*  ದಲಿತರ ಕಲ್ಯಾಣಕ್ಕೆ ಹೆಚ್ಚು ಕೊಡುಗೆ ನೀಡಿದವರು ಯಾರು?*  ಬಹಿರಂಗ ಚರ್ಚೆಗೆ ಬನ್ನಿ: ವಿಪಕ್ಷ ನಾಯಕ ಆಹ್ವಾನ*  ಬಿಜೆಪಿಯಿಂದ ದಲಿತ ಕಲ್ಯಾಣಕ್ಕೆ ಅನುದಾನ ಸಿಗದಿದ್ದರೂ ಪ್ರಶ್ನಿಸುತ್ತಿಲ್ಲ  

ಬೆಂಗಳೂರು(ನ.05): ದಲಿತರ ಕಲ್ಯಾಣಕ್ಕಾಗಿ ದೇಶದಲ್ಲೇ(India) ಮೊದಲ ಬಾರಿಗೆ ಹಲವಾರು ಕಾಯಿದೆ ಹಾಗೂ ಕಾರ್ಯಕ್ರಮ ರೂಪಿಸಿದವನು ನಾನು. ಬಿಜೆಪಿ ಸರ್ಕಾರಕ್ಕೆ ದಲಿತರ ಪರ ಇಚ್ಛಾಶಕ್ತಿ ಇದ್ದರೆ ಪರಿಶಿಷ್ಟಜಾತಿ ಉಪಯೋಜನೆ ಮತ್ತು ಪರಿಶಿಷ್ಟಪಂಗಡ ಉಪಯೋಜನೆ (ಎಸ್‌ಸಿಪಿ/ಟಿಎಸ್‌ಪಿ) ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತಂದು ಬಜೆಟ್‌ನ ಶೇ.24.1ರಷ್ಟು ಅನುದಾನವನ್ನು ದಲಿತರ ಕಲ್ಯಾಣಕ್ಕಾಗಿ ಮೀಸಲಿಡಲಿ. ಇದಕ್ಕೆ ಬಿಜೆಪಿ ಸಿದ್ಧವಿದೆಯೇ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಸವಾಲು ಎಸೆದಿದ್ದಾರೆ.

Add Asianetnews Kannada as a Preferred SourcegooglePreferred

ದಲಿತರ(Dalit) ಕಲ್ಯಾಣಕ್ಕಾಗಿ ನಮ್ಮ ಸರ್ಕಾರ(Congress Government) ರಚಿಸಿದ್ದ ಕಾಯ್ದೆಗಳು, ರೂಪಿಸಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ಚರ್ಚೆ ನಡೆಸಿದರೆ ಭಾಗವಹಿಸಲು ಸಿದ್ಧನಿದ್ದೇನೆ. ಈ ಮೂಲಕ ಯಾವ ಪಕ್ಷ ದಲಿತರ ಪರವಾಗಿದೆ ಮತ್ತು ಯಾರು ವಿರುದ್ಧವಿದ್ದಾರೆ ಎಂಬುದನ್ನು ಸಾರ್ವಜನಿಕರೇ ತೀರ್ಮಾನ ಮಾಡಲಿ ಎಂದು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದ್ದೇಕೆ : ಸಿಡಿದ ಮುಖಂಡರು

ಇದೇ ವೇಳೆ ನಾನು ಮುಸ್ಲಿಂ(Muslim) ವಿರೋಧಿ ಎಂದು ಬೊಬ್ಬಿಟ್ಟಪಕ್ಷದ ಅಭ್ಯರ್ಥಿಗಳ ಠೇವಣಿ ಜಪ್ತಿ ಮಾಡಿಸಿ ಉಪ ಚುನಾವಣೆಯಲ್ಲಿ(Election) ಮತದಾರರು ಉತ್ತರ ಕೊಟ್ಟಿದ್ದಾರೆ. ಈಗ ಬಿಜೆಪಿಯ(BJP) ಕೆಲವು ತಥಾಕಥಿತ ದಲಿತ ನಾಯಕರು ನಾನು ದಲಿತ ವಿರೋಧಿ ಎಂದು ಕೂಗಾಡುತ್ತಿದ್ದಾರೆ. ಅವರಿಗೂ ಮತದಾರರೇ ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ದಲಿತ ವಿರೋಧಿ ಎಂದು ಬಿಜೆಪಿ ದಲಿತ ನಾಯಕರು ನಡೆಸಿದ ಪ್ರತಿಭಟನೆ(Protest) ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿಂದಗಿಯಲ್ಲಿ(Sindagi) ನಡೆದಿದ್ದ ಮಾದಿಗ ದಂಡೋರ ಸಭೆಯಲ್ಲಿ ಗೋವಿಂದ ಕಾರಜೋಳ, ರಮೇಶ್‌ ಜಿಗಜಿಣಗಿ, ನಾರಾಯಣ ಸ್ವಾಮಿ ಮೊದಲಾದ ನಾಯಕರು ಸ್ವಾರ್ಥಕ್ಕಾಗಿ ಸಂವಿಧಾನ ವಿರೋಧಿಸುವ ಪಕ್ಷ ಸೇರಿದ್ದಾರೆ ಎಂದು ಹೇಳಿದ್ದೆ. ಆದರೆ, ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳಿಲ್ಲ. ಹೀಗಿದ್ದರೂ ಬಿಜೆಪಿ ದಲಿತ ಮೋರ್ಚಾದ ತಥಕಾಥಿತ ನಾಯಕರು ನನ್ನನ್ನು ದಲಿತ ವಿರೋಧಿ ಎಂದು ಚಿತ್ರಿಸಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bengaluru: ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ SC Morcha ಪ್ರತಿಭಟನೆ!

ರಾಜ್ಯ ಬಜೆಟ್‌ನ(Budget) ಶೇ.24.1ರಷ್ಟು ಭಾಗವನ್ನು ಮೀಸಲಿಡುವ ಎಸ್‌ಸಿಪಿ/ಟಿಎಸ್‌ಪಿ(ST/ST) ತಿದ್ದುಪಡಿ ಕಾಯ್ದೆಯನ್ನು ನಾನು ಜಾರಿಗೆ ತಂದಿದ್ದೆ. ಕಾಯ್ದೆಯ ಪ್ರಕಾರ ಮೀಸಲಿಟ್ಟಶೇ.24ರಷ್ಟು ಬಜೆಟ್‌ ಹಣ ಖರ್ಚಾಗದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಬಳಸಬಹುದಾಗಿದೆ ಮತ್ತು ಮೀಸಲಿಟ್ಟ ಅನುದಾನವನ್ನು(Grant) ಖರ್ಚು ಮಾಡದ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. 2008-09ರಿಂದ 2012-13ನೇ ಸಾಲಿನವರೆಗೆ ಬಿಜೆಪಿ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಖರ್ಚು ಮಾಡಿದ್ದು ಕೇವಲ 22,261 ಕೋಟಿ ರು., ನಮ್ಮ ಸರ್ಕಾರದ ಅವಧಿಯಲ್ಲಿ 88,395 ಕೋಟಿ. ರು. ಖರ್ಚು ಮಾಡಲಾಗಿತ್ತು. ಹಾಗಾದರೆ ಯಾರು ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯಿಂದ ದಲಿತ ಕಲ್ಯಾಣಕ್ಕೆ ಅನುದಾನ ಸಿಗದಿದ್ದರೂ ಪ್ರಶ್ನಿಸುತ್ತಿಲ್ಲ. ಪರಿಶಿಷ್ಟಜಾತಿ/ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಸೌಲಭ್ಯವನ್ನು ಸುಪ್ರೀಂಕೋರ್ಟ್‌(Supreme Court) ರದ್ದುಗೊಳಿಸಿದಾಗ ಕಣ್ಣುಮುಚ್ಚಿ ಕೂತಿದ್ದರು ಬಿಜೆಪಿಯ ದಲಿತ ನಾಯಕರು. ಸುಗ್ರಿವಾಜ್ಞೆ ಮೂಲಕ ಆ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ . ಈಗ ನನ್ನ ವಿರುದ್ಧ ಘೋಷಣೆ ಕೂಗುತ್ತಿರುವ ಕೆಲವು ನಾಯಕರೇ ನನ್ನ ಪರವಾಗಿ ಜೈಕಾರ ಹಾಕಿದ್ದರು. ಇನ್ನು ಸರ್ಕಾರಿ ಕಾಮಗಾರಿಗಳಲ್ಲಿ ದೇಶದಲ್ಲೇ ಮೊದಲ ಬಾರಿಗೆ 1 ಕೋಟಿ ರು.ವರೆಗೆ ಎಸ್‌ಸಿ, ಎಸ್‌ಟಿಗೆ ಶೇ.18ರಷ್ಟುಮೀಸಲಾತಿ ತಂದವನು ನಾನು. ಪ್ರಧಾನಿಗಳಿಗೆ(Prime Minister) ಹೇಳಿ ದೇಶಾದ್ಯಂತ ಯೋಜನೆ ವಿಸ್ತರಿಸಲಿ ಎಂದು ಹೇಳಿದ್ದಾರೆ.