇದ್ದಾರೆ. ಕಾಂಗ್ರೆಸ್‌ ನನ್ನ ಜತೆಗೆ ಶಕ್ತಿಯಾಗಿ ನಿಂತಿದೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಯಾರೂ ನನ್ನನ್ನು ಸೋಲಿಸಲು ಆಗಲ್ಲ. 

ಸತ್ಯಮಾರ್ಗದಲ್ಲಿ ಸಾಗಲು ಬಸವಣ್ಣ ಹೇಳಿಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಯಾರೇ ನನ್ನನ್ನು ಟಾರ್ಗೆಟ್‌ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇನೆ. ಜನರ ವಿಶ್ವಾಸ ನನ್ನ ಜತೆಗಿದೆ. ಹೀಗಾಗಿ ಗೆದ್ದು ಬರುತ್ತೇನೆ ಎಂದರು. ಲಿಂಗಾಯತರು ಭ್ರಷ್ಟಾಚಾರಿಗಳು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಏನು ಹೇಳಿದ್ದಾರೋ ಗೊತ್ತಿಲ್ಲ. ನೋಡದ ವಿಷಯಗಳ ಬಗ್ಗೆ ನಾನು ಕಮೆಂಟ್‌ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.