ಸಿದ್ದರಾಮಯ್ಯ ಅವರು ಬಾಗಲಕೋಟೆಗೆ ಪ್ರಚಾರಕ್ಕೆ ಬರ್ತಿದ್ದಾರೆ. ಯಾವ ನೆಲೆಗಟ್ಟಿನ ಮೇಲೆ ಮತ ಕೇಳುತ್ತೀರಿ ಎಂದು ಅವರನ್ನು ಕೇಳುತ್ತಿದ್ದಿನಿ. ನಾನು ಬಹಳಷ್ಟು ಸಾಲ ಮಾಡಿದ್ದಿನಿ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆ (ಮಾ.30): ಸಿದ್ದರಾಮಯ್ಯ ಅವರು ಬಾಗಲಕೋಟೆಗೆ ಪ್ರಚಾರಕ್ಕೆ ಬರ್ತಿದ್ದಾರೆ. ಯಾವ ನೆಲೆಗಟ್ಟಿನ ಮೇಲೆ ಮತ ಕೇಳುತ್ತೀರಿ ಎಂದು ಅವರನ್ನು ಕೇಳುತ್ತಿದ್ದಿನಿ. ನಾನು ಬಹಳಷ್ಟು ಸಾಲ ಮಾಡಿದ್ದಿನಿ ಎಂದು ಹೇಳಿ ಮತ ಕೇಳುತ್ತಾರೆ ನೋಡಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಮುಂದೆ ಹುಟ್ಟುವಂತಹ ಮಕ್ಕಳ ಮೇಲೂ ಸಾಲ ಹೊರಿಸಿದ್ದಾರೆ. ಯಾರೂ ಮಾಡದ ಸಾಲವನ್ನು ಇವರು ಮಾಡಿದ್ದಾರೆ. ₹89 ಸಾವಿರ ಕೋಟಿ ಸಾಲಕ್ಕೆ ಬಡ್ಡಿ ಕಟ್ತೀನಿ ಎಂದು ಹೇಳಿ ಮತ ಕೇಳುತ್ತಿದ್ದಾರೆ. ಹೈಕಮಾಂಡ್ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಎಲ್ಲವನ್ನೂ ನುಂಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಜೊತೆಯಲ್ಲಿ ಎಲ್ಲ ದಿನಸಿಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿದ್ರಿ, ವಾಪಸ್‌ ಕಟ್ತೀನಿ ಅಂದ್ರಿ ಕಟ್ಟಿಲ್ಲ, 139 ಜನ ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಅವಕಾಶ ನೀಡಿದ್ದೀನಿ ಎಂದು ಮತ ಕೇಳ್ತಾರಾ, ಸಿಎಂ ಏನು ಅಜೆಂಡಾ ಇಟ್ಟುಕೊಂಡು ಮತ ಕೇಳ್ತಾರೆ ನೋಡಬೇಕು. ಎರಡು ವರ್ಷಗಳ ಕಾಲ ಮಾಡಿದ ದುರಾಡಳಿತಕ್ಕೆ ನಮ್ಮ ಸವಾಲ್ ಇದು, ನಮ್ಮ ಸವಾಲ್ ಗೆ ಸಿಎಂ ಉತ್ತರ ಕೊಟ್ಟು ಮತ ಕೇಳಲಿ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿಗೆ ಮರುಳಾಗದೆ ಬಿಜೆಪಿಗೆ ಮತ ನೀಡಿ

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ನೀಡುತ್ತಿರುವ ಗ್ಯಾರಂಟಿಗಳಿಗೆ ಮರುಳಾಗದೆ ಮತದಾರರು ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರಿಗೆ 2023ರಲ್ಲಿ ಆದ ತಪ್ಪನ್ನು ಮತ್ತೆ ಮಾಡದೆ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಮನವಿ ಮಾಡಿದರು. ಪಟ್ಟಣದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ತೆರೆದ ವಾಹನದಲ್ಲಿ ಸಂಚರಿಸಿ ಮತಯಾಚನೆ ಮಾಡಿ ನಂತರ ಗಾಂಧಿ ಚೌಕದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಎರಡುವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕೇವಲ ಭ್ರಷ್ಟಾಚಾರದಲ್ಲಿ ಮುಳಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದ್ದು, ಬಾಗಲಕೋಟೆ ಮತಕ್ಷೇತ್ರದ ಜನತೆ ತಾವು ನೀಡುತ್ತಿರುವ ಗ್ಯಾರಂಟಿಗಳಿಗೆ ಮರಳಾಗುವುದಿಲ್ಲ, ಆದ್ದರಿಂದ ವೀರಣ್ಣ ಚರಂತಿಮಠ ಅವರು ತಮ್ಮ ಅವಧಿಯಲ್ಲಿ ಕಮತಗಿ ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಮತದಾರರಲ್ಲಿ ಮತಯಾಚಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಭ್ರಮೆಯಲ್ಲಿ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಜನತೆಯನ್ನು ಸಾಲದ ಕೂಪಕ್ಕೆ ತಳ್ಳುತ್ತಿದ್ದು, ಆದ್ದರಿಂದ ಕ್ಷೇತ್ರದ ಜನತೆ ಮತ್ತೊಮ್ಮೆ ಗ್ಯಾರಂಟಿಗೆ ಮರುಳಾಗದೆ. ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮತಯಾಚಿಸಿದರು.