Asianet Suvarna News Asianet Suvarna News

ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪಿಸಿದವರ ತಿರಸ್ಕರಿಸಿ: ಕೇಂದ್ರ ಸಚಿವ ವಿ.ಕೆ.ಸಿಂಗ್‌

ಬಿಜೆಪಿ ಸರ್ವಸ್ಪರ್ಶಿ ಆಡಳಿತವನ್ನು ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟಕಡೆಯ ವ್ಯಕ್ತಿಯ ಆಶೋತ್ತರಗಳನ್ನೂ ಈಡೇರಿಸುವ ಕೆಲಸ ಮಾಡಿವೆ. ಇಂತಹ ಡಬಲ್‌ ಇಂಜಿನ್‌ ಸರ್ಕಾರವನ್ನು ಬಲಪಡಿಸುವ ಕಾರ್ಯವನ್ನು ಜನರು ಮಾಡಬೇಕೆಂದು ಕೋರಿದ ವಿ.ಕೆ.ಸಿಂಗ್‌. 

Union Minister VK Singh Slams Rahul Gandhi grg
Author
First Published Mar 15, 2023, 1:22 PM IST

ಬಾಗಲಕೋಟೆ(ಮಾ.15):  ವಿದೇಶಕ್ಕೆ ತೆರಳಿ ದೇಶದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಎಸಗುವಂತೆ ಮಾಡುವವರನ್ನು ಜನ ತಿರಸ್ಕರಿಸಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್‌ ವಾಗ್ದಾಳಿ ನಡೆಸಿದರು. ಮಂಗಳವಾರ ನಗರದ ಬಸವೇಶ್ವರ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಭದ್ರತೆ, ಜನರ ಸುರಕ್ಷತೆ, ಮಕ್ಕಳ ಭವಿಷ್ಯ, ಭಾರತ ವಿಶ್ವಗುರು ಆಗಲು ಜನ ಕಮಲದ ಗುರುತಿಗೆ ಮತ ನೀಡಬೇಕು. ವಿದೇಶಕ್ಕೆ ತೆರಳಿ ದೇಶದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವವರನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಸರ್ವಸ್ಪರ್ಶಿ ಆಡಳಿತವನ್ನು ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟಕಡೆಯ ವ್ಯಕ್ತಿಯ ಆಶೋತ್ತರಗಳನ್ನೂ ಈಡೇರಿಸುವ ಕೆಲಸ ಮಾಡಿವೆ. ಇಂತಹ ಡಬಲ್‌ ಇಂಜಿನ್‌ ಸರ್ಕಾರವನ್ನು ಬಲಪಡಿಸುವ ಕಾರ್ಯವನ್ನು ಜನರು ಮಾಡಬೇಕೆಂದು ಕೋರಿದರು.

ವಿಜಯ ಸಂಕಲ್ಪ ಯಾತ್ರೆಗೆ ಜನತೆಯ ಪ್ರೋತ್ಸಾಹ ನೋಡುತ್ತಿದ್ದರೆ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ: ಬಿಎಸ್‌ವೈ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ವಿಶ್ವವೇ ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಏನೂ ಅಲ್ಲ. ಅಂಥವರು ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಜನ ಅವರನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಸೋತು ಸುಣ್ಣವಾಗಿ ವಿಸರ್ಜನೆ ಆಗುವ ಮಟ್ಟಿಗೆ ತೆರಳಿದೆ. ಕಾಂಗ್ರೆಸ್‌ ಮುಕ್ತ ಭಾರತದ ಕನಸು ನಿಜವಾಗಿದೆ ಎಂದು ಹೇಳಿದರು.

