Asianet Suvarna News Asianet Suvarna News

ಕಂಪ್ಲಿ: ಎಲೆಕ್ಷನ್‌ ಅಖಾಡದಲ್ಲಿ ಕರ್ನಾಟಕದ ಏಕೈಕ ಮಂಗಳಮುಖಿ ಟಿ. ರಾಮಕ್ಕ..!

ಮಂಗಳಮುಖಿಯರು ಸಹ ಎಲ್ಲರಂತೆ ಬದುಕು ಕಟ್ಟಿಕೊಳ್ಳಬೇಕು. ಸ್ವಂತ ಉದ್ಯೋಗ ಕಂಡುಕೊಂಡು ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ನನ್ನಾಸೆ. ಈ ಎಲ್ಲ ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ರಾಜಕೀಯ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಗೊತ್ತಾಗಿದೆ. ಹೀಗಾಗಿಯೇ ಕಂಪ್ಲಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ ಎನ್ನುತ್ತಾರೆ ರಾಮಕ್ಕ.

Transgender T Ramakka Contest From Kampli in Karnataka Assembly Elections 2023 grg
Author
First Published Apr 29, 2023, 10:00 AM IST

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಏ.29):  ‘ಆಯಾ ಜಾತಿ- ಧರ್ಮಗಳ ಮುಖಂಡರು ತಮ್ಮ ಸಮುದಾಯದ ಧ್ವನಿಯಾಗುತ್ತೇವೆ ಎಂದು ಹೇಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತಾರೆ. ಆದರೆ, ಮಂಗಳಮುಖಿಯರಿಗೆ ಧ್ವನಿಯಾಗುವವರು ಯಾರು? ನಮ್ಮ ಕಷ್ಟಗಳನ್ನ ಯಾರ ಮುಂದೆ ಹೇಳಿಕೊಳ್ಳಬೇಕು? ಈಗ ನಾನೇ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶ ಮಾಡಲು ನಿರ್ಧರಿಸಿ, ಚುನಾವಣೆಗೆ ಧುಮುಕಿದ್ದೇನೆ. ಮಂಗಳಮುಖಿಯರು ಎದುರಿಸುತ್ತಿರುವ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗುತ್ತೇನೆ..’
‘ದೇಶಪ್ರೇಮ್‌ ಪಾರ್ಟಿ’ಯಿಂದ ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಟಿ.ರಾಮಕ್ಕ ಅವರು ಚುನಾವಣೆ ಸ್ಪರ್ಧೆಗಿಳಿದ ಉದ್ದೇಶವನ್ನು ಹೀಗೆ ಹೇಳಿದರು.

ಗ್ರಾಮೀಣ ಭಾಗದಲ್ಲಿ ರೈತರು ಬಹಳ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬರುವವರು ಅವರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ. ಮಂಗಳಮುಖಿಯರ ಕಷ್ಟವಂತೂ ಹೇಳತೀರದು. ಮಂಗಳಮುಖಿಯರಿಗೆ ಸಮಾಜದಲ್ಲಿ ಗೌರವವಿಲ್ಲ. ಮತ್ತೊಂದೆಡೆ ಬದುಕಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಎಲ್ಲ ಕಡೆ ಇದೆ. ಹೀಗಾಗಿ ಬಹುತೇಕರು ಭಿಕ್ಷಾಟನೆ ಮೂಲಕ ಜೀವನ ನಿರ್ವಹಣೆ ಮಾಡುವಂತಾಗಿದೆ. ಮಂಗಳಮುಖಿಯರು ಸಹ ಎಲ್ಲರಂತೆ ಬದುಕು ಕಟ್ಟಿಕೊಳ್ಳಬೇಕು. ಸ್ವಂತ ಉದ್ಯೋಗ ಕಂಡುಕೊಂಡು ಸ್ವಾವಲಂಬಿಯಾಗಿ ಬದುಕಬೇಕು ಎಂಬುದು ನನ್ನಾಸೆ. ಈ ಎಲ್ಲ ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ರಾಜಕೀಯ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಗೊತ್ತಾಗಿದೆ. ಹೀಗಾಗಿಯೇ ಕಂಪ್ಲಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ ಎನ್ನುತ್ತಾರೆ ರಾಮಕ್ಕ.

