Asianet Suvarna News Asianet Suvarna News

ತಮಿಳುನಾಡಿನವರು ಕನ್ನಡಿಗರ ಮೇಲೆ ಸವಾರಿ ಮಾಡ್ತಿದ್ದಾರೆ! ಮಾಜಿ ಪ್ರಧಾನಿ ದೇವೇಗೌಡರ ಆತಂಕ

ಕಾವೇರಿ ನದಿಯ ಉಗಮಸ್ಥಾನ ಹೊಂದಿರುವ ಕನ್ನಡಿಗರೇ ಕುಡಿಯುವ ನೀರಿಗಾಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದೆ. ತಮಿಳುನಾಡಿನವರು ನಮ್ಮ‌ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರಿಗೆ ನಮ್ಮ ನೀರನ್ನು ಬಿಟ್ಟು ಕೊಡಬಾರದು.

Tamil Nadu people are riding Kannadigas Former Prime Minister Devegowda concern sat
Author
First Published Apr 30, 2023, 1:22 PM IST | Last Updated Apr 30, 2023, 3:47 PM IST

ರಾಮನಗರ (ಏ.30): ಕಾವೇರಿ ನದಿಯ ಉಗಮಸ್ಥಾನ ಹೊಂದಿರುವ ಕನ್ನಡಿಗರೇ ಕುಡಿಯುವ ನೀರಿಗಾಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದೆ. ತಮಿಳುನಾಡಿನವರು ನಮ್ಮ‌ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರಿಗೆ ನಮ್ಮ ನೀರನ್ನು ಬಿಟ್ಟು ಕೊಡಬಾರದು. ಹೀಗಾಗಿ, ತಮಿಳುನಾಡಿನವರಂತೆ ಕರ್ನಾಟಕದಲ್ಲಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್‌ ಬೆಂಬಲಿಸಬೇಕು ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಇಗ್ಗಲೂರು ಜೆಡಿಎಸ್‌ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ದೇಶದ ಸಂಸತ್ತಿನಲ್ಲಿ ಕರ್ನಾಟಕದ ಪರ ಏಕಾಂಗಿಯಾಗಿ ಹೋರಾಡಿದ್ದೇನೆ. ಕಾಂಗ್ರೆಸ್, ಬಿಜೆಪಿ ನಾಯಕರು ಯಾರು ರಾಜ್ಯದ ಪರ ನಿಲ್ಲಲಿಲ್ಲ. ನಾವು ಕುಡಿಯುವ ನೀರಿಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ. ತಮಿಳುನಾಡಿನ ಬರೋಬ್ಬರಿ 40 ಸಂಸದರು ಕಾವೇರಿ ಹೋರಾಟವನ್ನು ಮಾಡುವುದರ ಬಗ್ಗೆ ನನ್ನನ್ನು ಕಟ್ಟಿಹಾಕಿದ್ದಾರೆ. ಕಾವೇರಿ ನೀರಿನ ಬಗ್ಗೆ ಸದನದಲ್ಲಿ ಮಾತನಾಡದೇ ನೀವು ಕೋರ್ಟಿಗೆ ಹೋಗಿ ಎಂದು ತಮಿಳು ಸಂಸದರು ಹೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ನಾನು ದೇವೇಗೌಡರ ನಿಯತ್ತಿನ ನಾಯಿ ಎಂದ ಶಾಸಕ: ಕಣ್ಣೀರಿಟ್ಟ ಮಾಜಿ ಪಿಎಂ

ಬಡವರ ಕಣ್ಣೀರು ಒರೆಸಿದ ರಾಜಕಾರಣಿ: ನಮ್ಮ ದೇಶ ಮತ್ತು ರಾಜ್ಯದಲ್ಲಿ ಬಡವರ ಕಣ್ಣೀರು ಒರೆಸಿದ ಒಬ್ಬ ರಾಜಕಾರಣಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಹೀಗಾಗಿ, ಪ್ರಾದೇಶಿಕ ಪಕ್ಷ ಜೆಡಿಎಸ್‌ ಉಳಿಯಬೇಕು. ತಮಿಳುನಾಡಿನವರು ನಮ್ಮ‌ ಮೇಲೆ ಸವಾರಿ ಮಾಡ್ತಿದ್ದಾರೆ. ಅವರಿಗೆ ನಮ್ಮ ನೀರನ್ನು ಬಿಟ್ಟು ಕೊಡಬಾರದು. ಕೇಂದ್ರ ಮತ್ತು ರಾಜ್ಯದಲ್ಲಿ ಈಬಗ್ಗೆ ಪ್ರಶ್ನೆ ಮಾಡಿ ನೀರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವುದಕ್ಕಾಗಿಯೇ ತಮಿಳರ ರೀತಿಯಲ್ಲಿಯೇ ಪ್ರಾದೇಶಿಕತೆ ಬೆಂಬಲಿಸಬೇಕು. ಹೀಗಾಗಿ, ರಾಜ್ಯದಲ್ಲಿ ಜೆಡಿಎಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ವಾಜಿಪೇಯಿ, ಸಿಂಗ್, ಮೋದಿ ಯಾರೊಬ್ಬರೂ ಹಣ ಕೊಡಲಿಲ್ಲ: ಈ ಹಿಂದೆ ಅಧಿಕಾರ ಮಾಡಿದ ಅಟಲ್‌ ಬಿಹಾರಿ ವಾಜಪೇಯಿ ಅವರು, ನಂತರ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ಯಾರೇ ಬಂದರೂ ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನವ್ನು ಕೊಡಲಿಲ್ಲ. ಕಳೆದ 8 ವರ್ಷಗಳಿಂದ ಅಧಿಕಾರ ಮಾಡುತ್ತಿರುವ ನರೇಂದ್ರ ಮೋದಿ ಇದ್ದರೂ ಒಂದು ರೂಪಾಯಿ ಹಣ ಕೊಡಲಿಲ್ಲ. ಇಗ್ಗಲೂರು ಮತ್ತು ಕಾವೇರಿ ಯೋಜನೆಗೆ ಒಂದು ರುಪಾಯಿ ಕೊಟ್ಟಿಲ್ಲ. ರೈತರು ಬೆವರು ಸುರಿಸಿ ಕೊಟ್ಟ ಹಣದಲ್ಲಿ ಜಲಾಶಯವನ್ನು ಕಟ್ಟಿದ್ದೇನೆ. ಕುಮಾರಸ್ವಾಮಿ ಪ್ರತಿ ಹಳ್ಳಿಗೆ ನೀರು ಕೊಡಲು ಜಲಧಾರೆ ಯೋಜನೆ ರೂಪಿಸಿದ್ದಾರೆ. 

ನುಡಿದಂತೆ ನಡೆಯುವ ಏಕೈಕ ರಾಜಕಾರಣ ಕುಮಾರಸ್ವಾಮಿ: ದೇಶದಲ್ಲಿ ನುಡಿದಂತೆ ನಡೆಯುವ ಒಬ್ಬ ರಾಜಕಾರಣಿ ಈ ದೇಶದಲ್ಲಿ ಇದ್ದರೆ ಅದು ಕುಮಾರಸ್ವಾಮಿ ಆಗಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಎಲ್ಲಾಕಡೆ ಪ್ರಚಾರ ಮಾಡ್ತಿದ್ದಾರೆ. ಅವರ ಕ್ಷೇತ್ರ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜನರು ಕುಮಾರಸ್ವಾಮಿಗೆ ಮತನೀಡಿ ಗೆಲ್ಲಿಸಬೇಕು. ಆದರೆ, ನೀವು ಮತ ಹಾಬೇಕಿರುವುದು ಕುಮಾರಸ್ವಾಮಿ ಹೊರತಾಗಿ ಮತ್ತೊಬ್ಬ ಅಲ್ಲ. ವಿಧಾನಸೌದದ ಮುಂಭಾಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಮತದಾರರು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ರಾತ್ರೋರಾತ್ರಿ ಮನೆಗೆ ನುಗ್ಗಿದ ಚಿರತೆ: ಕಕ್ಕಾಬಿಕ್ಕಿಯಾದ ಮನೆಯ ನಿವಾಸಿಗಳು!

ತಮಿಳುನಾಡಿನಂತೆ ರಾಜ್ಯದಲ್ಲೂ ಪ್ರಾದೇಶಿಕತೆ ಬೆಂಬಲಿಸಿ: ನಾವೆಲ್ಲರೂ ಭಾರತಾಂಬೆಯ ಮಕ್ಕಳು, ಒಟ್ಟಾಗಿ ಬದುಕಬೇಕು. ಇಡೀ ಹಿಂದೂಸ್ತಾನದಲ್ಲಿ  ಪಂಚರತ್ನ ಯೋಜನೆ ರೀತಿ ಯಾರು ಯೋಜನೆ ಕೊಟ್ಟಿಲ್ಲ.  ನನ್ನ ರಾಜಕೀಯ ಜೀವನದಲ್ಲಿ ಕುಮಾರಸ್ವಾಮಿ ಕೊಟ್ಟ ಯೋಜನೆಗಳ ರೀತಿ ಬೇರೆ ಯಾವ ನಿದರ್ಶನಗಳಿಲ್ಲ. ಪಂಚರತ್ನ ಯೋಜನೆ ಜಾರಿಗೊಳಿಸಲು ಕುಮಾರಸ್ವಾಮಿ ಹಗಲು ರಾತ್ರಿ ಹೋರಾಟ ಮಾಡ್ತಿದ್ದಾರೆ. ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳು ತಲೆ ಎತ್ತಿ ನಿಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಕಳೆದ 50 ವರ್ಷಗಳಿಂದ ಅಲ್ಲಿ ತಲೆ ಎತ್ತಿಲ್ಲ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Latest Videos
Follow Us:
Download App:
  • android
  • ios