ವಿಧಾನಸಭೆ ಚುನಾವಣೆ ಪೂರ್ವ ಕಾಂಗ್ರೆಸ್‌ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳಿಗೆ ರಾಜ್ಯ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮುದ್ರೆ ಒತ್ತುವ ಮೂಲಕ ಕಾಂಗ್ರೆಸ್‌ ಸರ್ಕಾರ ಮತ್ತೆ ನುಡಿದಂತೆ ನಡೆದು ಸಾಬೀತು ಪಡಿಸಿದೆ ಎಂದು ನೂತನ ಕಾಂಗ್ರೆಸ್‌ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಹೇಳಿದ್ದಾರೆ.

ಗುಂಡ್ಲುಪೇಟೆ (ಜೂ.03): ವಿಧಾನಸಭೆ ಚುನಾವಣೆ ಪೂರ್ವ ಕಾಂಗ್ರೆಸ್‌ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳಿಗೆ ರಾಜ್ಯ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮುದ್ರೆ ಒತ್ತುವ ಮೂಲಕ ಕಾಂಗ್ರೆಸ್‌ ಸರ್ಕಾರ ಮತ್ತೆ ನುಡಿದಂತೆ ನಡೆದು ಸಾಬೀತು ಪಡಿಸಿದೆ ಎಂದು ನೂತನ ಕಾಂಗ್ರೆಸ್‌ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಹೇಳಿದ್ದಾರೆ. ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರ ಐದು ಗ್ಯಾರಂಟಿಗೆ ಶುಕ್ರವಾರ ಮಧ್ಯಾಹ್ನ ಆದೇಶ ನೀಡುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದರು.

ಚುನಾವಣೆ ಪೂರ್ವ ಕಾಂಗ್ರೆಸ್‌ ಪಕ್ಷ ವ್ಯಕಿಗೆ ತಲಾ 10 ಕೆಜಿ ಅಕ್ಕಿ (ಅನ್ನಭಾಗ್ಯ) ಮನೆಯ ಯಜಮಾನಿಗೆ 2 ಸಾವಿರ (ಗೃಹಲಕ್ಷ್ಮೀ), ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ (ಗೃಹ ಜ್ಯೋತಿ), ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1.500 (ಯುವ ನಿ​), ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಗ್ಯಾರಂಟಿಗಳನ್ನು ಈಡೇರಿಸಿದ ಹಿನ್ನೆಲೆ ಕಾಂಗ್ರೆಸ್‌ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಧನ್ಯವಾದ ಎಂದರು.

ದೇವನಹಳ್ಳಿ-ವಿಜಯಪುರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಸಚಿವ ಮುನಿಯಪ್ಪ

ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆದಿದೆ. ಕಾಂಗ್ರೆಸ್‌ ಪಕ್ಷ ಐದು ಗ್ಯಾರಂಟಿ ಜಾರಿಗೆ ತರಲ್ಲ ಎನ್ನುತ್ತಿದ್ದ ವಿಪಕ್ಷಗಳಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ಐದು ಗ್ಯಾರಂಟಿ ಜಾರಿಗೆ ತರುವ ಮೂಲಕ ನೀಡಿದೆ. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ಟೀಕಿಸಲು ಹೊಸ ದಾರಿ ಹುಡುಕಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

ಮಡಹಳ್ಳಿ ವೃತ್ತದ ನೀರು ನಿಲ್ಲದಂತೆ ಸೂಚನೆ: ಮಡಹಳ್ಳಿ ವೃತ್ತದಲ್ಲಿ ಮಳೆ ಬಂದಾಗ ನೀರು ನಿಂತು ಜನರು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಕುರಿತು ಕನ್ನಡಪ್ರಭ ವರದಿಗೆ ಸ್ಪಂದಿಸಿ ನೂತನ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ ಸೂಚನೆ ಬೆನ್ನಲ್ಲೆ ಕಾಮಗಾರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೇ.30 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ‘ಮಡಹಳ್ಳಿ ವೃತ್ತದ ಮಳೆ ನೀರಿನ ಸಮಸ್ಯೆ ಮುಕ್ತಿ ಯಾವಾಗ? ನೂತನ ಶಾಸಕರು ಕ್ರಮ ಕೈಗೊಳ್ಳುತ್ತಾರ ಎಂಬ ಪ್ರಶ್ನೆ ಜನರಲ್ಲಿ ಎಂಬ ಸುದ್ದಿ ಪ್ರಕಟಿಸಿ ಶಾಸಕರ ಗಮನ ಸೆಳೆದಿತ್ತು.

ನೂತನ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ಮಡಹಳ್ಳಿ ವೃತ್ತದಲ್ಲಿ ಡೆಕ್‌ ಚರಂಡಿ ಕಾಮಗಾರಿಗೆ ಕೆಎಸ್‌ಆರ್‌ಟಿಸಿ ಅನುಮೋದನೆ ಕೊಟ್ಟಿದೆ ಇನ್ನು ಒಂದೆರಡು ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ ಎಂದರು. ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಮಹೇಶ್‌ ಮಾತನಾಡಿ, ಶಾಸಕರ ಸೂಚನೆ ಮೇರೆಗೆ ಕೆಎಸ್‌ಆರ್‌ಟಿಸಿ ಅ​ಧಿಕಾರಿಗಳು ಕಾಮಗಾರಿ ಆರಂಭಕ್ಕೆ ಅನುಮತಿ ನೀಡಿದ್ದಾರೆ. ಶಾಸಕರ ಸೂಚನೆಯಂತೆ ಗುತ್ತಿಗೆದಾರರು ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸಲಿದ್ದಾರೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ: ಸಚಿವ ಮಧು ಬಂಗಾರಪ್ಪ

ಜನರ ಶಾಪಕ್ಕೆ ಬ್ರೇಕ್‌: ಪಟ್ಟಣದ ಮಡಹಳ್ಳಿ ವೃತ್ತದಲ್ಲಿ ಮಳೆಯ ನೀರು ನಿಂತು ಚಿಕ್ಕ ಕೆರೆಯಂತಾದಾಗ ಪಟ್ಟಣದ ಜನರು ಹಾಗೂ ಸವಾರರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದರು. ಈಗ ಮಡಹಳ್ಳಿ ವೃತ್ತದ ನೀರು ನಿಲ್ಲದಂತೆ ನೂತನ ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌ ಖಡಕ್‌ ಸೂಚನೆ ಹಿನ್ನೆಲೆ ಹಲವು ವರ್ಷಗಳಿಂದ ಆಗದ ಕೆಲಸ ಶುರುವಾಗುವ ಮುನ್ಸೂಚನೆ ಸಿಕ್ಕಿದೆ.