ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಇಷ್ಟು ದಿನ ಅಸಮಾಧಾನಗೊಂಡಿದ್ದವರನ್ನು ಸಮಾಧಾನ ಮಾಡುತ್ತಾ ಬಂದಿರುವ ಸಿದ್ದರಾಮಯ್ಯ ಅವರೇ ಜೆಡಿಎಸ್ ನಡೆಗೆ ಗರಂ ಆಗಿದ್ದಾರೆ.

ಬೆಂಗಳೂರು, (ಜ.07): ಕಾಂಗ್ರೆಸ್‌ ನೀಡಿದ್ದ ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ನಿನ್ನೆಯಷ್ಟೇ (ಭಾನುವಾರ) ಸಿಎಂ ಕುಮಾರಸ್ವಾಮಿ ಅಂಕಿತ ಹಾಕಿದ್ದಾರೆ.

Add Asianetnews Kannada as a Preferred SourcegooglePreferred

ಆದ್ರೆ, ಕಾಂಗ್ರೆಸ್‌ ನೀಡಿದ ಪೂರ್ಣ ಪಟ್ಟಿಗೆ ಒಪ್ಪಿಗೆಯನ್ನು ಕೊಟ್ಟಿಲ್ಲ. ಕಾಂಗ್ರೆಸ್ ತನ್ನ 20 ಶಾಸಕರ ಪಟ್ಟಿಯನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಪಟ್ಟಿಯನ್ನು ಸಿಎಂ ಕುಮಾರಸ್ವಾಮಿ ಅಂಕಿತಕ್ಕೆ ನೀಡಿತ್ತು.

ನಿಗಮ ಮಂಡಳಿ:ಐದು ಕೈ ಶಾಸಕರಿಗಿಲ್ಲ 'ಕುಮಾರ' ಕೃಪೆ, ಮತ್ತೆ ಭುಗಿಲೆದ್ದ ಅಸಮಧಾನ

ಆದರೆ ಕುಮಾರಸ್ವಾಮಿ ಅವರು ಐದು ಜನ ಶಾಸಕರನ್ನು ಬಿಟ್ಟು ಉಳಿದ ಶಾಸಕರ ಹೆಸರುಗಳಿಗೆ ಮಾತ್ರವೇ ಅಂಕಿತ ಹಾಕಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.

ಇನ್ನು ದೋಸ್ತಿಯಲ್ಲಿ ಎಷ್ಟೇ ಅಸಮಾಧಾನ ಸ್ಫೋಟಗೊಂಡಿದ್ದರು ಶಮನ ಮಾಡುತ್ತಿದ್ದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಇದೀಗ ಜೆಡಿಎಸ್ ಮುಖಂಡರ ನಡೆಗೆ ತೀವ್ರ ಅಸಮಾಧಾನಗೊಂಡಿದ್ದಾರೆ.

ಕೊನೆಗೂ ನಿಗಮ ಮಂಡಳಿಗೆ ಕುಮಾರಸ್ವಾಮಿ ಅಂಕಿತ: ಯಾರಿಗೆಲ್ಲ ಚಾನ್ಸ್?

ನಿಗಮ ಮಂಡಳಿ ನೇಮಕದಲ್ಲಿ ಕೆಲ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿದ್ದು, ಜೆಡಿಎಸ್ ಮುಖಂಡರ ವರ್ತನೆ ಬಗ್ಗೆ ದೂರು ನೀಡಿದ್ದಾರೆ.

ಸಂಪುಟ ವಿಸ್ತರಣೆ ವೇಳೆಯೂ ಕಾಂಗ್ರೆಸ್ ಹಂಚಿಕೆ ಮಾಡಿದ್ದ ಖಾತೆಗಳಿಗೆ ಜೆಡಿಎಸ್ ಕೊಕ್ಕೆ ಹಾಕಿದೆ. ಇದೀಗ ನಿಗಮ ನೇಮಕದಲ್ಲೂ ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಬೆಲೆ ಇಲ್ಲವಾಗಿದೆ

ಹೈಕಮಾಂಡ್ ಬಗ್ಗೆ ನಮ್ಮ ಶಾಸಕರೇ ಸಂಶಯ ಪಡೋ ರೀತಿಯಲ್ಲಿ ಬಿಂಬಿಸಲಾಗ್ತಿದೆ. ಜೆಡಿಎಸ್ ಮುಖಂಡರಿಗೆ ಸಾಥ್ ನೀಡ್ತಿರೋದು ದುರದೃಷ್ಟಕರ ಎಂದು ಫೋನ್ ಮೂಲಕ ವೇಣುಗೋಲ್ ಮುಂದೆ ಸಿದ್ದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪದೇ ಪದೇ ಜೆಡಿಎಸ್ ಮೈತ್ರಿ ಧರ್ಮವನ್ನ ಮುರಿಯುತ್ತಿದ್ದು, ಕೂಡಲೇ ಇಂತಹ ಗೊಂದಲಗಳಿಗೆ ತೆರೆ ಎಳೆಬೇಕಿದೆ.ಲೋಕಸಭೆ ಚುನಾವಣಾ ಹೊಸ್ತಿಲಲ್ಲಿ ಇಂತಹ ಗೊಂದಲಗಳು ಸರಿಯಲ್ಲ ಎಂದು ವೇಣುಗೋಪಾಲ್ ಗೆ ದೂರು ನೀಡಿದ್ದಾರೆ.

ಇಷ್ಟು ದಿನ ದೋಸ್ತಿ ನಾಯಕರ ಅಸಮಾಧಾನವನ್ನು ಶಮನ ಮಡುತ್ತಾ ಮೈತ್ರಿ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಂತಿದ್ದ ಸಿದ್ದರಾಮಯ್ಯ ಅವರೇ ಇದೀಗ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿದೆ