Asianet Suvarna News Asianet Suvarna News

ತಮ್ಮನಿಗಾಗಿ ಜೈಲು ಸೇರಿದ್ದರೂ ನನ್ನ ವಿರುದ್ಧ ಪತ್ನಿ ಕಣಕ್ಕಿಳಿಸಿದ: ಸೋಮಶೇಖರ ರೆಡ್ಡಿ

ನನ್ನ ತಮ್ಮನಿಗಾಗಿ 63 ದಿನ ಜೈಲು ಸೇರಿದೆ. ಅವನನ್ನು ಜೈಲಿನಿಂದ ಬಿಡುಗಡೆ ಮಾಡಲು ಹಗಲು ರಾತ್ರಿ ಹೋರಾಡಿದ್ದೆ. ತಮ್ಮನ ಪತ್ನಿ ಲಕ್ಷ್ಮೀ ಅರುಣಾ ಸಹ ನಿಮ್ಮ ಋುಣ ತೀರಿಸಲು ಸಾಧ್ಯವಿಲ್ಲ ಮಾಮಾ ಎಂದಿದ್ದಳು. ಅವರ ಪುತ್ರಿ ಸಹ ಇದೇ ಮಾತು ಹೇಳಿದ್ದಳು. 

somashekar reddy slams on janardhan reddy at ballari gvd
Author
First Published Feb 2, 2023, 7:03 AM IST

ಬಳ್ಳಾರಿ (ಫೆ.02): ‘ನನ್ನ ತಮ್ಮನಿಗಾಗಿ 63 ದಿನ ಜೈಲು ಸೇರಿದೆ. ಅವನನ್ನು ಜೈಲಿನಿಂದ ಬಿಡುಗಡೆ ಮಾಡಲು ಹಗಲು ರಾತ್ರಿ ಹೋರಾಡಿದ್ದೆ. ತಮ್ಮನ ಪತ್ನಿ ಲಕ್ಷ್ಮೀ ಅರುಣಾ ಸಹ ನಿಮ್ಮ ಋುಣ ತೀರಿಸಲು ಸಾಧ್ಯವಿಲ್ಲ ಮಾಮಾ ಎಂದಿದ್ದಳು. ಅವರ ಪುತ್ರಿ ಸಹ ಇದೇ ಮಾತು ಹೇಳಿದ್ದಳು. ಅವರಿಗಾಗಿ ಇಷ್ಟೆಲ್ಲ ತ್ಯಾಗ ಮಾಡಿದ್ದೆ. ಆದಾಗ್ಯೂ ನನ್ನ ವಿರುದ್ಧವೇ ಅವರು ಸ್ಪರ್ಧೆ ಮಾಡುತ್ತಿದ್ದಾರೆ’ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮೊದಲ ಬಾರಿಗೆ ಸೋದರ ಜನಾರ್ದನ ರೆಡ್ಡಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿಗದ ಅವರು, ‘ಗಣಿಗಾರಿಕೆಯಿಂದ ಅವರು ಸಂಪಾದನೆ ಮಾಡಿಕೊಂಡರು. ನಾನೇನು ಮಾಡಿಕೊಂಡಿಲ್ಲ. ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿಗೆ ಹೋದ ಕಾರಣ 2013ರಲ್ಲಿ ಚುನಾವಣೆಗೂ ಸ್ಪರ್ಧಿಸಿರಲಿಲ್ಲ. ಆತನಿಗಾಗಿ ನಾನೂ ಜೈಲಿಗೆ ಹೋಗಬೇಕಾಯಿತು. ತಮ್ಮನಿಗಾಗಿ ಅಷ್ಟೆಲ್ಲ ತ್ಯಾಗ ಮಾಡಿದೆ. ಆದರೂ ತಮ್ಮನ ಪತ್ನಿ ನನ್ನ ವಿರುದ್ಧವೇ ಸ್ಪರ್ಧಿಸುತ್ತಿರುವುದು ಎಷ್ಟುಸರಿ?’ ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದರು.

ತಂದೆಯ ಹುಟ್ಟುಹಬ್ಬದಂದು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ ಮಗಳು

ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪಕ್ಷ ಟಿಕೆಟ್‌ ನೀಡಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ನೀಡದಿದ್ದರೂ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಬಿಜೆಪಿ ಸೇರುವೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ನನ್ನ ತಮ್ಮನ ಪತ್ನಿ ಲಕ್ಷ್ಮೇ ಅರುಣಾ ನನ್ನ ವಿರುದ್ಧ ಸ್ಪರ್ಧೆ ಮಾಡುತ್ತಿರುವುದು ಸಂತಸವಾಗಿದೆ. ಸೊಸೆ ಮತ್ತು ಮಾವನ ನಡುವೆ ರಸವತ್ತಾದ ಪೈಪೋಟಿ ಇರಲಿದೆ ಎಂದು ಮಾರ್ಮಿಕವಾಗಿ ನುಡಿದರು.

‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಘೋಷಣೆ ಅನಿರೀಕ್ಷಿತವಲ್ಲ. ನಿರೀಕ್ಷೆಯಂತೆ ಅವರು ಅಭ್ಯರ್ಥಿ ಹಾಕಿದ್ದಾರೆ. ನನ್ನ ಸಹೋದರ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ನನ್ನನ್ನು ಬರುವಂತೆ ಕೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ. ಪಕ್ಷ ಕಟ್ಟುವುದು ಬೇಡ. ಬಿಜೆಪಿಯಲ್ಲಿಯೇ ಇರೋಣ ಎಂದು ಹೇಳಿದ್ದೆ. ನಾನು, ನನ್ನ ಹಿರಿಯ ಸಹೋದರ ಕರುಣಾಕರ ರೆಡ್ಡಿ, ಶ್ರೀರಾಮುಲು ಸೇರಿದಂತೆ ಎಲ್ಲರೂ ತಮ್ಮನಿಗೆ ತಿಳಿ ಹೇಳಿದೆವು. ಆದರೆ, ನಮ್ಮ ಮಾತು ಕೇಳಲಿಲ್ಲ. ನಾನು ಪಕ್ಷಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ನನ್ನ ವಿರುದ್ಧ ತನ್ನ ಪತ್ನಿಯನ್ನು ಸ್ಪರ್ಧೆಗೆ ಇಳಿಸಿದ್ದಾನೆ. ಹಾಗಂತ ನಾನು ವಿಚಲಿತನಾಗಿಲ್ಲ. ಬಳ್ಳಾರಿ ಜನರ ಪರವಾಗಿ ಈವರೆಗೆ ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಗೆದ್ದೇ ಗೆಲ್ಲುವೆ’ ಎಂದು ಸೋಮಶೇಖರ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನ ಸಹೋದರ ಜನಾರ್ದನ ರೆಡ್ಡಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನನಗ್ಯಾವ ನೋವಿಲ್ಲ. ಒಂದು ವೇಳೆ ಇದ್ದರೂ ಜನರ ಸೇವೆಯಲ್ಲಿ ಎಲ್ಲ ನೋವನ್ನು ಮರೆಯುತ್ತೇನೆ. ನಾನು ಯಾವುದೇ ಕಾರಣಕ್ಕೂ ಚುನಾವಣೆಯಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ. ನೂರಕ್ಕೆ ನೂರರಷ್ಟುನಾನು ಸ್ಪರ್ಧೆ ಮಾಡುವುದು ಖಚಿತ. ನಾನು ಅಡ್ಜಸ್ಟ್‌ಮೆಂಟ್‌ ರಾಜಕಾರಣಿ ಅಲ್ಲ, ಅದು ನನ್ನ ಜಾಯಮಾನದಲ್ಲಿಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಜೆಟ್‌ ಕುರಿತು 12 ದಿನ ಬಿಜೆಪಿ ದೇಶವ್ಯಾಪಿ ಅಭಿಯಾನ: ಇಂದು ಎಲ್ಲ ಸಿಎಂಗಳ ಸುದ್ದಿಗೋಷ್ಠಿ

‘ನಾನು ನಗರಸಭೆ ಅಧ್ಯಕ್ಷನಾಗಿದ್ದಾಗಿನಿಂದಲೂ ಜನರ ಮಧ್ಯೆಯೇ ಇದ್ದೇನೆ. ಜನಾರ್ದನ ರೆಡ್ಡಿ ಎಸಿ ಕೋಣೆಯಲ್ಲಿದ್ದರು. ಇದೀಗ ಹೊರಗಡೆ ಬಂದಿದ್ದಾರೆ. ನಮ್ಮ ನಿಷ್ಠಾವಂತ ಕಾರ್ಯಕರ್ತರು ಎಂದಿಗೂ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಕೆಲವರು ಯಾವುದೇ ಆಸೆಗೆ ಅಲ್ಲಿಗೆ ಹೋಗಿದ್ದಾರೆ. ಹೋಗಲಿ ಬಿಡಿ. ಅದರ ಬಗ್ಗೆ ನಮಗ್ಯಾವ ಬೇಸರವೂ ಇಲ್ಲ’ ಎಂದರು. ‘ನೀವು ತಮ್ಮನಿಗಾಗಿ ಎಷ್ಟೆಲ್ಲ ತ್ಯಾಗ ಮಾಡಿದ್ದರೂ ಈಗ ಅವರೇ ಪತ್ನಿಯನ್ನು ನಿಮ್ಮ ವಿರುದ್ಧ ಸ್ಪರ್ಧೆಗೆ ಇಳಿಸಿದ್ದಾರೆ. ಏನನಿಸುತ್ತೆ?’ ಎಂದು ಕೇಳಿದ ಪ್ರಶ್ನೆಗೆ ‘ನನ್ನ ಗುಣ ಅವರಿಗೆ ಇರಬೇಕಲ್ಲ’ ಎಂದು ಸೋಮಶೇಖರ ರೆಡ್ಡಿ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios