ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈಗಾಗಲೇ ದಿವಾಳಿಗೆ ಬಂದು ತಲುಪಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.

ಹುಬ್ಬಳ್ಳಿ (ಆ.21): ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈಗಾಗಲೇ ದಿವಾಳಿಗೆ ಬಂದು ತಲುಪಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು. ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹಳಷ್ಟುಜನರು ರಸ್ತೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಈಚೆಗೆ ಸುರಿದ ನಿರಂತರ ಮಳೆಯಿಂದಾಗಿ ರಸ್ತೆ, ಮನೆಗಳು ಹಾಳಾಗಿ ಜನರು ಜೀವನ ನಡೆಸುವುದೇ ದೊಡ್ಡ ಕಷ್ಟವಾಗಿದೆ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಾದ ರಾಜ್ಯ ಸರ್ಕಾರ ನಯಾ ಪೈಸೆ ಅನುದಾನ ನೀಡುತ್ತಿಲ್ಲ. ಇದನ್ನೆಲ್ಲ ನೋಡಿದರೆ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೇ ತಿಂಗಳಲ್ಲಿ ದಿವಾಳಿ ಆಗಿದೆ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು, ಶಾಲೆಯಂತಹ ಮೂಲ ಸೌಕರ್ಯ ಬೇಕು. ಅದಕ್ಕಾಗಿ ತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ದೇವರಾಜು ಅರಸು ದಾರಿಯಲ್ಲಿ ಸಿಎಂ ಸಿದ್ದರಾಮಯ್ಯ: ಶಾಸಕ ಆನಂದ್‌

ಪ್ರಯಾಣಿಕರ ಸಂಖ್ಯೆ ದ್ವಿಗುಣ: ಉಡಾನ್‌ ಆರಂಭವಾದ ಆನಂತರ ವಿಮಾನ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ನಕಲಿ ಗಾಂಧಿ ಕಂಪನಿಗಳು ತಮ್ಮ ಕಾಲದಲ್ಲಿ ಏನೂ ಮಾಡಲಿಲ್ಲ. ದೇಶದಲ್ಲಿ ಅವರ ಕಾಲದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಈಗ 150 ವಿಮಾನ ನಿಲ್ದಾಣಗಳಿವೆ. ಪ್ರತಿನಗರಕ್ಕೆ 3 ವರ್ಷಗಳ ಕಾಲ ಉಡಾನ್‌ ಯೋಜನೆ ಇರುತ್ತದೆ. ಕಾಯಂ ಸಬ್ಸಿಡಿ ಇರುವುದಿಲ್ಲ. ಇಂದು ದುಪ್ಪಟ್ಟಿಗೂ ಅಧಿಕ ಪ್ರಯಾಣಿಕರು ವಿಮಾನದಲ್ಲಿ ಸಂಚರಿಸುತ್ತಿದ್ದಾರೆ. 

ಹತ್ತು ವರ್ಷದಲ್ಲಿ ಡಬಲ್‌ ಜನಸಂಖ್ಯೆ ಅಂತೂ ಆಗಿಲ್ಲ. ಅದರಲ್ಲಿ ನಮ್ಮ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೊಸ ವಿಮಾನ ನಿಲ್ದಾಣಗಳು ಹಾಗೂ ಉಡಾನ್‌ ಕನೆಕ್ಟಿವಿಟಿ (ಜೋಡಣೆ) ಯಶಸ್ವಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಕಾಲದಲ್ಲಂತೂ ಏನು ಮಾಡಲಿಲ್ಲ. ಆದರೆ, ಈಗ ನಾವು ಜಾರಿಗೊಳಿಸುತ್ತಿರುವ ಎಲ್ಲ ಯೋಜನೆಗಳಲ್ಲೂ ತಪ್ಪು ಹುಡುಕುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಯಾರು ನಮ್ಮ ಪಕ್ಷಕ್ಕೆ ಬರುತ್ತಾರೆಯೋ ಅವರಿಗೆ ಸ್ವಾಗತ ಮಾಡುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಜೋಶಿ, ಅವರು ಹೇಳಿರುವುದರಲ್ಲೇನೆ ತಪ್ಪಿಲ್ಲ. ನಮ್ಮ ಪಕ್ಷಕ್ಕೆ ಯಾರಾದರೂ ಬರುತ್ತೇವೆ ಎಂದು ಹೇಳಿದರೆ ನಾವು ಪಾಸಿಟಿವ್‌ ಆಗೇ ಪರಿಶೀಲನೆ ಮಾಡುತ್ತೇವೆ ಎಂದರು.

ರಾಜೀವ್‌ ಗಾಂಧಿ ದೇಶದ ಭವಿಷ್ಯವನ್ನು ರೂಪಿಸಿದ ಮಹಾನ್‌ ನಾಯಕ: ಶಾಸಕ ತಮ್ಮಯ್ಯ

ಗಮಂಡಿಯಾ ಘಟಬಂಧನ: ಕಾವೇರಿ ನೀರಿಗಾಗಿ ಹೋರಾಟ ನಡೆಸಿದವರ ಬಂಧನ ವಿಚಾರಕ್ಕೆ ಉತ್ತರಿಸಿ ಜೋಶಿ, ಅದು ‘ಇಂಡಿಯಾ’ ಅಲ್ಲ. ಅದು ಗಮಂಡಿಯಾ. ಅವರಿಗೆ ಗಮಂಡಿ ಬಹಳ ಇದೆ. ಆ ಗಮಂಡಿಯಾ ಘಟಬಂಧನ ಉಳಿಸಿಕೊಳ್ಳುವುದಕ್ಕೆ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುವ ಮೂಲಕ ಕರ್ನಾಟಕ ಸರ್ಕಾರ ಅವರಿಗೆ ಶರಣಾಗಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.