ಬೇರೆ ರಾಜಕಾರಣಿಗಳ ಮಕ್ಕಳಿಗೂ ಟಿಕೆಟ್‌ ಇಲ್ಲ ಎಂದಾದರೆ ನಮ್ಮ ಮಕ್ಕಳಿಗೂ ಬೇಡ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತೀಕ್ಷ$್ಣವಾಗಿ ಹೇಳಿದ್ದಾರೆ.

ಬೆಂಗಳೂರು (ಮಾ.14) : ಬೇರೆ ರಾಜಕಾರಣಿಗಳ ಮಕ್ಕಳಿಗೂ ಟಿಕೆಟ್‌ ಇಲ್ಲ ಎಂದಾದರೆ ನಮ್ಮ ಮಕ್ಕಳಿಗೂ ಬೇಡ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ (V Somanna)ತೀಕ್ಷ$್ಣವಾಗಿ ಹೇಳಿದ್ದಾರೆ.

ಸೋಮವಾರ ವಿಧಾನಸೌಧ(Vidhanasoudha)ದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಮಕ್ಕಳ ಮೇಲೆ ಪ್ರೀತಿ ಇರುತ್ತದೆ. ಹಾಗಂತ ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್‌ ಇಲ್ಲ ಎನ್ನುವುದಾದರೆ ನಮಗೂ ಬೇಡ. ಮಗನಿಗೆ ಅವಕಾಶ ಸಿಗಬೇಕು ಎಂದು ಹಣೆಬರಹ ಇದ್ದರೆ ಟಿಕೆಟ್‌ ಸಿಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ

ಬೇರೆ ರಾಜಕಾರಣಿಗಳ ಮಕ್ಕಳು ಅಧಿಕಾರದಲ್ಲಿ ಇರಬಹುದು. ಆದರೆ, ನಮ್ಮ ಮಕ್ಕಳು? ನನಗೇನೂ ಪುತ್ರ ವ್ಯಾಮೋಹ ಇಲ್ಲ. ಅವನು ಪಾಪ ಡಾಕ್ಟರ್‌. ಅವನಿಗೂ ಅವನದೇ ಆದ ಭಾವನೆಗಳು ಇರುತ್ತವೆ. ನಾನು ಟಿಕೆಟ್‌ ಕೇಳಿಯೇ ಇಲ್ಲ. ನನಗೇನು ನೀತಿ ಮಾಡುತ್ತಾರೆಯೋ ಅದನ್ನೇ ಎಲ್ಲರಿಗೂ ಮಾಡಬೇಕು ಎಂದರು.

ನೀವು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲು ಸಿದ್ಧರಾಗಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಅಸಮಾಧಾನ ಇದೆ ಎಂದು ಎಲ್ಲಿಯಾದರೂ ಹೇಳಿದ್ದೇನೆಯೇ? ನನ್ನ ಮಗನಿಗೆ ಟಿಕೆಟ್‌ ಕೇಳಿದ್ದೇನೆಯೇ? ನಾಲ್ಕು ಗೋಡೆ ಮಧ್ಯೆ ಯಾರಿಗೆ, ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ರಾಜಕಾರಣದಲ್ಲಿ ಕವಲುದಾರಿಗಳು ಇರುತ್ತವೆ. ನಾನೇನೂ ಸನ್ಯಾಸಿಯಲ್ಲ. ಚುನಾವಣೆಗೆ ಬಿಜೆಪಿ ಟಿಕೆಟ್‌ ನೀಡಿದರೆ ನಿಂತುಕೊಳ್ಳುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ಹೇಳಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವೆಲ್ಲ ಸ್ನೇಹಿತರು. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರವರ ಕೆಲಸ ಅವರು ಮಾಡುತ್ತಾರೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಬಿಜೆಪಿಯಲ್ಲಿ ಬೇಸರ ಇದೆ ಎಂದು ಹೇಳಿಲ್ಲ. ಕಾಂಗ್ರೆಸ್‌ ಮುಖಂಡರ ಪ್ರೀತಿಗೆ ಬೇಡ ಎಂದಿದ್ದೇನಾ? ನನ್ನ ಮೇಲೆ ಅಭಿಮಾನಕ್ಕೆ ಏನೋ ಹೇಳಿರಬೇಕು. ರಾಜಕಾರಣಿಗಳಿಗೆ ಬದ್ಧತೆ ಇರಬೇಕು. ಕಾಂಗ್ರೆಸ್‌ಗೆ ಬರುತ್ತಾರೆ ಎಂಬುದು ಅವರ ಭಾವನೆ. ಅದಕ್ಕೆ ನಾನು ಬೇಡ ಎನ್ನಲು ಸಾಧ್ಯವೆ? ಅವರಿಗೆಲ್ಲಾ ಒಳ್ಳೆಯದಾಗಲಿ ಎಂದರು.

ನನ್ನನ್ನು ಬೆಂಗಳೂರಿಗೆ ಮಾತ್ರ ಯಾಕೆ ಸೀಮಿತ ಮಾಡುತ್ತಿದ್ದೀರಿ? ನನಗೆ ಕೊಟ್ಟಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ. ಉಪಚುನಾವಣೆ, ತುಮಕೂರು ಲೋಕಸಭೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೇನೆ. ಮೊದಲು ಕಾಂಗ್ರೆಸ್‌ನಲ್ಲಿಯೇ ಇದ್ದೆ. ಜನತಾಪಕ್ಷ, ಜನತಾದಳದಲ್ಲಿಯೂ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಹೀಗೆಲ್ಲಾ ಅಗುತ್ತಿರುತ್ತವೆ. ನನ್ನ ಅನಿಸಿಕೆಗಳನ್ನು ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಅಭಿಮಾನಿಗಳು ಸಭೆ ಮಾಡಿದರೆ ಏನು ಮಾಡಲಾಗುತ್ತದೆ? ನಾನು ಮಾಡಬೇಡಿ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

Party Rounds: ಮಗನಿಗೆ ಟಿಕೆಟಿಲ್ಲ ಅಂದಿದಕ್ಕೆ ಕೋಪ, ಬಿಜೆಪಿ ತೊರೆಯುತ್ತಾರಾ ಸೋಮಣ್ಣ?

ಚುನಾವಣೆ ಬಂದಾಗ ನನ್ನನ್ನು ಇಡೀ ರಾಜ್ಯಕ್ಕೆ ಕರೆಸುತ್ತಾರೆ. ಪಕ್ಷ ಏನೇ ಹೇಳಿದರೂ ಅದನ್ನು ಮಾಡುತ್ತಿದ್ದೇನೆ. ನಾನು ಬೆಂಗಳೂರಿಗೆ ಬಂದು 56 ವರ್ಷವಾಯಿತು. ಹಲವು ಏಳು-ಬೀಳುಗಳನ್ನು ಕಂಡಿದ್ದೇನೆ. ಕೆಲಸ ಮಾಡುವವರನ್ನು ಜನರು ಗೌರವಿಸುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ಸೋಮಣ್ಣ. ರಾಜಕಾರಣಿಗಳಿಗೆ ಬದ್ಧತೆ ಇರಬೇಕು ಎಂದು ತಿಳಿಸಿದರು.