ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅಗಲಿದ ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರೀಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಭಾವುಕರಾದರು.
ಹಾಸನ (ಹರದನಹಳ್ಳಿ): ನಮ್ಮ ತಾಯಿ ಪರಮ ದೈವಭಕ್ತೆ, ಅವರ ಆತ್ಮಕ್ಕೆ ಖಂಡಿತ ಶಾಂತಿ ದೊರೆಯಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ. ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ತಮ್ಮ ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಂತರದ ವಿಧಿವಿಧಾನಗಳ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
11 ದಿನಗಳ ಕಾಲ ಪಾರಾಯಣ
ಚೆನ್ನಮ್ಮನವರು ಪ್ರತಿದಿನವೂ ತಪ್ಪದೇ ವಿಷ್ಣು ಸಹಸ್ರನಾಮ ಪಠಿಸುತ್ತಿದ್ದರು. ಅವರ ಅದೇ ಆಸೆಯಂತೆ ಸಮಾಧಿಯ ಬಳಿ ಮೂವರು ಪುರೋಹಿತರಿಂದ ಸತತ 11 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ಏರ್ಪಡಿಸಲಾಗಿದೆ. ಮೂರನೇ ದಿನದ ಹಾಲು-ತುಪ್ಪದ ಕಾರ್ಯ ನಡೆಯಲಿದೆ. ಇನ್ನು 11ನೇ ದಿನದ ಪುಣ್ಯತಿಥಿಯಂದು ಲಕ್ಷಾಂತರ ಜನರಿಗೆ ಅನ್ನಸಂತರ್ಪಣೆ ಮಾಡಲು ಕುಟುಂಬ ನಿರ್ಧರಿಸಿದೆ ಎಂದು ಹೆಚ್ಡಿಕೆ ಮಾಹಿತಿ ನೀಡಿದರು.
ಬಡವರಿಗೆ ನೆರವಾಗುವ ವಿಶಿಷ್ಟ ಸ್ಮಾರಕ
ನಮ್ಮ ತಾಯಿಯ ಸಮಾಧಿ ಸ್ಥಳವನ್ನು ಕೇವಲ ಕಲ್ಲಿನ ಸ್ಮಾರಕವನ್ನಾಗಿ ಮಾಡುವುದಿಲ್ಲ. ಅಲ್ಲಿ ಬಡ ಕುಟುಂಬಗಳಿಗೆ ಮತ್ತು ಸಮಾಜಕ್ಕೆ ಅನುಕೂಲವಾಗುವಂತಹ ಯಾವುದಾದರೂ ಯೋಜನೆಯನ್ನು ರೂಪಿಸಲಿದ್ದೇವೆ. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರು ಈಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು. ತಮ್ಮ ತಾಯಿಯನ್ನು 'ಅನ್ನಪೂರ್ಣೇಶ್ವರಿ' ಎಂದು ಕರೆದ ಮಾಧ್ಯಮಗಳ ಬಗ್ಗೆ ಅವರು ಕೃತಜ್ಞತೆ ಸಲ್ಲಿಸಿದರು.
ತಮ್ಮ ಜೀವನದುದ್ದಕ್ಕೂ ಜೊತೆಯಾಗಿದ್ದ ಪತ್ನಿಯ ಅಗಲಿಕೆಯಿಂದ ನೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಚೆನ್ನಮ್ಮನವರ ಸಮಾಧಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ನಮಿಸಿದರು. ಬಳಿಕ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕುಟುಂಬದ ಇತರ ಸದಸ್ಯರಾದ ಹೆಚ್.ಡಿ. ರೇವಣ್ಣ, ಪುತ್ರಿಯರಾದ ಅನುಸೂಯ, ಶೈಲಜಾ, ಸೊಸೆಯಂದಿರಾದ ಭವಾನಿ ಮತ್ತು ಕವಿತಾ ಅವರು ಸಮಾಧಿಗೆ ಪ್ರಣಾಮ ಸಲ್ಲಿಸಿದರು.


