Asianet Suvarna News Asianet Suvarna News

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಜಾರಿಗೆ ತರಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಚುನಾವಣೆ ಸಮೀಪಿಸಿದಾಗ ವಿವಿಧ ಯೋಜನೆಗಳಿಗೆ ಗ್ಯಾರಂಟಿ ನೀಡುವ ಕಾಂಗ್ರೆಸ್ಸಿನ ಮಾತು ನಂಬಬೇಡಿ. ಕಾಂಗ್ರೆಸ್ಸಿಗರು ಗ್ಯಾರಂಟಿ ನೀಡಿದ ಯಾವುದನ್ನೂ ನೆರವೇರಿಸಿಲ್ಲ, ನೆರವೇರಿಸುವುದೂ ಇಲ್ಲ. 
 

union minister pralhad joshi slams on congress at davanagere gvd
Author
First Published Mar 6, 2023, 12:30 AM IST

ದಾವಣಗೆರೆ (ಮಾ.06): ಚುನಾವಣೆ ಸಮೀಪಿಸಿದಾಗ ವಿವಿಧ ಯೋಜನೆಗಳಿಗೆ ಗ್ಯಾರಂಟಿ ನೀಡುವ ಕಾಂಗ್ರೆಸ್ಸಿನ ಮಾತು ನಂಬಬೇಡಿ. ಕಾಂಗ್ರೆಸ್ಸಿಗರು ಗ್ಯಾರಂಟಿ ನೀಡಿದ ಯಾವುದನ್ನೂ ನೆರವೇರಿಸಿಲ್ಲ, ನೆರವೇರಿಸುವುದೂ ಇಲ್ಲ. ಕೊಟ್ಟ ಮಾತಿನಂತೆ ಯೋಜನೆಗಳ ಅನುಷ್ಠಾನಗೊಳಿಸುವ ನರೇಂದ್ರ ಮೋದಿ ನೇತೃತ್ವದ ಡಬಲ್‌ ಇಂಜಿನ್‌ ಸರ್ಕಾರಕ್ಕೆ ಪ್ರಾಶಸ್ತ್ಯ ನೀಡಿ ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ, ಸೌಲಭ್ಯ ವಿತರಿಸಿ ಮಾತನಾಡಿ, ಚುನಾವಣೆ ಹತ್ತಿರವಿದ್ದಾಗ ವಿವಿಧ ಯೋಜನೆ ಘೋಷಿಸುವ ಕಾಂಗ್ರೆಸ್ಸಿಗರು ಅವುಗಳನ್ನು ಅನುಷ್ಠಾನಗೊಳಿಸಿದ್ದು ಆ ಪಕ್ಷದ 58 ವರ್ಷದ ಆಡಳಿತದಲ್ಲೇ ಇಲ್ಲ ಎಂದರು. 

ವಿಧಾನಸಭೆ ಚುನಾವಣೆ ಬರುತ್ತಿದ್ದಂತೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್ಸಿಗರು ಘೋಷಿಸಿದ್ದಾರೆ. 58 ವರ್ಷ ಆಳಿದ ಕಾಂಗ್ರೆಸ್‌ ಅವಧಿಯಲ್ಲಿ ದೇಶದ ಜನತೆ ವಿದ್ಯುತ್‌ ಇಲ್ಲದೇ, ಕತ್ತಲಲ್ಲೇ ಇರಬೇಕಾದ ಸ್ಥಿತಿ ಇತ್ತು. ಅಗತ್ಯಕ್ಕೆ ತಕ್ಕಷ್ಟುವಿದ್ಯುತ್‌ ಉತ್ಪಾದನೆ ಇರಲಿಲ್ಲ. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 8 ವರ್ಷದಲ್ಲೇ ಇಡೀ ದೇಶಕ್ಕೆ ಆಗಿ, ಉಳಿಯುವಷ್ಟುಹೆಚ್ಚುವರಿ ಕಲ್ಲಿದ್ದಲು ಉತ್ಪಾದನೆ ಮಾಡುತ್ತಿದ್ದೇವೆ. ಈಗ ಉಚಿತ ವಿದ್ಯುತ್‌ ಕೊಡುತ್ತೇವೆನ್ನುವ ಕಾಂಗ್ರಸ್ಸಿನ ಹಣೆಬರಹದಲ್ಲಿ ಅಗತ್ಯಕ್ಕೆ ತಕ್ಕಷ್ಟುಕಲ್ಲಿದ್ದಲು ಉತ್ಪಾದನೆ ಆಗುತ್ತಿರಲಿಲ್ಲ ಎಂದು ಟೀಕಿಸಿದರು.

