Asianet Suvarna News Asianet Suvarna News

Karnataka Politics: ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಹೊಸ ಸೂತ್ರ

ಚುನಾವಣಾ ದೃಷ್ಟಿಯಿಂದ ಯುವಕರನ್ನು ಸಂಘಟಿಸಲು ಹಾಗೂ ಯುವಕರ ಮತಬ್ಯಾಂಕ್ ಸೆಳೆಯಲು ಕಾಂಗ್ರೆಸ್ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇಕಡಾ ಅರವತ್ತೈದರಷ್ಟು ಯುವಕರೇ ಇರುವ ಕಾರಣ ಚುನಾವಣೆಯಲ್ಲಿ ಅವರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.

siddaramaiah slams pm modi over unemployment in bengaluru gvd
Author
Bangalore, First Published Jul 11, 2022, 9:29 PM IST

ವರದಿ: ಸುರೇಶ್ ಎ ಎಲ್, ಏಷ್ಯಾನೆಟ್ ಸುವರ್ಣ ನ್ಯೂಸ್.

ಬೆಂಗಳೂರು (ಜು.11): ಚುನಾವಣಾ ದೃಷ್ಟಿಯಿಂದ ಯುವಕರನ್ನು ಸಂಘಟಿಸಲು ಹಾಗೂ ಯುವಕರ ಮತಬ್ಯಾಂಕ್ ಸೆಳೆಯಲು ಕಾಂಗ್ರೆಸ್ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇಕಡಾ ಅರವತ್ತೈದರಷ್ಟು ಯುವಕರೇ ಇರುವ ಕಾರಣ ಚುನಾವಣೆಯಲ್ಲಿ ಅವರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಹಾಗಾಗಿ ಪ್ರತಿ ಯುವಕರನ್ನು ಆನ್ ಲೈನ್ ಮೂಲಕ ಸಂಪರ್ಕ ಮಾಡಿ, ಅವರ ಉದ್ಯೋಗ, ಒಂದು ವೇಳೆ ಇತ್ತೀಚಿಗೆ  ಕೆಲಸ ಕಳೆದುಕೊಂಡಿದ್ದರೆ ಅದರ ಮಾಹಿತಿ, ಅವರ ಕೌಟುಂಬಿಕ ಸ್ಥಿತಿಗತಿ, ಹಾಗೂ ಅವರ ತಕ್ಷಣದ ಅವಶ್ಯಕತೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಸಾಧ್ಯವಾದಷ್ಟು ಹೆಚ್ಚು ಯುವಕರ ಜೊತೆ ಸಂಪರ್ಕ ಸಾಧಿಸುವುದು ಕಾಂಗ್ರೆಸ್ ಉದ್ದೇಶ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಯುವ ಕಾಂಗ್ರೆಸ್ ಘಟಕದಿಂದ 'ಯುವ ಜನೋತ್ಸವ' ಎಂಬ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಹಳ ಬಿಜೆಪಿ ಪಕ್ಷದ ಆಡಳಿತ ವೈಫಲ್ಯಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ದೇಶದಲ್ಲಿ ನೂರಾ ಮೂವತ್ತು ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ನೂರಾ ಏಳು ಕೋಟಿ ದುಡಿಯುವ ಸಾಮರ್ಥ್ಯ ಇರುವ ಜನರಿದ್ದಾರೆ, ಅದರಲ್ಲಿ ಕೇವಲ ಮೂವತ್ತೈದು ಪರ್ಸೆಂಟ್ ಜನರಿಗಷ್ಟೇ ಉದ್ಯೋಗ ಇದೆ. 

ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್‌ ಎಡವಟ್ಟುಗಳು ಒಂದೋ, ಎರಡೋ?: ಸಿದ್ದು

ಬಾಕಿ ಉಳಿದವರು ನಿರುದ್ಯೋಗ ಸಮಸ್ಯೆಯಿಂದ ಬಳಲ್ತಿದ್ದಾರೆ. ಕೆಲಸ ಮಾಡುವ ಯುವಕರಿಗೆ ಪಕೋಡ ಮಾರಿ ಬದುಕಿ ಅಂತಿದಾರೆ ಬಿಜೆಪಿಯವರು. ಬಿಜೆಪಿ ಸರ್ಕಾರಕ್ಕೆ ಯುವ ಶಕ್ತಿಯನ್ನು ಬಳಸಿಕೊಳ್ಳುವುದು ಗೊತ್ತಿಲ್ಲ. ಅವರ ಪಕ್ಷದವರೇ ಆದ ಸುಬ್ರಮಣಿಯನ್ ಸ್ವಾಮಿ ಅವರು ಒಂದು ಟ್ವೀಟ್ ಮೂಲಕ ಟೀಕೆ ಮಾಡಿದ್ದಾರೆ. ಎರಡು ಸಾವಿರದ ಹನ್ನೊಂದರಲ್ಲಿ ಆರ್ಥಿಕತೆಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದ ಭಾರತ, ಈಗ ನೂರಾ ಅರವತ್ತನೆಯ ಸ್ಥಾನಕ್ಕೆ ಕುಸಿದಿದೆ. ನರೇಂದ್ರ ಮೋದಿಯವರ ಕೆಟ್ಟ ಆರ್ಥಿಕ ನೀತಿ ಇದಕ್ಕೆಲ್ಲಾ ಕಾರಣ. 

ಅಧಿಕಾರಕ್ಕೆ ಬಂದಾಗ ಒಂದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ಅವರ ಮಾತಿನ ಪ್ರಕಾರವೇ ಹೇಳುವುದಾದರೆ ಕಳೆದ ಎಂಟು ವರ್ಷಗಳಲ್ಲಿ ಹದಿನಾರು ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಇತ್ತೀಚೆಗೆ ಅಗ್ನಿಪಥ್ ಅನ್ನೋ ಯೋಜನೆ ತಂದ್ರು. ಹದಿನೇಳನೇ ವಯಸ್ಸಿನಿಂದ ಇಪ್ಪತ್ತ ಮೂರು ವರ್ಷ ವಯಸ್ಸಿನವರೆಗೆ ಒಬ್ಬ ಯುವಕನಿಗೆ ಸೈನ್ಯದಲ್ಲಿ ಕೆಲಸ ಕೊಡುವುದಾಗಿ ಘೋಷಣೆ ಮಾಡಿದರು. ಆ ನಂತರ ಆತನ ಪರಿಸ್ಥಿತಿ ಏನು. ಬದುಕುವ ಸಲುವಾಗಿ ಆ ಯುವಕ ಅಡ್ಡ ದಾರಿ ಹಿಡಿದರೆ ಅದಕ್ಕೆ ಕಾರಣ ಯಾರು.? ಯುವಕರಿಗೆ ದ್ರೋಹ ಮಾಡಿದವರು ಅಂತಾ ಯಾರಾದ್ರೂ ಇದ್ದರೆ ಅದಕ್ಕೆ ಬಿಜೆಪಿ ಕಾರಣ ಎಂದು ಕಿಡಿಕಾರಿದರು.

ಡಿಮಾನಿಟೈಸೇಷನ್ ಮಾಡಿದಾಗ ಇನ್ನು ಮುಂದೆ ದೇಶದಲ್ಲಿ ಕಪ್ಪುಹಣ ಇರೋದೆ ಇಲ್ಲ ಅಂದರು. ಆದರೆ ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ಆಪರೇಷನ್ ಕಮಲ ಮಾಡಲು ಕೋಟಿ ಗಟ್ಟಲೆ ಹಣ ವ್ಯಯ ಮಾಡ್ತಾ ಇದ್ದಾರೆ. ಇದೆಲ್ಲಾ ಎಲ್ಲಿಂದ ಬಂತು ಬಿಜೆಪಿಯವರಿಗೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ, ಮಿತಿ ಮೀರಿ ಹೋಗಿದೆ. ಮೂಲಭೂತ ಸೌಲಭ್ಯ ಗಳು ಇಲ್ಲ. ಆದರೆ ಇದನ್ನೆಲ್ಲಾ ಜನರಿಂದ ಮರೆಮಾಚಲು ಧರ್ಮದ ವಿಚಾರ ಮುಂದೆ ತರ್ತಾ ಇದ್ದಾರೆ. ಪಠ್ಯಪುಸ್ತಕವನ್ನು ಕೇಸರೀಕರಣ ಮಾಡಲಾಗ್ತಿದೆ. ಸಂವಿಧಾನದ ಶಿಲ್ಪಿ ಅನ್ನೋ ಪದವನ್ನೇ ತೆಗೆದು ಹಾಕಿದ್ದಾರೆ. ಸಂವಿಧಾನದ ಬಗ್ಗೆ ಬಿಜೆಪಿಯವರಿಗೆ ಗೌರವ ಇಲ್ಲ ಎಂದರು.