ಮೈಸೂರು: ರಾಜಕೀಯ ವ್ಯವಸ್ಥೆಯ ಸರ್ಜರಿಗೆ ಬಂದಿದ್ದಾರೆ ವೈದ್ಯ ರೇವಣ್ಣ..!

1984ರಲ್ಲಿ ಮಂಗಳಮುಖಿ ಎನಿಸಿದ ಟಿ.ರಾಮಕ್ಕ ಜೋಗತಿನೃತ್ಯವೂ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನ ಪಡೆದು ತಮ್ಮ ಜೀವನ ಕಟ್ಟಿಕೊಂಡವರು. ಇನ್ನು, ವಾರಕ್ಕೊಮ್ಮೆ ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುವ ರಾಮಕ್ಕ ಬಾದನಹಟ್ಟಿಸ್ವಭಾವತಃ ಮಿತಭಾಷಿ. ಅವರು ಕುರುಗೋಡು ಸೇರಿದಂತೆ ಸುತ್ತಲ ಹತ್ತಾರು ಗ್ರಾಮಗಳಲ್ಲಿ ಹೆಚ್ಚು ಪರಿಚಿತರು.

‘ಶಾಲೆಗೆ ಹೋಗಿ ಅಕ್ಷರ ಕಲಿಯದಿದ್ದರೂ ಓದು, ಬರೆಯುವಷ್ಟು ಅಕ್ಷರದ ಅರಿವಿದೆ. ಸಂಸ್ಕಾರವಿದೆ, ಮಿಗಿಲಾಗಿ ಜನರ ಸಂಕಷ್ಟಗಳನ್ನು ಅರಿಯುವ ತಾಯಿ ಹೃದಯವಿದೆ. ಹೀಗಾಗಿಯೇ ರಾಮಕ್ಕ ಅವರನ್ನು ಚುನಾವಣೆ ಅಖಾಡಕ್ಕೆ ಇಳಿಸಿದ್ದೇವೆ’ಎನ್ನುತ್ತಾರೆ ದೇಶಪ್ರೇಮ್‌ ಪಾರ್ಟಿಯ ಜಿಲ್ಲಾಧ್ಯಕ್ಷ ಷಣ್ಮುಖಪ್ಪ.

ಕಂಪನಿ ಕೆಲಸ ಬಿಟ್ಟು, ರಾಜಕೀಯಕ್ಕೆ ಬಂದ ಎಂಬಿಎ ಪದವೀಧರೆ: ಎಎಪಿಯಿಂದ ಸುಮನಾ ಸ್ಪರ್ಧೆ

ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಂಗವಿಕಲರ ಸಮಸ್ಯೆಗಳನ್ನು ಕೇಳುವವರಿಲ್ಲ. ದುಡಿಯುವ ಜನರಿಗೆ ಕೆಲಸವಿಲ್ಲ. ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದೇ ನನ್ನ ಒತ್ತಾಸೆ. ‘ಟ್ರಕ್‌’ ನನ್ನ ಚುನಾವಣೆ ಚಿಹ್ನೆ. ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿದ್ದೇನೆ. ಪ್ರಚಾರಕ್ಕೆ ಹಣವೇ ಮುಖ್ಯವಲ್ಲ. ಜನರೇ ದೇಣಿಗೆ ನೀಡಿ ಚುನಾ ವಣೆ ವೆಚ್ಚ ಭರಿಸುತ್ತಿದ್ದಾರೆ. ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಇದೆ. ಆದರೂ ನನಗೆ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎನ್ನು ತ್ತಾರೆ ಮಂಗಳಮುಖಿ ಟಿ.ರಾಮಕ್ಕ.

ಮಂಗಳಮುಖಿಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಬಡಜನರು ಎದುರಿಸುತ್ತಿರುವ ಕಷ್ಟಗಳನ್ನು ವಿಧಾನಸಭೆಯಲ್ಲಿ ತಿಳಿಸಬೇಕು ಎಂಬುದೇ ನನ್ನಾಸೆ. ಹೀಗಾಗಿಯೇ ಚುನಾವಣೆ ಅಖಾಡಕ್ಕೆ ಇಳಿದಿದ್ದೇನೆ ಅಂತ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಮಂಗಳಮುಖಿ ಟಿ.ರಾಮಕ್ಕ ತಿಳಿಸಿದ್ದಾರೆ.  

Follow Us:
Download App:
  • android
  • ios