ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ಟೋಲ್‌ ದರವನ್ನು ಸದ್ದಿಲ್ಲದಂತೆ ಶೇ.22ರಷ್ಟು ಹೆಚ್ಚಿಸಿರುವುದು ಅನ್ಯಾಯದ ಪರಮಾವಧಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರ (ಜೂ.15): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ಟೋಲ್‌ ದರವನ್ನು ಸದ್ದಿಲ್ಲದಂತೆ ಶೇ.22ರಷ್ಟು ಹೆಚ್ಚಿಸಿರುವುದು ಅನ್ಯಾಯದ ಪರಮಾವಧಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಟೋಲ್‌ ದರ ಏರಿಕೆ ಖಂಡನೀಯ. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರಗಳೆರಡೂ ಸೇರಿ ಜನರ ಮೇಲೆ ಮತ್ತಷ್ಟುಭಾರ ಹೊರೆಸಿವೆ. ಏಕಾಏಕಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 30 ರಿಂದ 200 ರು.ವರೆಗೆ ಟೋಲ್‌ ದರ ಹೆಚ್ಚಳ ಮಾಡಿರುವುದು ಸರಿಯಲ್ಲ, ಸಮರ್ಥನೀಯವೂ ಅಲ್ಲ. 

ಇಷ್ಟು ದೊಡ್ಡ ಪ್ರಮಾಣದಲ್ಲಿ ಟೋಲ್‌ ದರ ಹೆಚ್ಚಿಸಿರುವುದು ಹೆದ್ದಾರಿಯಲ್ಲಿ ಹಗಲು ದರೋಡೆಯಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ. ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಭೂಮಿ ಕೊಟ್ಟಿದ್ದು ರಾಜ್ಯ ಸರ್ಕಾರ. ಇದ್ದ ನೆಲೆ ಕಳೆದುಕೊಂಡವರು ನಮ್ಮ ರೈತರು. ಈಗ ಶೇ.20ರಷ್ಟು ಸುಲಿಗೆಗೆ ಒಳಗಾಗುತ್ತಿರುವವರು ಸಹ ಕನ್ನಡಿಗರೇ ಎಂದಿದ್ದಾರೆ. ಕನ್ನಡಿಗರನ್ನು ಕೊಳ್ಳೆ ಹೊಡೆಯುವ ಧೂರ್ತ ನಡೆಗೆ ನಮ್ಮ ಧಿಕ್ಕಾರ. ಕೇಂದ್ರ, ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನೇ ಅಧಿಕೃತ ವ್ಯವಹಾರ ಮಾಡಿಕೊಂಡಿವೆ. ಇನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳೆಂಬ ತುಪ್ಪ ಸವರಿ, ಅದೇ ಗ್ಯಾರಂಟಿಗಳನ್ನು ಇಲಾಖೆಗಳ ಮೂಲಕವೇ ಜನರ ಮೇಲೆ ಹೊರೆ ಹೇರುತ್ತಿದೆ. 

ಕಾಂಗ್ರೆಸ್‌ಗೆ ಮತ ನೀಡಿರುವುದು ಕೆಲಸಕ್ಕೋ, ಹೈಕಮಾಂಡ್‌ ಗುಲಾಮಗಿರಿಗೋ?: ಎಚ್‌ಡಿಕೆ

ಒಂದು ಕೈಯ್ಯಲ್ಲಿ ಕೊಟ್ಟು ಎರಡು ಕೈಯಲ್ಲಿ ಬರೆ ಎಳೆಯುತ್ತಿದೆ ಎಂದು ಟೀಕಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರವು ಹೆಚ್ಚಳ ಮಾಡಿರುವ ಟೋಲ್‌ ದರವನ್ನು ಕೂಡಲೇ ಹಿಂಪಡೆಯಬೇಕು. ಹೆದ್ದಾರಿ ಪ್ರಾಧಿಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು. ಬೆಲೆ ಬರೆ ಬವಣೆಯಿಂದ ಬಸವಳಿದಿರುವ ಜನರು ರೊಚ್ಚಿಗೇಳುವ ಮುನ್ನ ಟೋಲ್‌ ದರ ಇಳಿಯಬೇಕು. ಪ್ರತಿಪಕ್ಷವಾಗಿದ್ದಾಗ ಬೆಲೆ ಏರಿಕೆ ವಿರುದ್ಧ, ಆಡಳಿತ ಪಕ್ಷವಾದ ಮೇಲೆ ಬೆಲೆ ಏರಿಕೆ ಪರ ಇದ್ದರೆ, ಜನರು ತಕ್ಕಪಾಠ ಕಲಿಸುತ್ತಾರೆ. ಊಸರವಳ್ಳಿ ವೈಖರಿ ಸಂಶಯಕ್ಕೆ ದಾರಿ. ಹಿಂದಿನ ಬಿಜೆಪಿ ಸರ್ಕಾರದ ದಾರಿಯಲ್ಲಿಯೇ ಈ ಸರ್ಕಾರವು ನಡೆಯುತ್ತಿದೆಯಾ ಎನ್ನುವ ಅನುಮಾನ ಆರಂಭದಲ್ಲಿಯೇ ಬರುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಟೋಲ್‌ ದರ ಏರಿಕೆ ಸಹಜ: ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್‌ ಹೆಚ್ಚಳ ಸಹಜ. ಈ ಹೈವೆಗೆ ಏಪ್ರಿಲ್‌ನಲ್ಲಿ ಟೋಲ್‌ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ ಈಗ ಶೇ.22 ಏರಿಕೆ ಆಗಿದೆ ಎಂದು ಸಂಸದ ಪ್ರತಾಪ್‌ ಸಿಂಹ ಟೋಲ್‌ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು. ಅವರು ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ಹೆಚ್ಚಳ ಕುರಿತು ಪ್ರತಿಕ್ರಿಯಿಸಿ, ಟೋಲ್‌ಗಳಲ್ಲಿ ಫಾಸ್ಟ್‌ ಟ್ಯಾಗ್‌ ವರ್ಕ್ ಆಗ್ತಿದೆ. ಸಿಸ್ಟಮ್‌ ಸಮಸ್ಯೆಯೂ ಇಲ್ಲ. ಟೋಲ್‌ ಸಂಗ್ರಹದ ಆರಂಭದಲ್ಲಿ ಕೆಲ ಸಮಸ್ಯೆ ಇತ್ತಾದರೂ ಈಗ ಇಲ್ಲ ಎಂದ ಅವರು, ಫಾಸ್ಟ್‌ ಟ್ಯಾಗ್‌ ಇರದಿದ್ದರೆ ಡಬಲ್‌ ಚಾಜ್‌ರ್‍ ಕಟ್ಟುವುದೂ ಕಡ್ಡಾಯ ಎಂದರು.

ರಾಮ​ನಗರ, ಬನ್ನೇ​ರು​ಘ​ಟ್ಟ​ದಲ್ಲಿ ಆನೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ

ಶಕ್ತಿ ಇದ್ರೆ ಟೋಲ್‌ ತೆಗೆಯಲಿ: ದೇಶದ ಎಲ್ಲಾ ಟೋಲ್‌ಗಳಲ್ಲಿ ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಟೋಲ್‌ ದರ ಏರಿಸಲಾಗುತ್ತದೆ. ಹಾಗೆಯೇ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್‌ ಶುಲ್ಕ ಸಹ ಹೆಚ್ಚಾಗಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಶಕ್ತಿ ಇದ್ದರೆ ರಾಜ್ಯ ವ್ಯಾಪ್ತಿಯಲ್ಲಿನ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ವೆಚ್ಚ ಭರಿಸಿ, ಟೋಲ್‌ ತೆಗೆದು ಹಾಕಲಿ ಎಂದು ಅವರು ಸವಾಲು ಹಾಕಿದರು.