ಆರ್‌ಎಸ್‌ಎಸ್ ಗಲಭೆಗೆ ಪ್ರಚೋದನೆ ಕೊಡುತ್ತೆ: ಆರ್‌ಎಸ್‌ಎಸ್ ಬಗ್ಗೆಯೂ ಕಿಡಿ ಕಾರಿದ ಸಿದ್ದರಾಮಯ್ಯ, ಗಲಭೆಗಳು ಸೃಷ್ಟಿ ಮಾಡುವುದು ಯಾರೋ ಆದರೆ ಪರಿಣಾಮ ಬೀರುವುದು ಇನ್ಯಾರ ಮೇಲೋ, ಆರ್‌ಎಸ್‌ಎಸ್‌ನವರು ಗಲಭೆಗೆ ಪ್ರಚೋದನೆ ನೀಡ್ತಾರೆ. ಆದರೆ ಏಟು ಬೀಳುವುದು ಸಾಮಾನ್ಯ ಕಾರ್ಯಕರ್ತರಿಗೆ. ಇತ್ತೀಚಿಗೆ ನಮ್ಮ ಯುವ ಘಟಕದ ಕಾರ್ಯಕರ್ತರು ಗೃಹ ಮಂತ್ರಿ ಮನಗೆ ಹೋಗಿ ಚಡ್ಡಿ ಸುಟ್ಟು ಪ್ರತಿಭಟನೆ ಮಾಡಿದ್ರು. ಅವರನ್ನು ಅರೆಸ್ಟ್ ಮಾಡಿ ಒಂದು ವಾರ ಜೈಲಿನಲ್ಲಿ ಇಡಲಾಯಿತು. 

ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ, ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ರಚನೆ

ಅದಕ್ಕೆ ಪ್ರತಿಯಾಗಿ ಆರ್‌ಎಸ್‌ಎಸ್‌ನವರು ಪ್ರತಿಭಟನೆಗೆ ಬರಲಿಲ್ಲ, ಬದಲಾಗಿ ಚಲವಾದಿ ನಾರಾಯಣ ಸ್ವಾಮಿ ನಮ್ಮ ಮನೆಗೆ ಚಡ್ಡಿ ಹೊತ್ತು ತಂದಿದ್ದ ಎಂದು ಸಿದ್ದರಾಮಯ್ಯ ವ್ಯಂಗವಾಡಿದರು. ವಾಸ್ತವಿಕ ಸಮಸ್ಯೆ ಗಳನ್ನು ಮುಚ್ಚಿಟ್ಟು, ಯುವಕರನ್ನು ಕತ್ತಲಿನಲ್ಲಿ ಇಡುವ ಕೆಲಸ ಬಿಜೆಪಿ ಮಾಡ್ತಾ ಇದೆ. ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಂದು ಕರೆ ಕೊಟ್ಟ ಸಿದ್ದರಾಮಯ್ಯ, ಕೆಪಿಸಿಸಿ ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಕರನ್ನು ಸಂಪರ್ಕಿಸಿ, ಅವರಿಗೆ ಉದ್ಯೋಗಾವಕಾಶ ಗಳನ್ನು ಸೃಷ್ಟಿಸಿಕೊಡುವ ಕೆಲಸ ಮಾಡುವುದನ್ನು ಶ್ಲಾಘಿಸಿದರು.

Follow Us:
Download App:
  • android
  • ios