ರಾಜೀನಾಮೆ ನೀಡಿದ 24 ಗಂಟೆಯಲ್ಲೇ ಶಾಸಕ ಬಿಜೆಪಿಗೆ ಸೇರ್ಪಡೆ..!
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ದಿನೇ ದಿನೇ ರಾಜಕೀಯ ಹೈಡ್ರಾಮಾಗಳು ನಡೆಯುತ್ತಿದ್ದು, ರಾಜೀನಾಮೆ ನೀಡಿದ 24 ಗಂಟೆಗಳಲ್ಲೇ ಶಾಸಕರೊಬ್ಬರು ಬಿಜೆಪಿ ಸೇರಿದ್ದಾರೆ.
ಕೊಲ್ಕತ್ತಾ, (ಫೆ.02): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಆದ್ರೆ, ಚುನಾವಣೆ ಘೋಷಣೆಗೂ ಮುನ್ನವೇ ಆಡಳಿರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ.
ಹೌದು...ಈ ಬಾರಿ ಪಶ್ಚಿಮ ಬಂಗಾಲದಲ್ಲಿ ಕೇಸರ ಬಾವುಟ ಹಾರಿಸಲೇಬೇಕೆಂದು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಮತ್ತೊಂದೆಡೆ ದೀದಿ ಕೂಡ ತಮ್ಮ ಹಿಡಿತ ಸಡಿಲಿಸದೇ ಬಿಗಿಹಿಡಿದುಕೊಂಡಿದ್ದಾರೆ.
ಇದರ ಮಧ್ಯೆ ಟಿಎಂಸಿ ಹಲವು ಹಾಲಿ ಶಾಸಕರು, ಸಂಸದರು ರಾಜೀನಾಮೆ ನೀಡಿ ಬಿಜೆಪಿಯತ್ತ ಗುಳೆ ಹೋಗುತ್ತಿರುವುದು ದೀದಿ ನಿದ್ದೆಗೆಡಿಸಿದೆ. ಈಗಾಗಲೇ ಹಲವು ಶಾಸಕರುಗಳು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾಗಿದೆ. ಇದೀಗ ಮತ್ತೋರ್ವ ಶಾಸಕ ರಾಜೀನಾಮೆ ನೀಡಿದ 24 ಗಂಟೆಯಲ್ಲೇ ಬಿಜೆಪಿ ಸೇರ್ಡೆಯಾಗಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ, ಜನ ಸೇವೆಗೆ ಅವಕಾಶ ನೀಡಿದ ಸಿಎಂಗೆ ಧನ್ಯವಾದ ಅಂದ್ರು...!
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಿಂದ ನಿನ್ನೆಯಷ್ಟೇ (ಸೋಮವಾರ) ಹೊರ ಬಂದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಡೈಮಂಡ್ ಹಾರ್ಬರ್ ಕ್ಷೇತ್ರದ ಶಾಸಕ ದೀಪಕ್ ಹಲ್ದಾರ್ ಇಂದು (ಮಂಗಳವಾರ) ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಮುಖಂಡರಾದ ಮುಕುಲ್ ರಾಯ್, ಸವೇಂದು ಅಧಿಕಾರಿ ನೇತೃತ್ವದಲ್ಲಿ ದೀಪಕ್ ಹಲ್ದಾರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷದ ಧ್ವಜ ನೀಡಿ ಅವರಿಗೆ ಸ್ವಾಗತ ಕೋರಿದರು. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶಾಸಕರ ಪಕ್ಷಾಂತರ ಪರ್ವ ಮುಂದುವರಿದಿದೆ.