ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನನಗೆ ಯಾವುದೇ ರೀತಿಯ ತೊಂದರೆ ಮತ್ತು ಕಿರುಕುಳವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು. 

ಬೆಳಗಾವಿ (ಅ.26): ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನನಗೆ ಯಾವುದೇ ರೀತಿಯ ತೊಂದರೆ ಮತ್ತು ಕಿರುಕುಳವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೇ ಸತೀಶ್‌ ಜಾರಕಿಹೊಳಿಗೆ ಸಮಸ್ಯೆಯಾಗುತ್ತಿದೆ ಎಂಬ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ನನಗೇನೂ ಸರ್ಕಾರದಲ್ಲಿ ಸಮಸ್ಯೆಯಾಗಿಲ್ಲ ಮತ್ತು ನಮಗೆ ಇಲ್ಲಿಯವರೆಗೆ ಯಾವುದೇ ಕಿರುಕುಳ ಆಗಿಲ್ಲ. 

ಒಂದು ವೇಳೆ ಸಮಸ್ಯೆಯಾದರೆ ಹೇಳುತ್ತೇನೆ. ನಮ್ಮದೇನು ಬಂಡಾಯ ಅಲ್ಲ, ನಾನೇನು ಪಕ್ಷದ ವಿರುದ್ಧ ಬಂಡಾಯವೆದ್ದಿಲ್ಲ ಎಂದರು. ಸಿದ್ದರಾಮಯ್ಯ ಅವರು 2013ರಲ್ಲಿ ಇದ್ದಂತೆ 2018ರಲ್ಲೂ ಇದ್ದರು. ಈಗಲೂ ಅದೇ ರೀತಿ ಇದ್ದಾರೆ ಎಂದು ಮುಖ್ಯಮಂತ್ರಿ ಕುರಿತ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಹೆಣ್ಣಿನ ಹಸ್ತಕ್ಷೇಪದಿಂದ ಸರ್ಕಾರಕ್ಕೆ ಕಂಟಕ ಎಂಬ ಮೈಲಾರ ಕಾರ್ಣಿಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಹಳೆಯದಿರಬೇಕು, ಹೊಸದಲ್ಲ. ನಾನು ಅಂಥದ್ದನ್ನೆಲ್ಲ ನಂಬಲ್ಲ ಎಂದರು.

ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲಾ, ಅಮ್ಮ ನೀಡಿದ ಹಳೆಯ ಲಾಕೆಟ್‌ ಎಂದಿದ್ದೇನೆ: ಪಾಚ್ಕೊಳಿ ಎಂದ ನಟ ಜಗ್ಗೇಶ್‌!

ನನ್ನ ಬಂಡಾಯಕ್ಕೆ ಸತೀಶ್‌ ಮೂಲಕ ಉತ್ತರ ಸಿಕ್ಕಿದೆ: ಈ ಹಿಂದೆ ನಾನು ಕಾಂಗ್ರೆಸ್‌ನಲ್ಲಿ ಬಂಡಾಯವೆದ್ದಾಗ ಜನ ನನ್ನನ್ನು ಬೈಯ್ದಿದ್ದರು. ನನ್ನನ್ನು ಬೈಯ್ದಿದ್ದವರಿಗೆ ಈಗ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮೂಲಕ ಉತ್ತರ ಸಿಕ್ಕಿದೆ. ನಾನು ಏಕೆ ಬಂಡಾಯವೆದ್ದಿದ್ದೆ ಎಂಬುದು ಗೊತ್ತಾಗಿದೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. ಅಥಣಿ ತಾಲೂಕಿನ ನಂದಗಾಂವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ವೇಳೆಯೇ ಸತೀಶ್‌ ಜಾರಕಿಹೊಳಿ ಪರಿಸ್ಥಿತಿ ಈ ರೀತಿಯಾಗಿದೆ. ಇನ್ನು ಬೇರೆಯವರು ಮುಖ್ಯಮಂತ್ರಿಯಾದರೆ ಅವರ ಪರಿಸ್ಥಿತಿ ಏನು ಪ್ರಶ್ನಿಸಿದರು.

ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುವ ರೀತಿ ನೋಡಿದರೆ ಅವರು ಮೊದಲಿನಂತಿಲ್ಲ. ಹಾಗಾಗಿ, ಸಿದ್ದರಾಮಯ್ಯನವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಮಾತಿನ ದರ್ಪ, ಗಂಭೀರತೆ ಈಗ ಕಾಣುತ್ತಿಲ್ಲ. ಏಕೆ ಹೀಗೆ ಮಾಡುತ್ತಿದ್ದಾರೋ ಎಂಬುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ, ಅವರ ಬಗ್ಗೆ ಅಪಾರ ಗೌರವವಿದೆ. ಬಹುಶಃ ಹೈಕಮಾಂಡ್‌ ಹಾಗೂ ಕೆಲವರು ಅವರನ್ನು ಮುಕ್ತವಾಗಿ ಬಿಟ್ಟಿಲ್ಲ ಎಂದು ದೂರಿದರು. ಡಿಸಿಎಂ ಡಿ.ಕೆ.ಶಿವಕುಮಾರ ಇರುವವರೆಗೂ ನಮಗೆ ಪ್ರತಿಪಕ್ಷವಾಗಿ ವರದಾನ ಎಂದು ಇದೇ ವೇಳೆ ತಿಳಿಸಿದರು.