ಮೋದಿ, ನೆಹರು ಆಗಸ, ಭೂಮಿ ವ್ಯತ್ಯಾಸ: ಸಿದ್ದರಾಮಯ್ಯ
* ನೆಹರು, ಮೋದಿಗೆ ಆಕಾಶ, ಭೂಮಿಯಷ್ಟು ವ್ಯತ್ಯಾಸ: ಸಿದ್ದು
* ನೆಹರು ಕಟ್ಟಿದ ಸಂಸ್ಥೆ ಹಾಳು ಮಾಡಲು ಮೋದಿ ಶ್ರಮ: ಮಾಜಿ ಸಿಎಂ ಕಿಡಿ
* ಮೋದಿ ಪ್ರಧಾನಿ ಆದ ಬಳಿಕ ಒಂದೇ ಒಂದು ಸಂಸ್ಥೆಯನ್ನೂ ಕಟ್ಟಿಲ್ಲ
ಬೆಂಗಳೂರು(ಮೇ.28): ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಕಾಶ ಮತ್ತು ಭೂಮಿಗೆ ಇರುವಷ್ಟು ವ್ಯತ್ಯಾಸವಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜವಾಹರ್ ಲಾಲ್ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ ನೆಹರು ಅವರ ಆಲೋಚನೆಯಾಗಿತ್ತು ಅಂತ ತಿಳಿಸಿದ್ದಾರೆ.
'ಹೊರಗಿನಿಂದ ಬಂದವರು... 'ಆರೆಸ್ಸೆಸ್ ಮೂಲ ಕೆದಕಿದ ಸಿದ್ದರಾಮಯ್ಯ
ನೆಹರು ಅವರು ವಿಜ್ಞಾನ-ತಂತ್ರಜ್ಞಾನ ಮತ್ತು ಪ್ರಜಾಪ್ರಭುತ್ವದ ಆಧಾರದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದರು. ಅಲ್ಲದೆ, ಪ್ರಜಾಪ್ರಭುತ್ವದ ಬೇರುಗಳು ದೇಶದಲ್ಲಿ ಆಳವಾಗಿ ಬೇರೂರಲು ಬೇಕಾದ ಎಲ್ಲ ಕ್ರಮ ಕೈಗೊಂಡರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಇದಕ್ಕೆಲ್ಲಾ ತದ್ವಿರುದ್ಧ. ಇವರು ಪ್ರಧಾನಿ ಆದ ಬಳಿಕ ಒಂದೇ ಒಂದು ಸಂಸ್ಥೆಯನ್ನೂ ಕಟ್ಟಿಬೆಳೆಸಿಲ್ಲ. ನೆಹರು ಅವರು ಕಟ್ಟಿದ ತಾಂತ್ರಿಕ-ವೈಜ್ಞಾನಿಕ-ಶೈಕ್ಷಣಿಕ ಸಂಸ್ಥೆಗಳ ಹೆಸರನ್ನು ಹಾಳು ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಕಿಡಿಕಾರಿದರು.