ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಸಿದವರಿಗೆ ಛೀಮಾರಿ ಹಾಕಿದ್ರಾ ಸೋನು ನಿಗಮ್​? ಗಾಯಕ ಹೇಳಿದ್ದೇನು?  

ಲೋಕಸಭೆ ಚುನಾವಣೆ ಫಲಿತಾಂಶ ಬಂದು ಎರಡು ದಿನವಾದರೂ ಹಲವರು ಇನ್ನೂ ಅದೇ ಮೂಡ್​ನಲ್ಲಿ ಇದ್ದಾರೆ. ಈ ಬಾರಿಯ ಚುನಾವಣೆಯ ಫಲಿತಾಂಶ ಅಚ್ಚರಿ ತಂದಿರುವ ಜೊತೆಗೆ, ಪರಸ್ಪರ ದೋಷಾರೋಪ ಮಾಡುವುದನ್ನೂ ತಪ್ಪಿಸಿದೆ. ಬಿಜೆಪಿ ಬಹುಮತದಿಂದ ಗೆದ್ದಿದ್ದರೆ ಇಷ್ಟೊತ್ತಿಗಾಗಲೇ ಇವಿಎಂ ಭಾರಿ ಸದ್ದು ಮಾಡುತ್ತಿತ್ತು. ಒಂದು ವೇಳೆ ಕಾಂಗ್ರೆಸ್​ ಗೆದ್ದಿದ್ದರೆ, ರಾಹುಲ್​ ಗಾಂಧಿಯವರ ಟಕಾಟಕ್​ ಹಣ ಇನ್ನಷ್ಟು ಸೌಂಡ್​ ಮಾಡುತ್ತಿತ್ತು. ಒಟ್ಟಿನಲ್ಲಿ ಪರಸ್ಪರ ದೂಷಣೆ ಮಾಡಿಕೊಳ್ಳುವ ಬದಲು ಅಧಿಕಾರದ ಗದ್ದುಗೆ ಏರಲು ಎರಡೂ ಪಕ್ಷಗಳ ಕೊನೆಯ ಕ್ಷಣದ ವರೆಗೆ ಸರ್ಕಸ್​ ಮಾಡುತ್ತಿವೆ.

ಈ ಬಾರಿಯ ಚುನಾವಣೆಯ ಹೈಲೈಟ್​ ಉತ್ತರ ಪ್ರದೇಶ. ಬಿಜೆಪಿಗೆ ಭಾರಿ ಮುಖಭಂಗ ಮಾಡಿದ ಕ್ಷೇತ್ರವಿದು. ಮತದಾರರು ಹಾಗೂ ಸಮೀಕ್ಷೆಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಉತ್ತರ ಪ್ರದೇಶದ ಮತದಾರರು ಬಿಜೆಪಿಗೆ ಕೈಕೊಟ್ಟಿದ್ದಾರೆ. ಅತ್ತ ಕಾಂಗ್ರೆಸ್​ ನೀಡಿರುವ ಗ್ಯಾರೆಂಟಿ ಕಾರ್ಡ್​ ಹಿಡಿದು ತಮಗೆ ಒಂದು ಲಕ್ಷ ರೂಪಾಯಿ ಬರಲೇಬೇಕು ಎಂದು ಮಹಿಳೆಯರು ಉತ್ತರ ಪ್ರದೇಶದ ಕಾಂಗ್ರೆಸ್​ ಕಚೇರಿ ಎದುರು ಸರತಿ ಸಾಲಿನಲ್ಲಿ ನಿಂತು ದುಡ್ಡಿಗಾಗಿ ಒತ್ತಾಯಿಸುತ್ತಿದ್ದರೆ, ಇತ್ತ ಉತ್ತರ ಪ್ರದೇಶದಲ್ಲಿ ಅದರಲ್ಲಿಯೂ ಅಯೋಧ್ಯೆಯಲ್ಲಿ ಬಿಜೆಪಿ ಸೋತಿರುವುದಕ್ಕೆ ಕಂಗಾಲಾಗಿರುವ ಬಿಜೆಪಿ ಅಭಿಮಾನಿಗಳು, ಕಾರ್ಯಕರ್ತರು ಹಲವು ರೀತಿಯ ಮೀಮ್ಸ್​ಗಳನ್ನು ಬಳಸುತ್ತಿದ್ದಾರೆ. ಇದಾಗಲೇ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸದೇ ಇರುವುದಕ್ಕೆ ಬಿಜೆಪಿ ವಿರುದ್ಧ ರೀಲ್ಸ್​, ವಿಡಿಯೋ, ಮೀಮ್ಸ್​ಗಳ ಸುರಿಮಳೆ ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದ್ದರೆ, ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿರುವ ಮತದಾರರನ್ನು ತಮ್ಮ ಬಾಯಿಯಿಂದ ನೇರವಾಗಿ ಬೈಯದೇ ಕೆಲವು ಸೆಲೆಬ್ರಿಟಿಗಳು ಹೇಳಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ.

ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ನಟ ಅನುಪಮ್​ ಖೇರ್​ ನಿಗೂಢ ಪೋಸ್ಟ್​!

ಸಂಗೀತ ಮಾಂತ್ರಿಕ ಸೋನು ನಿಗಮ್​ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದ ಸಾಕಷ್ಟು ಸಂಚಲನ ಮೂಡಿಸಿದೆ. ಅದರಲ್ಲಿ, ಸೋನು ನಿಗಮ್ ಅವರು ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ದಾರೆ ಎಂದು ಬರೆಯಲಾಗಿದೆ. 500 ವರ್ಷಗಳ ಸತತ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ಸ್ಥಾಪಿಸಿದವರಿಗೇ ಹಿಂದೂಗಳು ಕೈಕೊಟ್ಟರು. ಇಲ್ಲಿನ ಮತದಾರರಿಗೆ ನಾಚಿಕೆಯಾಗಬೇಕು ಎನ್ನುವ ಅರ್ಥದಲ್ಲಿ ಸೋನು ನಿಗಮ್​ ಅವರು ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೀಗ ಈ ವಿಚಾರದ ಬಗ್ಗೆ ಖುದ್ದು ಸೋನು ನಿಗಮ್​ ಸ್ಪಷ್ಟನೆ ನೀಡಿದ್ದಾರೆ. ‘ನಾನು ಆ ರೀತಿ ಹೇಳಿಯೇ ಇಲ್ಲ. ನನ್ನ ಹೆಸರಿನಲ್ಲಿ ಸುಮ್ಮನೇ ಇಂಥ ವಿಷಯ ಹರಿಬಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಸೋನು ನಿಗಮ್ ಸಿಂಗ್ ಹೆಸರಿನ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ‘ಇಡೀ ಅಯೋಧ್ಯೆಯನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಹೊಸ ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸರ್ಕಾರ ನೀಡಿದೆ. 500 ವರ್ಷಗಳ ನಂತರ ರಾಮ ಮಂದಿರವನ್ನು ನಿರ್ಮಿಸಿದೆ. ದೇವಾಲಯವನ್ನು ಸುಂದರವಾಗಿ ನಿರ್ಮಿಸುತ್ತಿದೆ. ಅಂಥ ಪಕ್ಷವು ಅಯೋಧ್ಯೆಯಲ್ಲಿ ಗೆಲ್ಲಲಾಗಿಲ್ಲ. ಅಯೋಧ್ಯೆಯ ಜನರು ನಾಚಿಕೆಪಡಬೇಕು’ ಎಂದು ಸೋನು ನಿಗಮ್ ಸಿಂಗ್ ಹೆಸರಿನ ಖಾತೆ ಮೂಲಕ ಪೋಸ್ಟ್ ಮಾಡಲಾಗಿದೆ. ಇದನ್ನು ಬಿಜೆಪಿ ಬೆಂಬಲಿಗರು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇದು ತುಂಬಾ ದುರದೃಷ್ಟಕರ ಎಂದಿರುವ ಸೋನು ನಿಗಮ್​, ‘ನಾನು ಆ ರೀತಿ ಹೇಳಿಯೇ ಇಲ್ಲ. ಈ ಕಾರಣದಿಂದಲೇ ನಾನು ಸೋಷಿಶಯಲ್ ಮೀಡಿಯಾವನ್ನು ಏಳು ವರ್ಷದ ಹಿಂದೆ ತೊರೆದಿದ್ದೇನೆ. ಜನರು ಹಾಗೂ ಸೋಷಿಯಲ್​ ಮೀಡಿಯಾಗಳು ಸ್ವಲ್ಪವೂ ಯೋಚಿಸದೇ ಹೇಗೆ ಸುದ್ದಿ ಮಾಡುತ್ತಾರೆ ಎಂದು ನನಗೆ ಆಶ್ಚರ್ಯ ಆಗುತ್ತದೆ. ಹೀಗೆ ಬರೆದವರು ಬಿಹಾರದ ಕ್ರಿಮಿನಲ್ ವಕೀಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದ್ದರೂ ನನ್ನ ಹೆಸರು ಎಳೆದು ತಂದಿರುವುದು ದುರದೃಷ್ಟಕರ ಎಂದಿದ್ದಾರೆ.

ಭರ್ಜರಿ ಗೆಲುವಿನ ನಗೆ ಚೆಲ್ಲಿದ ತೇಜಸ್ವಿ ಸೂರ್ಯ ಮದ್ವೆಗೆ ಮುಹೂರ್ತ ಫಿಕ್ಸ್? ವಿಡಿಯೋ ವೈರಲ್

Scroll to load tweet…