ಹಣ ಕೊಟ್ಟು ಜನರನ್ನು ತರುವುದು ಜೆಡಿಎಸ್‌, ಕಾಂಗ್ರೆಸ್‌ ಸಂಸ್ಕೃತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕಾಂಗ್ರೆಸ್‌ ಅಭಿವೃದ್ಧಿಯಲ್ಲಿ ಹಿಂದೆ: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ ಘೋಷಿಸಿ ಕೈಬಿಟ್ಟಯೋಜನೆಗಳ ಅನುಷ್ಠಾನಕ್ಕೆ ತರುವುದೇ ಮೊದಲ ಯೋಜನೆಯಾಗಿ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್‌ ಅಭಿವೃದ್ಧಿ ಕೆಲಸ ಮಾಡಿದ್ದರೆ, ಘೋಷಿಸಿದ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಂದಿದ್ದರೆ ಈಗ ನಮ್ಮ ಸರ್ಕಾರ ಯೋಜನೆಗಳ ಜಾರಿಗೆ ತರಬೇಕಿರಲಿಲ್ಲ. ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಾಗ 8 ಕೋಟಿ ಜನರ ಮನೆಯಲ್ಲಿ ಗ್ಯಾಸ್‌ ಸ್ಟೌವ್‌ ಇತ್ತು. ಈಗ 9 ಕೋಟಿ ಜನರಿಗೆ ಉಜ್ವಲ ಯೋಜನೆಯಡಿ ಗ್ಯಾಸ್‌ ಸಂಪರ್ಕ ನೀಡಲಾಗಿದೆ. ಹಿಂದೆ 349 ರು.ಗೆ ಸಿಗುತ್ತಿದ್ದ ಎಲ್‌ಇಡಿ ಬಲ್‌್ಬನ್ನು ಉಜಾಲ ಯೋಜನೆಯಲ್ಲಿ ಕೇವಲ 70 ರು.ಗೆ ನೀಡಿ, ಶೇ.40 ವಿದ್ಯುತ್‌ ಉಳಿತಾಯ ಮಾಡಲಾಗುತ್ತಿದೆ. ಅನೇಕ ಮಹಿಳೆಯರು ಸ್ವ ಉದ್ಯಮ ಆರಂಭಿಸಿ, ಯಶಸ್ವಿಯಾಗುವ ಜೊತೆಗೆ ದೇಶದ ಆರ್ಥಿಕತೆಗೂ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಹ್ಲಾದ ಜೋಶಿ ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಮಾತನಾಡಿ, ದಾವಣಗೆರೆ ಇತಿಹಾಸದಲ್ಲೇ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ನೀಡುವ ಕಾರ್ಯಕ್ರಮ ಮೊದಲ ಸಲ ಹಮ್ಮಿಕೊಳ್ಳಲಾಗಿದೆ. 64 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಇಂದು ಸಾಂಕೇತಿಕವಾಗಿ 119 ಮಂದಿಗೆಗೆ ಮಾತ್ರ ಸೌಲಭ್ಯ ನೀಡುತ್ತಿದ್ದೇವೆ ಎಂದರು. ಶಾಸಕ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ ಅಧ್ಯಕ್ಷತೆ ವಹಿಸಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್‌ , ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್‌.ವಿ.ರಾಮಚಂದ್ರ, ಪ್ರೊ.ಎನ್‌.ಲಿಂಗಣ್ಣ, ಕೇಂದ್ರ ಪರಿಹಾರ ಸಮಿತಿ ಸದಸ್ಯ ಎಂ.ಬಸವರಾಜ ನಾಯ್ಕ, ಮೇಯರ್‌ ವಿನಾಯಕ ಪೈಲ್ವಾನ್‌, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್‌ ವರಿಷ್ಠ ಸಿ.ಬಿ.ರಿಷ್ಯಂತ್‌, ಜಿಪಂ ಸಿಇಒ ಡಾ.ಎ.ಚನ್ನಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ದೇಶದಲ್ಲಿ 42 ಕೋಟಿ ಜನರ ಜನಧನ್‌ ಖಾತೆಗೆ ಮೊಬೈಲ್‌, ಆಧಾರ್‌ ಲಿಂಕ್‌ ಮಾಡಿದ್ದರಿಂದ ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುತ್ತಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಶೇ.85ರಷ್ಟುಹಣ ಮಧ್ಯವರ್ತಿಗಳೇ ನುಂಗಿರುತ್ತಿದ್ದರು. ಜನಧನ್‌ ಖಾತೆ ಆರಂಭಕ್ಕೆ ವಿರೋಧಿಸಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಏನೇ ಹೇಳಿದರೂ, ಮಾಡಿದರೂ ಅದರ ಹಿಂದೆ ದೂರದೃಷ್ಟಿ ಇರುತ್ತದೆಂಬ ಅರಿವಾಗಿದೆ.
-ಪ್ರಹ್ಲಾದ ಜೋಶಿ, ಕೇಂದ್ರ ಕಲ್ಲಿದ್ದಲು ಸಚಿವ

ಪ್ರಧಾನಿ ಮೋದಿ ಸಮ್ಮುಖ ಯಾವ ನಾಯಕರೂ ಪಕ್ಷ ಸೇರೋಲ್ಲ: ಕೇಂದ್ರ ಸಚಿವ ಜೋಶಿ

ಕುಡಿಯುವ ನೀರಿನ ಯೋಜನೆಗಳಿಗಾಗಿ 9 ಸಾವಿರ ಕೋಟಿ ರು. ಮೀಸಲಿಟ್ಟಿದ್ದು, ರಾಜ್ಯದ ಪ್ರತಿ ಗ್ರಾಮಕ್ಕೂ ಶುದ್ಧ ನೀರು ಕೊಟ್ಟು ದಾಹ ಮುಕ್ತ ಕರ್ನಾಟಕ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಆಗಬೇಕೆಂಬ ಸಂಕಲ್ಪ ಇದ್ದು, ಅದು ಮುಂದಿನ ದಿನಗಳಲ್ಲಿ ಕಾರ್ಯ ರೂಪಕ್ಕೆ ಬರಲಿದೆ.
-ಭೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ

Follow Us:
Download App:
  • android
  • ios