ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ. ಯಾವ ಗೊಂದಲವೂ ಇಲ್ಲ. ಕೇವಲ ಮಾಧ್ಯಮಗಳ ಸೃಷ್ಟಿಇದು. ಈಗಾಗಲೇ ಪತ್ರದ ಕುರಿತು ಪತ್ರ ಬರೆದವರೇ ಸ್ಪಷ್ಟನೆ ನೀಡಿದ್ದಾರೆ ಎಂದು ಕನ್ನಡ, ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. 

ಕೊಪ್ಪಳ (ಜು.27): ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ. ಯಾವ ಗೊಂದಲವೂ ಇಲ್ಲ. ಕೇವಲ ಮಾಧ್ಯಮಗಳ ಸೃಷ್ಟಿಇದು. ಈಗಾಗಲೇ ಪತ್ರದ ಕುರಿತು ಪತ್ರ ಬರೆದವರೇ ಸ್ಪಷ್ಟನೆ ನೀಡಿದ್ದಾರೆ ಎಂದು ಕನ್ನಡ, ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರದ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಶಾಸಕ ಬಸವರಾಜ ರಾಯರಡ್ಡಿ ಹಿರಿಯರು, ನನಗೆ ಅತ್ಯಂತ ಆತ್ಮೀಯರು. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಅವರು ಸಿಎಲ್‌ಪಿ ಸಭೆ ಕರೆಯುವ ಕುರಿತು ಹೇಳಿದ್ದಾರೆ. ಪತ್ರವನ್ನು ನಕಲಿ ಮಾಡಲಾಗಿದೆ ಎಂದು ಶಾಸಕ ಬಿ.ಆರ್‌. ಪಾಟೀಲ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.

Add Asianetnews Kannada as a Preferred SourcegooglePreferred

ಒಬ್ಬರಿಂದ ಸಿಎಂ ಬದಲಾಯಿಸಲು ಸಾಧ್ಯವಿಲ್ಲ. ಯಾರೋ ಹೇಳಿದ್ದಾರೆ ಎಂದಾಕ್ಷಣ ಮುಖ್ಯಮಂತ್ರಿ ಬದಲಾಗುವುದಿಲ್ಲ. ಹೈಕಮಾಂಡ್‌ ನಿರ್ಧಾರವೇ ಫೈನಲ್‌ ಎಂದು ಪಕ್ಷದ ಹಿರಿಯ ನಾಯಕ, ಪರಿಷತ್‌ ಸದಸ್ಯ ಹರಿಪ್ರಸಾದ್‌ ಹೆಸರು ಹೇಳದೇ ತಿರುಗೇಟು ನೀಡಿದರು. ಉಡುಪಿ ಪ್ರಕರಣ, ಐಎನ್‌ಡಿಐಎ ಸಭೆಗೆ ಐಎಎಸ್‌ ಅಧಿಕಾರಿಗಳನ್ನು ಕಳುಹಿಸಿರುವ ಕುರಿತು ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕೆ.ಎಸ್‌. ಈಶ್ವರಪ್ಪ, ಅಶ್ವತ್‌್ಥ ನಾರಾಯಣ ತಾವು ಅಧಿಕಾರ ಮಾಡಿದ್ದೇವೆ ಎನ್ನುವುದನ್ನು ಮರೆತು ನಾಲಿಗೆ ಹರಿಯಬಿಡುತ್ತಿದ್ದಾರೆ ಎಂದು ಕುಟುಕಿದರು.

ಕೋಲಾರ ಜಿಲ್ಲೆಗೆ ನೀಡಿರುವ ಅನುದಾನವನ್ನು ಸದ್ಬಳಿಸಿಕೊಳ್ಳಿ: ಸಚಿವ ದಿನೇಶ್‌

ಸ್ಥಳ ಪರಿಶೀಲನೆ: ಜಿಲ್ಲೆಯಲ್ಲಿ ಜಾನಪದ ಲೋಕ ಸ್ಥಾಪಿಸುವ ಕುರಿತು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದಕ್ಕೆ ಅಗತ್ಯ ಅನುದಾನ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಅದಕ್ಕಾಗಿ ಜಾಗ ಪರಿಶೀಲಿಸಲಾಗುತ್ತಿದೆ. ಸುಮಾರು 5 ಎಕರೆ ಭೂಮಿ ಬೇಕಾಗುತ್ತದೆ. ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ನಂತರ ತೀರ್ಮಾನ ಮಾಡಲಾಗುವುದು. ರಾಮನಗರದಲ್ಲಿರುವ ಜಾನಪದ ಲೋಕಕ್ಕಿಂತಲೂ ಅತ್ಯುದ್ಭುತವಾಗಿ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

ಜಿಲ್ಲಾ ಮಟ್ಟದಲ್ಲಿ ಪ್ರತಿ ತಿಂಗಳು ಜನಸಂಪರ್ಕ ಸಭೆ: ಜಿಲ್ಲೆಯ ಸಾರ್ವಜನಿಕರ ಕುಂದು-ಕೊರತೆ ನಿವಾರಣೆಗಾಗಿ ಪ್ರತಿ ಮಾಹೆ ಜಿಲ್ಲಾ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಮುಂಗಾರು ಮಳೆಯಿಂದಾದ ತೊಂದರೆಗಳು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ವಿಶೇಷ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲಾಮಟ್ಟದಲ್ಲಿ ಜನ ಸಂಪರ್ಕ ಸಭೆಯಂತೆ ತಾಲೂಕು ಮಟ್ಟದಲ್ಲಿ ಸಹ ಜಿಲ್ಲಾಧಿಕಾರಿ, ಜಿಪಂ ಸಿಇಒ ಸಮಕ್ಷಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಿ ಆಯಾ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸಹ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್‌

ಇನ್ನು ಮೂರು-ನಾಲ್ಕು ದಿನಗಳ ಕಾಲ ನಿರಂತರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಜಿಟಿಜಿಟಿ ಮಳೆಯಿಂದಾಗಿ ಹತ್ತಿ ಸೇರಿದಂತೆ ಯಾವುದೇ ಬೆಳೆ ಹಾನಿಯಾಗಿದ್ದಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಪರಿಹಾರಕ್ಕಾಗಿ ತಹಸೀಲ್ದಾರಗೆ ವರದಿ ಮಾಡಬೇಕು. ಮಳೆಯಿಂದಾಗಿ ರೈತರು ಹತ್ತಿ ಬೆಳೆ ನಷ್ಟಅನುಭವಿಸಿದ್ದಲ್ಲಿ ಅಂತಹ ರೈತರಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.