ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಎಸ್‌ಡಿಪಿಐ ಬೆಂಬಲಿಸಿದ ಕಾರಣದಿಂದ ಬಿಜೆಪಿ ಬೆಂಬಲಿತ ಸದಸ್ಯರ ಬೆಂಬಲದಿಂದ ತಲಪಾಡಿ ಗ್ರಾ.ಪಂ ಎಸ್ಡಿಪಿಐ ತೆಕ್ಕೆಗೆ ಜಾರಿದ ವಿದ್ಯಮಾನ ನಡೆದಿದೆ. 

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

Add Asianetnews Kannada as a Preferred SourcegooglePreferred

ಮಂಗಳೂರು (ಆ.10): ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಎಸ್‌ಡಿಪಿಐ ಬೆಂಬಲಿಸಿದ ಕಾರಣದಿಂದ ಬಿಜೆಪಿ ಬೆಂಬಲಿತ ಸದಸ್ಯರ ಬೆಂಬಲದಿಂದ ತಲಪಾಡಿ ಗ್ರಾ.ಪಂ ಎಸ್ಡಿಪಿಐ ತೆಕ್ಕೆಗೆ ಜಾರಿದ ವಿದ್ಯಮಾನ ನಡೆದಿದೆ. ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ‌ ಗ್ರಾ.ಪಂ ಆಡಳಿತದಲ್ಲಿ ಒಟ್ಟು 24 ವಾರ್ಡುಗಳಿವೆ. ಇದರಲ್ಲಿ 13 ಬಿಜೆಪಿ ಬೆಂಬಲಿತ ಸದಸ್ಯರು, 10 ಎಸ್‌ಡಿಪಿಐ ಬೆಂಬಲಿತ ಸದಸ್ಯರು ಹಾಗೂ ಓರ್ವ ಕಾಂಗ್ರೆಸ್ ಸದಸ್ಯರಿದ್ದಾರೆ. 

ಇಂದು ಕಾಂಗ್ರೆಸ್‌ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್‌ ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು. ಹೀಗಾಗಿ ಬಹುಮತದ ಕಾರಣ ಬಿಜೆಪಿ ಸದಸ್ಯ ಸತ್ಯರಾಜ್‌ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರು ಬಿಜೆಪಿ ಬೆಂಬಲಿತರಿಂದ ಎಸ್‌ಡಿಪಿಐಗೆ ಬೆಂಬಲ ಸಿಕ್ಕಿದೆ‌. ಇದರಿಂದ ಎಸ್‌ಡಿಪಿಐ ಇಸ್ಮಾಯಿಲ್‌ ಮತ್ತು ಬಿಜೆಪಿ ಸತ್ಯರಾಜ್‌ ನಡುವೆ ಸಮಬಲ ಬಂದಿದೆ. ಕೊನೆಗೆ ಚೀಟಿ ಎತ್ತುವ ಮೂಲಕ ಎಸ್‌ಡಿಪಿಐನ ಇಸ್ಮಾಯಿಲ್ ಅಧ್ಯಕ್ಷಗಾದಿಗೇರಿದ್ದಾರೆ. 

ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ: ಸಿಇಓ ಪ್ರಸನ್ನ

ಸ್ವಂತ ಪಕ್ಷದವರೇ ಎಸ್‌ಡಿಪಿಐ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ. ಎಸ್‌ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್‌ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಆಯ್ಕೆಯಾಗಿದ್ದು, ಎಸ್ಡಿಪಿಐ ಜೊತೆ ಸ್ವಂತ ಪಕ್ಷದ ಸದಸ್ಯರ ಒಳ ಒಪ್ಪಂದದಿಂದ ಬಿಜೆಪಿಗೆ ಸೋಲಾಗಿದೆ. ಕಳೆದ ಅವಧಿಗೆ ಇಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿದ್ದರು.