ಅಂತಾರಾಷ್ಟ್ರೀಯ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳಲು ರಾಜ್ಯ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಅವರು ರಾಜ್ಯದಲ್ಲಿ ಸುರಕ್ಷಿತವಾಗಿ ಉಳಿಯಬಹುದಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಬೆಂಗಳೂರು (ಮಾ.14): ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧದಿಂದ ತವರಿಗೆ ವಾಪಸ್‌ ತೆರಳಲಾಗದೆ ರಾಜ್ಯದಲ್ಲಿ ಸಿಲುಕಿರುವ ಅಂತಾರಾಷ್ಟ್ರೀಯ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳಲು ರಾಜ್ಯ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಅವರು ರಾಜ್ಯದಲ್ಲಿ ಸುರಕ್ಷಿತವಾಗಿ ಉಳಿಯಬಹುದಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

Add Asianetnews Kannada as a Preferred SourcegooglePreferred

ನಗರದ ಅರಮನೆ ಮೈದಾನದಲ್ಲಿಆರಂಭವಾದ ಮೂರು ದಿನಗಳ ಪ್ರಯಾಣ ಮತ್ತು ಪ್ರವಾಸೋದ್ಯಮ ಮೇಳದಲ್ಲಿ (ಟಿಟಿಎಫ್) ಪಾಲ್ಗೊಂಡು ಮಾತನಾಡಿ, ಮಧ್ಯಪ್ರಾಚ್ಯ ದೇಶಗಳಿಂದ ಬಂದ ವಿದೇಶಿ ಪ್ರವಾಸಿಗರಿಗೆ ವಾಪಸ್‌ ಪ್ರಯಾಣದ ಸಮಸ್ಯೆ ಎದುರಾಗಿದೆ. ವೀಸಾ ಮತ್ತು ಪ್ರಯಾಣ ನಿರ್ಬಂಧಗಳಿಂದಾಗಿ ಅನೇಕರು ತಾಯ್ನಾಡಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಅಂಥ ಎಲ್ಲ ವಿದೇಶಿ ಪ್ರವಾಸಿಗರ ಆತಿಥ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ವೀಸಾ ನಿರ್ವಹಣೆ ಮತ್ತು ಅಗತ್ಯ ಸಹಾಯ ಒದಗಿಸುವುದು ಸೇರಿ ಅಲ್ಲಿನ ಪರಿಸ್ಥಿತಿ ತಿಳಿಯಾಗುವವರೆಗೆ ಅವರ ವಾಸ್ತವ್ಯ ಆರಾಮದಾಯಕವಾಗಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

5 ಕೋಟಿಯ ಆಭರಣ ದಾನ

ಇತ್ತೀಚೆಗೆ, ಕುಟುಂಬವೊಂದು 600 ವರ್ಷಗಳಷ್ಟು ಹಳೆಯದಾದ ಆಭರಣಗಳನ್ನು ಸರ್ಕಾರಕ್ಕೆ ದಾನ ಮಾಡಿದೆ. ಇದನ್ನು ಮೂಲತಃ ದೇವಿಯನ್ನು ಅಲಂಕರಿಸಲು ಬಳಸಲಾಗುತ್ತಿತ್ತು. ಇದರ ಮೌಲ್ಯ ಸುಮಾರು 5 ಕೋಟಿ ರು. ಎಂದು ತಜ್ಞರು ತಿಳಿಸಿದ್ದಾರೆ ಎಂದು ಇದೇ ವೇಳೆ ಕಾನೂನು ಸಚಿವರೂ ಆದ ಎಚ್‌.ಕೆ.ಪಾಟೀಲ ತಿಳಿಸಿದರು. ಕಾರ್ಯಕ್ರಮದಲ್ಲಿ ಇಲಾಖೆ ಕಾರ್ಯದರ್ಶಿ ಡಾ.ತ್ರಿಲೋಕ್‌ ಚಂದ್ರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.