ಕೇಂದ್ರ ಸಚಿವ ಸುರೇಶ್​ ಅಂಗಡಿಯವರು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ.

ನವದೆಹಲಿ, (ಸೆ.23): ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ನಿಧನರಾಗಿದ್ದಾರೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು,

ಅಧಿವೇಶನ: ಕಡ್ಡಾಯ ಟೆಸ್ಟ್‌ನಲ್ಲಿ ಸಚಿವ ಸರೇಶ್‌ ಅಂಗಡಿಗೆ ಕೊರೋನಾ ದೃಢ 

ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಬುಧವಾರ) ಕೊನೆಯುಸಿರೆಳೆದಿದ್ದಾರೆ. ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕೊರೋನಾ ಟೆಸ್ಟ್ ಕಡ್ಡಾಯವಾಗಿತ್ತು.

ಈ ಹಿನ್ನೆಲೆಯಲ್ಲಿ ಅಂಗಡಿಯವರಿಗೆ ಸೆಪ್ಟೆಂಬರ್​ 11ರಂದು ಟೆಸ್ಟ್ ಮಾಡಿಸಿಕೊಂಡಿದ್ದು ವರದಿಯಲ್ಲಿ ಕೊರೋನಾ ದೃಢಪಟ್ಟಿತ್ತು. ಯಾವುದೇ ರೋಗ ಲಕ್ಷಣಗಳಿಲ್ಲದೇ ಪಾಸಿಟಿವ್ ದೃಢಪಟ್ಟಿತ್ತು.ಅಂದಿನಿಂದ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಅಂಗಡಿಯವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
"

 1955 ಜೂನ್ 1ರಂದು ಜನಿಸಿದ ಅಂಗಡಿಯವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿ ಸಂಸದರಾಗಿದ್ದರು. 2004, 2009, 2014 ಮತ್ತು 2019ರಲ್ಲಿ ಸತತ ನಾಲ್ಕು ಬಾರಿ ಬೆಳಗಾವಿಯಿಂದ ಆರಿಸಿ ಬಂದಿದ್ದರು. ಪ್ರಸ್ತುತ ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವರಾಗಿದ್ದರು.

ಸದಾ ಲವಲವಿಕೆಯಿಂದ ಇರುತ್ತಿದ್ದ ಸುರೇಶ್‌ ಅಂಗಡಿಯವರು ಕೇಂದ್ರ ಸಚಿವರಾದ ಬಳಿಕ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದರು. ಇದೀಗ ಸುರೇಶ್‌ ಅಂಗಡಿಯವರ ಹಠಾತ್‌ ನಿಧನ ಜನತೆಯನ್ನು ದಿಗ್ಬ್ರಮೆಗೊಳಿಸಿದೆ.

"