80ನೇ ವಯಸ್ಸಿಗೆ ತಲುಪಿದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ಸಿಎಂ ಸ್ಥಾನ ತ್ಯಜಿಸಿದ್ದೇನೆ. ಅದೇ ಕಾರಣಕ್ಕೆ ಮುಂಬರುವ ಚುನಾವಣೆಯಲ್ಲಿ ನಿಲ್ಲದಿರಲು ತೀರ್ಮಾನಿಸಿದ್ದೇನೆ. ದೇವರು ಶಕ್ತಿ ನೀಡಿದರೆ ಈ ಚುನಾವಣೆ ಅಷ್ಟೇ ಅಲ್ಲ ಮುಂದಿನ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲಿಸಲು ಓಡಾಡುತ್ತೇನೆ. ನನಗೆ ಅಧಿಕಾರದ ಆಸೆಯೇ ಇಲ್ಲ ಎಂದು ಹೇಳಿದರು.

ಡಾ.ವೀರಣ್ಣ ಚರಂತಿಮಠ ಅವರಂತಹ ಆದರ್ಶ ಶಾಸಕರನ್ನು ನಾನು ಕಂಡಿಲ್ಲ. ಅವರು ಈ ಕ್ಷೇತ್ರಕ್ಕೆ ದೊರೆತಿರುವುದು ಜನ ಅದೃಷ್ಟಮಾಡಿದ್ದಾರೆ. ಅಂಥವರು ಮತ್ತೆ ಆಯ್ಕೆ ಆಗಬೇಕು. ಬಿಜೆಪಿ ಹಾಗೂ ಅವರನ್ನು ಬಲಪಡಿಸುವ ಕಾರ್ಯಕ್ಕೆ ಜನ ಮುಂದಾಗಬೇಕು ಎಂದರು.

ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನನ್ನ ಗುರಿ. ಲೋಕಸಭೆಯಲ್ಲಿ ಮತ್ತೆ 25 ಸ್ಥಾನಗಳನ್ನು ಗೆಲ್ಲಿಸಿ ಅವರಿಗೆ ಅರ್ಪಿಸಬೇಕಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಘಟನೆಗಳಲ್ಲಿ ತೊಡಗಬೇಕು ಎಂದು ಹೇಳಿದರು.

ಸಚಿವ ಭೈರತಿ ಬಸವರಾಜ ಮಾತನಾಡಿ, ನಮ್ಮ ಸಮುದಾಯದ ಜನ ಯಾರದೋ ಮಾತುಗಳಿಗೆ ಮರುಳಾಗದೆ ಅತ್ಯುತ್ತಮವಾಗಿ ಕೆಲಸ ಮಾಡಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ ಹೆಚ್ಚಿನ ಮತವನ್ನು ನೀಡಿ ಗೆಲ್ಲಿಸಬೇಕೆಂದು ಕರೆ ನೀಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ ಮೋಡಕಾ ಬಜಾರ್‌ಗೆ ಹೋಗುವ ಸ್ಥಿತಿಗೆ ತಲುಪಿದೆ. ಜನರಿಗೆ ಆಹಾರ ಅವಶ್ಯಕತೆಯನ್ನು ನೋಡಿಕೊಂಡು ನ್ಯಾಯಬೆಲೆ ಅಂಗಡಿಯನ್ನು ಸ್ಥಾಪಿಸಿದ್ದು ಕಾಂಗ್ರೆಸೇತರ ಸರ್ಕಾರ. ರಾಜ್ಯದಲ್ಲಿ ಜನರಿಗೆ ಉಚಿತವಾಗಿ ಅಕ್ಕಿ ನೀಡುತ್ತಿರುವುದು ಪ್ರಧಾನಿ ಮೋದಿ ಅವರು. ಆದರೆ ಅದರ ಮೇಲಿನ ಬಟ್ಟೆಮತ್ತು ಸ್ಟಿಕ್ಕರ್‌ ಮಾತ್ರ ಸಿದ್ದರಾಮಯ್ಯನವರದು ಎಂದು ವ್ಯಂಗ್ಯವಾಡಿದರು.

ಈ ವೇಳೆ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಡಾ.ವೀರಣ್ಣ ಚರಂತಿಮಠ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ವಿಭಾಗ ಸಹಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಆಯಿಲ್‌ ಇಂಡಿಯಾ ಕಾರ್ಪೊರೇಶನ್‌ ಸದಸ್ಯ ರಾಜು ರೇವಣಕರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರ ಘಟಕದ ಅಧ್ಯಕ್ಷ ಸದಾನಂದ ನಾರಾ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ, ರಾಜಶೇಖ ಮುದೇನೂರ ಮತ್ತಿತರರು ಇದ್ದರು. ಕಾಂಗ್ರೆಸ್‌ ತೊರೆದು ಮುಖಂಡ ಲಕ್ಷ್ಮಿನಾರಾಯಣ ಕಾಸಟ್‌ ಅವರು ಬಿಜೆಪಿ ಸೇರ್ಪಡೆಗೊಂಡರು.

ಕ್ಷೇತ್ರಕ್ಕೆ 5500 ಕೋಟಿಗೂ ಅಧಿಕ ಅನುದಾನ:ವಿಸಿಸಿ

ಕೊರೋನಾದಂತ ಕೆಟ್ಟದಿನಗಳಲ್ಲೂ ಕ್ಷೇತ್ರಕ್ಕೆ .5500 ಕೋಟಿ ಅನುದಾನವನ್ನು ಸರ್ಕಾರ ಒದಗಿಸಿದ್ದು, ಕ್ಷೇತ್ರದ ಚಿತ್ರಣ ಬದಲಾಗಿದೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ನವನಗರ ಮೂರನೇ ಯೂನಿಟ್‌ ಅಭಿವೃದ್ಧಿ, ನಡುಗಡ್ಡೆ ಸ್ಥಳಾಂತರ, ಶಿರೂರು, ಭಗವತಿ ಏತ ನೀರಾವರಿ ಯೋಜನೆ ಮೂಲಕ 50 ಸಾವಿರ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿದೆ. ಸಾಕಷ್ಟುಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದರು.

ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವಾಗ್ದಾಳಿ

ಇಷ್ಟೆಲ್ಲ ಕೆಲಸ ನೋಡಿ ಜನ ಅಭಿವೃದ್ಧಿ ಹರಿಕಾರ ಎಂದರೆ ಇತ್ತೀಚೆಗೆ ಒಬ್ಬ ನಾಲ್ಕು ರಸ್ತೆ ಮಾಡಿಲ್ಲ ಎಂದು ಟೀಕಿಸುತ್ತಾನೆ. ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್‌ ಎಂದರೆ ಅವರಿಗೆ ರಾತ್ರಿ ಎಲ್ಲ ನಿದ್ರೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು. ನನ್ನ ಕೆಲಸಗಳನ್ನು ಟೀಕಿಸುವ ಕೆಲ ಮೆಂಟಲ್‌ ಗಿರಾಕಿಗಳನ್ನು ಪಕ್ಷದಿಂದ ಹೊರಗೆ ಹಾಕಿದರೂ ಮರ್ಯಾದೆ ಬಿಟ್ಟು ಪಕ್ಷದ ಮುಖಂಡ ಎಂದು ಹಾಕಿಕೊಳ್ಳುತ್ತಾರೆ. ಇಂತವುಗಳನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ವರಿಷ್ಠರು ಮಾಡಬೇಕು ಎಂದು ಹೇಳಿದರು.

ವಿಪ ಸದಸ್ಯ ಪೂಜಾರ ಗೈರು

ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಭಾಗವಹಿಸಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ವಿಪ ಸದಸ್ಯ ಪಿ.ಎಚ್‌.ಪೂಜಾರ ಅವರ ಗೈರು ಎದ್ದುಕಾಣಿಸಿತು. ವೇದಿಕೆಯಲ್ಲಿ ಎಲ್ಲ ಸ್ಥಳೀಯ ನಾಯಕರಿದ್ದರೂ ಪೂಜಾರ ಅವರ ಅನುಪಸ್ಥಿತಿ ಚರ್ಚೆಗೆ ಗ್ರಾಸವಾಯಿತು.

Follow Us:
Download App:
  • android
  • ios