ವಿಶೇಷವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ನಾವು ಹೋಗುತ್ತೇವೆ, ನೀವು ಬೇಕಾದರೆ ಕಲಾಪ ನಡೆಸಿ ಎಂದು ಸದನದಿಂದ ನಿರ್ಗಮಿಸಿದ್ದು ತಮ್ಮ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ 

ವಿಧಾನಸಭೆ(ಡಿ.23): ಸಂಜೆ ಆರು ಗಂಟೆಯ ನಂತರ ನಡೆದ ಕಲಾಪದ ವೇಳೆ ಬಹುತೇಕ ಸಚಿವರು, ಶಾಸಕರು ಸದನದಲ್ಲಿ ಇಲ್ಲದಿರುವ ಬಗ್ಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ವಿಶೇಷವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ನಾವು ಹೋಗುತ್ತೇವೆ, ನೀವು ಬೇಕಾದರೆ ಕಲಾಪ ನಡೆಸಿ ಎಂದು ಸದನದಿಂದ ನಿರ್ಗಮಿಸಿದ್ದು ತಮ್ಮ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಸಂಜೆ 6 ಗಂಟೆ ನಂತರ ಸದನದಲ್ಲಿ ಆಡಳಿತ ಪಕ್ಷದ ಕಡೆಯ ಆಸನಗಳು ಖಾಲಿಯಾಗಿದ್ದವು. ಸಚಿವ ಆರಗ ಜ್ಞಾನೇಂದ್ರ ಅವರನ್ನು ಹೊರತುಪಡಿಸಿದರೆ ಇತರ ಸಚಿವರು ಇರಲಿಲ್ಲ. ಈ ಸಂದರ್ಭದಲ್ಲಿ ಸ್ಪೀಕರ್‌ ಕಾಗೇರಿಯವರು ಗಮನ ಸೆಳೆಯುವ ಸೂಚನೆಗಳನ್ನು ಕೈಗೆತ್ತಿಕೊಂಡರು. ಆಗ ಮಾಧುಸ್ವಾಮಿ ಅವರು, ಸಮಯ ಆಯಿತು ಎಂದು ಸದನದಿಂದ ನಿರ್ಗಮಿಸಿದರು. ವಿಷಯ ಮಂಡಿಸಲು ಮುಂದಾದ ವಿರೋಧ ಪಕ್ಷದ ಸದಸ್ಯರು, ಸಚಿವರು ಇಲ್ಲವೆಂದು ಏರು ದನಿಯಲ್ಲಿ ಸ್ಪೀಕರ್‌ ಅವರ ಗಮನಕ್ಕೆ ತಂದರು.

ಕೈದಿಗಳ ಗುರುತಿಸುವ ಕಾಯ್ದೆ ಹಿಂಪಡೆತಕ್ಕೆ ಸ್ಪೀಕರ್‌ ತಡೆ

ಈ ವೇಳೆ ಕಾಗೇರಿ ಅವರು, ಎಲ್ಲಿ ಹೋದರು ಸಚಿವರೆಲ್ಲ? ಇಷ್ಟುಹೊತ್ತಿಗೆ ಹೊರಗೆ ಹೋದರೆ ಸದನಕ್ಕೆ ಉತ್ತರ ಕೊಡುವುದು ಯಾರು? ಕರೆದುಕೊಂಡು ಬನ್ನಿ ಅವರನ್ನೆಲ್ಲ ಎಂದು ಆಡಳಿತ ಪಕ್ಷದ ಮುಖ್ಯಸಚೇತಕ ಸತೀಶ್‌ ರೆಡ್ಡಿ ಅವರನ್ನು ಉದ್ದೇಶಿಸಿ ಏರಿದ ಧ್ವನಿಯಲ್ಲಿ ಗದರಿದರು.

ಸಚಿವರಿಲ್ಲ, ನಾಳೆಗೆ ಮುಂದೂಡಿ ಎಂದು ಸತೀಶ್‌ ರೆಡ್ಡಿ ಸಮಜಾಯಿಸಿ ಕೊಡಲು ಮುಂದಾದರು. ಆಗ ಮಾತನಾಡಿದ ಕಾಗೇರಿ, ಸಚಿವರ ಒತ್ತಡ ಗೊತ್ತಿದೆ. ಆದರೆ, ನೀವು ನೋಡಿಕೊಳ್ಳಿ ಸಮಯ ಆಯಿತು ಎಂದು ಹೊರಟು ಹೋದರೆ ಹೇಗೆ? ಸದನವನ್ನು ಹಗುರವಾಗಿ ತೆಗೆದುಕೊಳ್ಳುವುದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದ ಅಧಿವೇಶನದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲ ಸದಸ್ಯರು ಭಾಗವಹಿಸಬೇಕು. ಇಷ್ಟೆಲ್ಲಾ ವೆಚ್ಚ ಮಾಡಿ ಅಧಿವೇಶನ ನಡೆಸುವಾಗ ಸಚಿವರು, ಸದಸ್ಯರು ಗೈರು ಆಗುವುದು ಸರಿಯಲ್ಲ’ ಎಂದರು. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಭಾಧ್ಯಕ್ಷನಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ, ಒಬ್ಬ ಸದಸ್ಯನಿದ್ದರೂ ಕಲಾಪ ನಡೆಸುತ್ತೇನೆ ಎಂದು ಅಸಮಾಧಾನದಿಂದಲೇ ಹೇಳಿದರು.