Asianet Suvarna News Asianet Suvarna News

ಉಡುಪಿ ವಿಡಿಯೋ ಕೇಸ್‌ ಸಿಐಡಿ ತನಿಖೆಗೆ: ರಾಜ್ಯ ಸರ್ಕಾರದಿಂದ ಆದೇಶ

ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಉಡುಪಿಯ ಪಾರಾಮೆಡಿಕಲ್‌ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. 

Udupi video case for CID investigation Government Order gvd
Author
First Published Aug 8, 2023, 2:20 AM IST

ಉಡುಪಿ (ಆ.08): ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಉಡುಪಿಯ ಪಾರಾಮೆಡಿಕಲ್‌ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಗಂಭೀರವಾದ ಈ ಘಟನೆ ನಡೆದು ವಾರ ಕಳೆದ ಮೇಲೆ ಪ್ರಕರಣ ದಾಖಲಿಸಿಕೊಂಡ ಉಡುಪಿ ಪೊಲೀಸರ ತನಿಖೆಯಲ್ಲೂ ಸಾಕಷ್ಟುಲೋಪಗಳಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿದೆ ಎಂದಿದ್ದಾರೆ. ಜು.18ರಂದು ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದು ವಿದ್ಯಾರ್ಥಿಯೊಬ್ಬಳ ವಿಡಿಯೋ ಮಾಡಿದ ಈ ಪ್ರರಕಣವನ್ನು ಎಸ್‌ಐಟಿಗೆ ಹಸ್ತಾಂತರಿಸುವಂತೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. 

ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ: ಸಚಿವ ಸಂತೋಷ್‌ ಲಾಡ್‌

ಆದರೆ ಕಾಂಗ್ರೆಸ್‌ ಮಂತ್ರಿಗಳು, ನಾಯಕರು ಈ ಪ್ರಕರಣವನ್ನು ಮಕ್ಕಳಾಟ, ಇದಕ್ಕೆ ರಾಜಕೀಯದ ಆಯಾಮ ನೀಡುವುದು ಬೇಡ ಎಂದು ಹೇಳಿದ್ದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿ ವಿದ್ಯಾರ್ಥಿನಿಯರು ವಿಡಿಯೋ ಮಾಡಿರುವುದನ್ನು ಒಪ್ಪಿಕೊಂಡಿದ್ದರೂ ಮೊಬೈಲ್‌ನಿಂದ ವಿಡಿಯೋವನ್ನು ಡಿಲೀಟ್‌ ಮಾಡಿದ್ದು, ಮೊಬೈಲಿನ ಡಾಟಾ ರಿಕವರಿಯಲ್ಲೂ ಅದು ಲಭ್ಯವಾಗಿಲ್ಲ.  ದೆಹಲಿಯಿಂದ ಬಂದಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್‌ ಕೂಡ ತಮ್ಮ ತನಿಖೆಯಿಂದ ಯಾವುದೇ ನಿರ್ಧಾರಕ್ಕೆ ಬರಲಾಗದೆ ಒಂದೇ ದಿನದಲ್ಲಿ ಹಿಂದಕ್ಕೆ ಹೋಗಿದ್ದರು.

ಸುಮೋಟೋ ಕೇಸ್‌ ದಾಖಲು: ಆರಂಭದಲ್ಲಿ ನಿರ್ಲಕ್ಷ ತೋರಿಸಿದ ಪೊಲೀಸರು ಜು.25ರಂದು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ತನಿಖಾಧಿಕಾರಿಯನ್ನು ಬದಲಾಯಿಸಿದರೂ ತನಿಖೆಯಲ್ಲಿ ಯಾವುದೇ ಮಹತ್ವದ ಪ್ರಗತಿಯಾಗದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಅನಿವಾರ್ಯವಾಗಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ.

ಕೇಸ್‌ ಮುಚ್ಚಿ ಹಾಕಲು ಸಿಐಡಿ ತನಿಖೆಗೆ: ನಗರದ ಪ್ಯಾರಾಮೆಡಿಕಲ್‌ ಕಾಲೇಜಿನ ವಿಡಿಯೋ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಸಿಐಡಿಗೆ ವರ್ಗಾಯಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಮಾಡುತ್ತಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಆರೋಪಿಸಿದ್ದಾರೆ. 

ಮೋದಿ ಬಂದ ಮೇಲೆ ರೈಲ್ವೆ ಇಲಾಖೆ ಚಿತ್ರಣ ಬದಲು: ಪ್ರಲ್ಹಾದ್‌ ಜೋಶಿ

ರಾಜ್ಯದಾದ್ಯಂತ ಈ ಪ್ರಕರಣದ ಬಗ್ಗೆ ತೀವ್ರ ಜನಾಕ್ರೋಶ, ಪ್ರತಿಭಟನೆಗೆ ಮಣಿದ ಸರ್ಕಾರ ಈ ಹಿಂದಿನ ತನಿಖಾಧಿಕಾರಿಯನ್ನು ಬದಲಾಯಿಸಿದ ಬಳಿಕ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ತನಿಖೆ ತೀವ್ರಗೊಳಿಸಿ, ಪ್ರಕರಣದ ಸಂತ್ರಸ್ತ ಹಾಗೂ ಆರೋಪಿ ವಿದ್ಯಾರ್ಥಿನಿಯರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆಯುವ ಮೂಲಕ ಹಲವು ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು. ಹಾಗೂ ಆರೋಪಿ ವಿದ್ಯಾರ್ಥಿನಿಯ ತಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಸಕ್ರಿಯ ಸದಸ್ಯ ಎಂಬುದು ಈ ತನಿಖೆಯಿಂದ ಬೆಳಕಿಗೆ ಬಂದಿತ್ತು. ಆದರೆ, ರಾಜ್ಯ ಸರ್ಕಾರ ಪ್ರಕರಣದ ಆರಂಭದಿಂದಲೂ ತನಿಖೆಯ ಪ್ರತಿಹಂತದಲ್ಲೂ ಪ್ರಭಾವ ಬೀರುವ ಯತ್ನ ಮಾಡಿದ್ದು, ಇದೀಗ ಆರೋಪಿಗಳನ್ನು ರಕ್ಷಿಸುವುದಕ್ಕಾಗಿಯೇ ಸಿಐಡಿಗೆ ವರ್ಗಾಯಿಸಿದೆ ಎಂದು ಅವರು ನೇರ ಆರೋಪ ಮಾಡಿದರು.

Follow Us:
Download App:
  • android
  • ios