ನಾನು ದೇವೇಗೌಡ, ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜನರ ಮನೆಯ ನಿಯತ್ತಿನ ನಾಯಿಯಾಗಿರುತ್ತೇನೆ ಎಂದಾಗ ವೇದಿಕೆಯಲ್ಲಿದ್ದ ದೇವೇಗೌಡರ ಕಣ್ಣಾಲಿಗಳು ತುಂಬಿ ಬಂತು.

ಮಾಗಡಿ/ರಾಮನಗರ(ಏ.30):  ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಮಂಜುನಾಥ್‌ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಪಟ್ಟಣದ ಕೋಟೆ ಮೈದಾನದಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಮಂಜುನಾಥ್‌ ಮಾತುಗಳನ್ನು ಆಲಿಸುತ್ತಿದ್ದ ದೇವೇಗೌಡರು ಒಂದ್‌ಕ್ಷಣ ಭಾವೋದ್ವೇಗಕ್ಕೆ ಒಳಗಾದರು. 

ಕಾಂಗ್ರೆಸ್‌ ಪಕ್ಷದಲ್ಲಿ ನನಗೆ ಅನ್ಯಾಯವಾಗುತ್ತಿದೆ ಎಂದು ನನಗೆ ಕರೆ ಮಾಡಿ ದೇವೇಗೌಡರು ಕರೆದು 2018ರಲ್ಲಿ ಜೆಡಿಎಸ್‌ ಶಾಸಕನಾಗಿ ಮಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನೀಡಿದ ಅನುದಾನದಲ್ಲಿ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಕಾರ್ಯಗತಗೊಂಡವು ಎಂದು ದೇವೇಗೌಡರ ಸಹಾಯವನ್ನು ಸ್ಮರಿಸಿದರು. ಜತೆಗೆ, ನಾನು ದೇವೇಗೌಡ, ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜನರ ಮನೆಯ ನಿಯತ್ತಿನ ನಾಯಿಯಾಗಿರುತ್ತೇನೆ ಎಂದಾಗ ವೇದಿಕೆಯಲ್ಲಿದ್ದ ದೇವೇಗೌಡರ ಕಣ್ಣಾಲಿಗಳು ತುಂಬಿ ಬಂತು.

ಹಳೇ ಮೈಸೂರು ಭಾಗದ ಮೇಲೆ 3 ಪಕ್ಷಗಳ ಕಣ್ಣು: ಮೋದಿಗಿಂತ ಮೊದಲೇ ಅಖಾಡಕ್ಕಿಳಿಯಲಿರುವ ದೇವೇಗೌಡರು

ನನಗೆ ದೇವೇಗೌಡರ ಕುಟುಂಬ ಮತ್ತು ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರು ಏನು ಮಾಡಲಾಗದು. ಕುಮಾರಣ್ಣ ಅವರನ್ನು ಬಿಟ್ಟು ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ಕಾರ್ಯಕ್ರಮ ಮತ್ತು ದೇವೇಗೌಡರ ಇಳಿ ವಯಸ್ಸಿನ ಉತ್ಸಾಹವನ್ನು ಭಾಷಣದ ಉದ್ದಕ್ಕೂ ಮಂಜು ಪ್ರಸ್ತಾಪಿಸಿದರು.